ಮಾನವನ ಬದುಕಿಗೆ ಹಿಡಿದಿರುವ ಗ್ರಹಣ ಬಿಡಿಸುವುದು ಕಷ್ಟ

ಚಿತ್ರದುರ್ಗ, ಜು. 11 – ಸೂರ್ಯ-ಚಂದ್ರನಿಗೆ ಗ್ರಹಣ ಹಿಡಿದರೆ ಬಿಟ್ಟು ಹೋಗುತ್ತದೆ. ಆದರೆ ಮಾನವನ ಬದುಕಿಗೆ ಹಿಡಿದಿರುವ ಗ್ರಹಣ ಬಿಡಿಸುವುದು ಕಷ್ಟ. ಸಮಾಜದಲ್ಲಿರುವ ಅಸಮಾನತೆ, ಅಸ್ಪೃಶ್ಯತೆ ಇವು ಮಾನವ ಬದುಕನ್ನು ಕಾಡುವ ಗ್ರಹಣಗಳಾಗಿವೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಇಲ್ಲಿನ ಶ್ರೀ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠ ಮತ್ತು ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಷನ್ ಸಹಯೋಗದಲ್ಲಿ ಮೊನ್ನಿನ ಗುರು ಪೂರ್ಣಿಮೆಯಂದು ನಡೆದ ಮೂವತ್ತನೇ ವರ್ಷದ ಏಳನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಶರಣರು ಆಶೀರ್ವಚನ ನೀಡಿದರು.

ಗುರು ಪೂರ್ಣಿಮೆ ಹಾಗೂ ಚಂದ್ರಗ್ರಹಣದ ಈ ಅವಧಿಯಲ್ಲಿ ವಿವಾಹ ಮಹೋತ್ಸವ ಮಾಡುತ್ತಿರುವುದು ನಮಗೆ ಎಲ್ಲಾ ರೀತಿಯಲ್ಲೂ ಅಮಂಗಲ ಅಲ್ಲ. ಅದು ಶುಭ ಮಂಗಲ. ಬ್ರಹ್ಮಾಂಡದಲ್ಲಿ ಸೂರ್ಯಗ್ರಹಣ, ಚಂದ್ರಗ್ರಹಣ ಆಗಾಗ ಸಂಭವಿಸುತ್ತವೆ. ಗ್ರಹಣ ಇದೊಂದು ವಿಸ್ಮಯ. ಸೂರ್ಯ ಮತ್ತು ಚಂದ್ರರು ಗ್ರಹಣದ ಬಗ್ಗೆ ಯೋಚಿಸುವುದಿಲ್ಲ. ಕಿರಣಗಳಿಗೆ ಮಾತ್ರ ಗ್ರಹಣ. ಈ ಗ್ರಹಣ ವಿಮೋಚನೆ ಆಗುತ್ತದೆ. ವ್ಯಕ್ತಿಯ ಜೀವನದಲ್ಲಿ ಶೋಷಣೆ ಎನ್ನುವ ಗ್ರಹಣ. ಅದರಲ್ಲಿ ವೇದನೆ ಮತ್ತು ಯಾತನೆ. ಮಾನವ ದೇವಸ್ಥಾನಕ್ಕೆ ಹೋದರೂ ದೇವರಂತಿರುವುದಿಲ್ಲ ಅಲ್ಲಿಯೂ ಕಿರುಕುಳ ಕೊಡುತ್ತಾನೆ ಎಂದರು.

ಭೂಮಿಯ ಮೇಲೆ ಜನ್ಮ ತಾಳಿದಾಗಿ ನಿಂದ ಇಂದಿನವರೆಗೂ ಜನಾಂಗೀಯ ತಾರತಮ್ಯಗಳಿವೆ. ಬುದ್ಧ, ಬಸವಣ್ಣ, ದಾಸರು, ಗಾಂಧೀಜಿ, ಅಂಬೇಡ್ಕರ್ ಮೊದಲಾದವರು ಸಾಮಾಜಿಕ ಅಸಮಾನತೆಯನ್ನು ದೂರ ಮಾಡಲು ಪ್ರಯತ್ನಿಸಿದ್ದರು. ಆಧುನಿಕ ಮಾನವನಲ್ಲಿ ಎಲ್ಲಿಲ್ಲದ ಅಸಮಾನತೆ ಕಾಡುತ್ತಿದೆ. ಮೂರ್ಖತನದ ನಡವಳಿಕೆಗಳು, ಅಪ್ರಬುದ್ಧವಾದ ಅಪಕ್ವವಾದ ಚಿಂತನೆಗಳು ನಡೆಯುತ್ತಿವೆ. ಭಾರತ ದೇಶ ಶಾಂತಿ ಪ್ರಧಾನ ದೇಶ. ಆದರೆ, ದೇಶದ ಶಾಂತಿಯನ್ನು ಕದಡುವ ಕೆಲಸವನ್ನು ಚೀನಾ ಮಾಡುತ್ತಿದೆ. ಈ ಸಂದರ್ಭದಲ್ಲಿ ರಾಷ್ಟ್ರದ ಪ್ರಧಾನಿಗಳು ಗಡಿಭಾಗಕ್ಕೆ ಹೋಗಿ ಸೈನಿಕರಿಗೆ ಧೈರ್ಯ ತುಂಬಿದ್ದಾರೆ. ಇದು ಚೀನಾಕ್ಕೆ ಹಿಡಿದಿರುವ ಗ್ರಹಣ. ಆ ದೇಶ ನಮ್ಮ ಮೇಲೆ ವಿನಾಕಾರಣ ಹಿಂಸಾತ್ಮಕವಾದ ದಾರಿ ತುಳಿದಿದ್ದು ಅದನ್ನು ನಾವೆಲ್ಲ ಖಂಡಿಸಬೇಕೆಂದರು.

ಈ ಸಂದರ್ಭದಲ್ಲಿ ವಿಜಯಕುಮಾರ್ (ವೈಶ್ಯ) ಮತ್ತು ಮೌನಿಕ (ಭೋವಿ) ಅಂತ ರ್ಜಾತಿ ವಿವಾಹ ಸೇರಿದಂತೆ ಐದು ಜೋಡಿ ಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.  

ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಪ್ರೊ. ಸಿ.ಎಂ. ಚಂದ್ರಪ್ಪ, ಪ್ರೊ. ಜ್ಞಾನಮೂರ್ತಿ, ಪೈಲ್ವಾನ್ ತಿಪ್ಪೇಸ್ವಾಮಿ ಮೊದಲಾದವರಿದ್ದರು.

ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ವನಕಲ್ ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿ ಸ್ವಾಗ ತಿಸಿದರು. ಬಸವರಾಜ ಶಾಸ್ತ್ರಿ ನಿರೂಪಿಸಿದರು.

error: Content is protected !!