ವಾಣಿಜ್ಯ ಸ್ಥಳಗಳಲ್ಲಿ ಗೃಹ ಬಳಕೆಯ ಸಿಲಿಂಡರ್ ವ್ಯಾಪಕ ಬಳಕೆ ನಿಲ್ಲಿಸಿ

ದಾವಣಗೆರೆ, ಜು. 30- ಕೋಟ್ಯಂತರ ರೂ. ನಷ್ಟ ಮತ್ತು ಸ್ಫೋಟದ ಅಪಾಯವನ್ನು ಉಂಟು ಮಾಡುವ ವಾಹನಗಳು ಹಾಗೂ ವಾಣಿಜ್ಯ ಸ್ಥಳಗಳಲ್ಲಿ ಗೃಹ ಬಳಕೆಯ ಸಿಲಿಂಡರ್‌ಗಳ ಬಳಕೆಯನ್ನು ನಿಲ್ಲಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಹಕ ದಕ್ಷತಾ ಕಲ್ಯಾಣ ಫೌಂಡೇಶನ್ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಫೌಂಡೇಶನ್ ಕರ್ನಾಟಕ ವಿಭಾಗದ ಮುಖ್ಯಸ್ಥ ಎಸ್. ಚೇತನ್ ಕುಮಾರ್ ಮಾತನಾಡಿ, ವಾಣಿಜ್ಯ ಸಿಲಿಂಡರ್ ಬೆಲೆಗಳು ಸುಮಾರು ನೂರರಷ್ಟು ಹೆಚ್ಚಾಗಿರುವುದರಿಂದ ವಾಣಿಜ್ಯ ಸಂಸ್ಥೆಗಳು ಗೃಹಬಳಕೆಯ 14.2 ಕೆಜಿ ಸಿಲಿಂಡರ್‌ಗಳನ್ನು ಹೆಚ್ಚಾಗಿ ಬಳಸಲು ಪ್ರಾರಂಭಿಸಿವೆ. ಕೆಲವು ಕಡೆಗಳಲ್ಲಿ 14.2 ಕೆಜಿ ಸಿಲಿಂಡರ್‌ಗಳಲ್ಲಿರುವ ಅನಿಲವನ್ನು  19 ಕೆಜಿ ವಾಣಿಜ್ಯ ಸಿಲಿಂಡರ್‌ಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದರು.

ಅದಕ್ಕಾಗಿಯೇ ದೇಶಿಯ ಸಿಲಿಂಡರ್‌ ಗಳು ವಾಹನಗಳಲ್ಲಿ ವ್ಯಾಪಕವಾಗಿ ಬಳಸಲಾರಂಭಿಸಿವೆ. ಇದು ಅತ್ಯಂತ ಗಂಭೀರವಾಗಿದ್ದು, ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ. ಸ್ಫೋಟ, ಬೆಂಕಿ ಅವಘಡ ಸಂಭವಿಸುವ ಭೀತಿ ಎದುರಾಗಿದೆ ಎಂದು ಹೇಳಿದರು.

ಗೃಹಬಳಕೆಯ ಸಿಲಿಂಡರ್‌ಗಳಿಗೆ ಅಧಿಕ ಹಣವನ್ನು ನೀಡಿದರೆ ಕಾಳಸಂತೆಕೋರರಿಗೆ ಸುಲಭವಾಗಿ ಸಿಗುತ್ತಿದ್ದು, ಕೆಲವು ಗ್ಯಾಸ್ ಏಜೆನ್ಸಿಯವರು ತೈಲ ಕಂಪನಿಗಳಿಂದ ಹೆಚ್ಚುವರಿ ಸಿಲಿಂಡರ್ ತೆಗೆದುಕೊಳ್ಳುತ್ತಿರುವುದು ಇಷ್ಟೆಲ್ಲಾ ಅವ್ಯವಹಾರಕ್ಕೆ ಕಾರಣವಾಗಿದೆ ಎಂದರು.

ನಕಲಿ ಗ್ರಾಹಕರ ಹೆಸರಿನಲ್ಲಿ ನೋಂದಣಿ ಮಾಡಿಸಿ, ಕಾಳಸಂತೆ ಸೃಷ್ಠಿ ಮಾಡುತ್ತಿದ್ದಾರೆ. ಒಂದೆಡೆ ಸಿಲಿಂಡರ್ ಬೆಲೆ ಏರಿಕೆಯಿಂದ ಜನಸಾಮಾನ್ಯರು, ಬಡವರು ಇತಿಮಿತಿಯಲ್ಲಿ ಸಿಲಿಂಡರ್ ಬಳಸುತ್ತಿದ್ದಾರೆ. ಸದ್ಯ ಎರಡರಿಂದ ಮೂರು ತಿಂಗಳಿಂದ ಒಂದು ಕುಟುಂಬ ಒಂದು ಸಿಲಿಂಡರ್ ಬಳಸುತ್ತಿದೆ ಎಂದು ಹೇಳಿದರು.

ಸುಲಭವಾಗಿ ಗ್ಯಾಸ್ ರೀಫಿಲ್ಲಿಂಗ್ ದಂಧೆ ನಡೆಸಿ, ಅಲ್ಪ ಮೊತ್ತಕ್ಕೆ ಜೀವ ಪಣಕ್ಕಿಟ್ಟು ವಾಹನಗಳಿಗೆ ಹಾಗೂ ಇತರರಿಗೆ ಎಲ್‌ಪಿಜಿ ಗ್ಯಾಸ್ ತುಂಬಿಸಲಾಗುತ್ತಿದೆ. ಟಲ್ಕು ಪಂಪ್‌ ಸಹಾಯದಿಂದ ಗ್ಯಾಸ್ ಸಿಲಿಂಡರ್ ನಿಂದ ಅತ್ಯಂತ ಸರಳವಾದ ಟ್ಯೂಬ್ ಮೂಲಕ ವಾಹನಕ್ಕೆ ಗ್ಯಾಸ್ ತುಂಬಿಸಲಾಗುತ್ತಿದೆ ಎಂದರು.

ಎಷ್ಟು ಅನಿಲ ತುಂಬಿದೆ ಎಂದು ಅಳೆಯಲು ಎಲೆಕ್ಟ್ರಿಕ್ ಗೇಜ್ (ಎಲೆಕ್ಟ್ರಾ ನಿಕ್ಸ್ ತೂಕ) ಅನ್ನು ಬಳಕೆ ಮಾಡಲಾಗುತ್ತಿದೆ  ಎಂಬುದು ಅತ್ಯಂತ ನಿರ್ಣಾಯಕವಾಗಿದೆ. ವಾಹನಗಳಲ್ಲಿ ಗೃಹ ಬಳಕೆಗಾಗಿ 14.2 ಕೆಜಿ ಎಲ್‌ಪಿಜಿ ಗ್ಯಾಸ್ ತುಂಬಿಸುವುದು ತುಂಬಾ ಅಪಾಯಕಾರಿ ಯಾಗಿದೆ. ಯಾವುದೇ ಕ್ಷಣ ದಲ್ಲಿ ಸಿಲಿಂಡರ್ ಸ್ಫೋಟಗೊಳ್ಳುವ ಸಾಧ್ಯತೆ ಯನ್ನು ತಳ್ಳಿ ಹಾಕುವಂತಿಲ್ಲ ಎಂದು ಹೇಳಿದರು.

ಮನೆಯ ಸಿಲಿಂಡರ್‌ಗಳನ್ನು ಅಕ್ರಮ ವಾಗಿ ಬಳಸಿದರೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಸರ್ಕಾರ ಈ ಬಗ್ಗೆ ಗಮನಹರಿಸಬೇಕೆಂದು ಮನವಿ ಮಾಡಿದರು.

ಇಂತಹ ಘಟನೆಗಳಿಂದ ನಾಗರಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಅಕ್ರಮ ರೀಫಿಲ್ಲಿಂಗ್ ಘಟನೆಗಳು ನಡೆಯು ತ್ತಿವೆ. ಅದು ಆಗುವ ಮುನ್ನವೇ ಸರ್ಕಾರ ಮತ್ತು ಆಡಳಿತ ಎಚ್ಚೆತ್ತುಕೊಳ್ಳುವುದು ಅವಶ್ಯಕ. ರಾಜ್ಯದಲ್ಲಿನ ವಿವಿಧೆಡೆಯ ಸ್ಫೋಟಕ ಪ್ರಕರಣಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹುಬ್ಬಳ್ಳಿ ವಿಭಾಗದ ಮುಖ್ಯಸ್ಥ ಅರುಣ್ ಮಾನಗಾಂವೆ ಉಪಸ್ಥಿತರಿದ್ದರು.

error: Content is protected !!