ರಾಜಕೀಯದಲ್ಲಿ ಈಗಾಗಲೇ ಗೆದ್ದಿದ್ದೇನೆ ಎಂದ ಜಿ.ಬಿ. ವಿನಯ್ ಕುಮಾರ್

ರಾಜಕೀಯದಲ್ಲಿ ಈಗಾಗಲೇ ಗೆದ್ದಿದ್ದೇನೆ ಎಂದ ಜಿ.ಬಿ. ವಿನಯ್ ಕುಮಾರ್

 ದಾವಣಗೆರೆ,ಮೇ 7- ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕ್ರಾಂತಿ  ಆಗಿದೆ. ನಾನು ಸ್ವಾಭಿಮಾನಿ ಯಾಗಿ ಹೋರಾಟ ಮಾಡಿದ್ದೇನೆ. ಇಂದು ನನ್ನ ಹಕ್ಕು ಮತ ಚಲಾಯಿಸಿದ ಹೆಮ್ಮೆ ನನಗಿದೆ ಎಂದು ಪಕ್ಷೇತರ ಅಭ್ಯರ್ಥಿ ಜಿ. ಬಿ‌. ವಿನಯ್ ಕುಮಾರ್ ಹೇಳಿದರು.

ಸಮೀಪದ ಕರೂರು ಗ್ರಾಮದ ಅಂಗನವಾಡಿ‌ ಕೇಂದ್ರದಲ್ಲಿ‌ ಮತಚಲಾಯಿಸಿ ಮಾತನಾಡಿದ ಅವರು, ಜೀವನದ ಅತ್ಯಂತ ಸಂತೋಷದ ದಿನ ಇದಾಗಿದೆ. ಪ್ರಜಾಪ್ರಭುತ್ವದ ಗೆಲುವಿ ಗಾಗಿ ಹೋರಾಟ ನನ್ನದು. ಸಾಮಾನ್ಯ ಕುಟುಂಬದಿಂದ ಬಂದಿರುವ ನಾನು, ದಾವಣಗೆರೆಯಂತಹ ಮಹಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದೇನೆ. 

ಯಾವ ರಾಜಕೀಯ ಹಿನ್ನೆಲೆ ನನಗಿಲ್ಲ. ಆದರೂ ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಚರಿಸಿ ಅಲೆಯೆಬ್ಬಿಸಿದ್ದೇನೆ. ಒಳ್ಳೆಯ ರಾಜಕಾರಣ ಮಾಡಬೇಕು ಎಂಬ ನಂಬಿಕೆಯೊಂದಿಗೆ ಸ್ಪರ್ಧೆ ಮಾಡಿದ್ದೇನೆ ಹಾಗೂ ಅದನ್ನೇ ಪಾಲಿಸಿಕೊಂಡು ಬರುತ್ತಿದ್ದೇನೆ ಎಂದರು. ಚುನಾವಣೆಯಲ್ಲಿ ಯಾವ ಆಸೆ, ಆಮಿಷಗಳನ್ನು ನೀಡದೇ ಸ್ವಾಭಿಮಾನಿಯಾಗಿ ಜನರ ಬಳಿಗೆ ಬಂದಿದ್ದೇನೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.   ಜನರೂ ಕೂಡ ಜಾಗೃತರಾಗಿದ್ದಾರೆ. ಈ ಚುನಾವಣೆಯಲ್ಲಿ ಹಣದ ಹೊಳೆ ಹರಿಸಿದವರು ಸೋಲಬೇಕು. ನ್ಯಾಯಯುತವಾಗಿ ಚುನಾವಣೆ ಮಾಡುವವರಿಗೆ ಜನ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ನನ್ನ ಕ್ರಮಸಂಖ್ಯೆ ಕೊನೆಯಲ್ಲಿ‌ ಬರುತ್ತದೆ. ಈ ಬಗ್ಗೆ ಜನರಿಗೆ ತಿಳಿಸಿದ್ದೇನೆ. ಇವಿಎಂ ಬಗ್ಗೆ ಇನ್ನೂ ಕೆಲವರಲ್ಲಿ ಗೊಂದಲ ಉಂಟಾಗುವ  ಸಂಭವವಿರುತ್ತದೆ. ಅಂತವರಿಗೆ ಸಹಾಯ ಮಾಡಬೇಕು. ಮುಂದಿನ ದಿನಗಳಲ್ಲಿ ಆನ್ ಲೈನ್ ಮತದಾನ ಪ್ರಕ್ರಿಯೆ ನಡೆಸಬೇಕು ಎಂಬುದು ನನ್ನ ಸಲಹೆ ಎಂದು ತಿಳಿಸಿದರು.

error: Content is protected !!