ಪಂಚಮಸಾಲಿ ಮುಖಂಡರು ತಟಸ್ಥರಾಗಿರಲು ಒತ್ತಾಯ

ದಾವಣಗೆರೆ, ಏ.12- ಜಿಲ್ಲೆಯ ಪಂಚಮಸಾಲಿ ನಾಯಕರು ಲೋಕಸಭಾ ಚುನಾವಣೆಯಲ್ಲಿ ತಟಸ್ಥರಾಗಿ ಇರುವಂತೆ ಪಂಚಮಸಾಲಿ ಸ್ವಾಭಿಮಾನಿ ಯುವ ಪಡೆ ಒತ್ತಾಯಿಸಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವಾಭಿಮಾನಿ ಪಡೆಯ  ಕಾರ್ಯದರ್ಶಿ ಮಂಜುನಾಥ ಸುಗ್ಗೇರ್, ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಪಂಚಮಸಾಲಿ ಮುಖಂಡರನ್ನು ಕಡೆಗಣಿಸಿವೆ ಎಂದು ಆರೋಪಿಸಿದರು.

ಮಹಿಮಾ ಪಟೇಲ್, ಹೆಚ್.ಎಸ್. ಶಿವಶಂಕರ್, ತೇಜಸ್ವಿ ಪಟೇಲ್, ಹೆಚ್.ಎಸ್. ನಾಗರಾಜ್ ಅವರುಗಳನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ನಡೆಸಿಕೊಂಡ ರೀತಿಯನ್ನು ನೋಡಿದರೆ ಈ ಮುಖಂಡರು ಈ ಬಾರಿಯ ಚುನಾವಣೆಯಲ್ಲಿ ತಟಸ್ಥರಾಗಿರುವುದೇ ಸೂಕ್ತ ಎಂದು ಹೇಳಿದರು. ಚುನಾವಣೆ ಸಂದರ್ಭದಲ್ಲಿ ನಿಮ್ಮನ್ನು ಸಂಪರ್ಕಿಸುವ ಮುಖಂಡರು ಮತ್ತೆ ನಿರ್ಲಕ್ಷಿಸುತ್ತಾರೆ. ಈ ಹಿನ್ನೆಲೆಯಲ್ಲಿ ಯಾರ ಪರವಾಗಿಯೂ ಮತ ಕೋರಬಾರದು. ಮನೆಯಲ್ಲಿದ್ದು ಗೌರವಿಸಿಕೊಳ್ಳಿ ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಯುವ ಪಡೆಯ ಅಧ್ಯಕ್ಷ ಚನ್ನಬಸಪ್ಪ ಚಿಕ್ಕಮೇಗಳಗೆರೆ, ಶರಣಪ್ಪ ಚಿಕ್ಕಮೇಗಳಗೆರೆ ಉಪಸ್ಥಿತರಿದ್ದರು.

error: Content is protected !!