ನ್ಯಾಮತಿ ಬಳಿಯ ರಸ್ತೆ ಅಪಘಾತದಲ್ಲಿ ಮೂವರ ಸಾವು

ನ್ಯಾಮತಿ, ಏ. 11- ತಾಲ್ಲೂಕಿನ ಚಿನ್ನಿಕಟ್ಟೆ ಗ್ರಾಮದ ಬಳಿ ಶಿವಮೊಗ್ಗ-ಶಿಕಾರಿಪುರ ರಸ್ತೆಯಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಸಾವಿಗೀಡಾಗಿದ್ದು, ಮೂವರು ಗಂಭೀರ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿರುವ ಘಟನೆ ನಡೆದಿದೆ.

ಶಿವಮೊಗ್ಗ ತಾಲ್ಲೂಕು ಹರಮಘಟ್ಟ ಗ್ರಾಮದ ಆರು ಜನರು ಶಿಕಾರಿಪುರದ ಕಡೆ ಓಮ್ನಿ ವಾಹನದಲ್ಲಿ ಪ್ರಯಾಣಿಸುತ್ತಿದ್ದು, ಹಾನಗಲ್‌ನಿಂದ ಶಿವಮೊಗ್ಗ ಕಡೆ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಮತ್ತು ಓಮ್ನಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಓಮಿನಿ ಕಾರಿನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. 

ಹರಮಘಟ್ಟ  ಗ್ರಾಮದ ನಂಜುಂಡಪ್ಪನವರಿಗೆ ಪಾರ್ಶುವಾಯು ಆಗಿದ್ದು, ರೋಗ ನಿವಾರಣೆಗೆ ಶಿಕಾರಿಪುರದ ಹತ್ತಿರದ ಹಳ್ಳಿಗೆ ಔಷಧಿ ತರಲು ಹೋಗುವಾಗ ಈ ದುರ್ಘಟನೆ ನಡೆದಿದೆ. 

ಓಮಿನಿಯಲ್ಲಿದ್ದ ದೇವರಾಜ್ (27), ನಂಜುಂಡಪ್ಪ (83), ಸೂರಗೊಂಡನಕೊಪ್ಪ ಗ್ರಾಮದ ರಾಕೇಶ್ (30) ಸಾವಿಗೀಡಾದ ನತದೃಷ್ಟರು.  ಬಸ್‍ನಲ್ಲಿರುವವರಿಗೆ ಸಣ್ಣಪುಟ್ಟ ಪೆಟ್ಟಾಗಿವೆ.

ಘಟನಾ ಸ್ಥಳಕ್ಕೆ ಅಡಿಷನಲ್  ಎಸ್‍ಪಿ ವಿಜಯಕುಮಾರ, ಸಂತೋಷ್, ಚನ್ನಗಿರಿ ಡಿವೈಎಸ್ಪಿ ಪ್ರಶಾಂತ್ ಮನ್ನೋಳಿ,  ನ್ಯಾಮತಿ ಪಿಐ ಎನ್.ಹೆಚ್.ರವಿ ಹಾಗೂ ಪೋಲಿಸ್ ಸಿಬ್ಬಂದಿ ವರ್ಗದವರು ಭೇಟಿ ನೀಡಿದ್ದರು. 

error: Content is protected !!