ಅನ್ವೇಷಕರು ಆರ್ಟ್ ಫೌಂಡೇಶನ್‌ನಿಂದ ಬೇಸಿಗೆ ಶಿಬಿರ

ದಾವಣಗೆರೆ, ಮಾ. 22- ಅನ್ವೇಷಕರು ಆರ್ಟ್ ಫೌಂಡೇಶನ್ ಮತ್ತು ಶ್ರೀ ಸೋಮೇಶ್ವರ ವಿದ್ಯಾಲಯದ ಸಹಕಾರದೊಂದಿಗೆ ಏಪ್ರಿಲ್ 12 ರಿಂದ ಮೇ 5 ರವರೆಗೆ ಪ್ರತಿ ದಿನ ಬೆಳಿಗ್ಗೆ 9.30 ರಿಂದ ಸಂಜೆ 5 ರವರೆಗೆ ನಗರದ ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ 8 ನೇ ವರ್ಷದ ಬೇಸಿಗೆ ಶಿಬಿರವನ್ನು ಆಯೋಜನೆ ಮಾಡಲಾಗಿದೆ ಎಂದು ಶಿಬಿರದ ನಿರ್ದೇಶಕ ಎಸ್.ಎಸ್. ಸಿದ್ಧರಾಜು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

7 ರಿಂದ 16 ವರ್ಷದೊಳಗಿನ ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದ್ದು, ಮಕ್ಕಳಲ್ಲಿ ಮುಂದಾಳತ್ವ, ಕಾರ್ಯದಕ್ಷತೆ, ಸ್ವಾವಲಂಬನೆ ಹಾಗೂ ಕುಶಲತೆ ಹೆಚ್ಚಿಸಲು ಈ ಶಿಬಿರ ಸಹಕಾರಿಯಾಗಿದೆ ಎಂದು ಹೇಳಿದರು.

ಹಾಡು ಮತ್ತು ನೃತ್ಯ, ಜಾನಪದ ಚಿತ್ರಕಲೆ, ಜಿಮ್ನಾಸ್ಟಿಕ್, ಮಣ್ಣಿನಲ್ಲಿ ಕಲೆ, ನಾಟಕ, ಗೊಂಬೆ ತಯಾರಿಕೆ, ಒರಿಗಾಮಿ ಗಣಿತ, ಹಳೆಗನ್ನಡ ಕಾವ್ಯ ವಾಚನ, ಆಕಾಶ ವೀಕ್ಷಣೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಪರಿಚಯ ಹಾಗೂ ಪ್ರಾತ್ಯಕ್ಷಿಕೆ ಈ ಶಿಬಿರದಲ್ಲಿ ನಡೆಯಲಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪುರಂದರ್ ಲೋಕಿಕೆರೆ, ಸಿದ್ಧಪ್ಪ ಚನ್ನಗಿರಿ, ಬುರುಡಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!