ಕಾರ್ಯಕರ್ತರನ್ನು ಮರೆತ ಸಿಎಂ : ದುಗ್ಗಪ್ಪ

ದಾವಣಗೆರೆ, ಮಾ. 20 – ರಾಜ್ಯ ಕಾಂಗ್ರೆಸ್ ಪಕ್ಷ ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಮಾಜಿ ಹಾಗೂ ಹಾಲಿ ಶಾಸಕರು, ಒಮ್ಮೆ ಅಧಿಕಾರ ಪಡೆದವರು, ಅಧಿಕಾರದಲ್ಲಿರುವವರ ಹೆಸರುಗಳೇ ಹೆಚ್ಚಾಗಿವೆ. ಪಕ್ಷಕ್ಕಾಗಿ ಸುಮಾರು 50 ವರ್ಷಗಳಿಂದ ಸೇವೆ ಸಲ್ಲಿಸಿರುವ ನಿಷ್ಠಾವಂತ ಕಾರ್ಯಕರ್ತರ ಹೆಸರುಗಳು ಕಣ್ಮರೆಯಾಗಿವೆ ಎಂದು ಕೆಪಿಸಿಸಿ ಸದಸ್ಯ ಹೆಚ್. ದುಗ್ಗಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾರ್ಯಕರ್ತರೇ ಪಕ್ಷದ ಬೆನ್ನೆಲುಬು. ಈ ಹಿಂದೆ ಕಾಂಗ್ರೆಸ್‌ ಪಕ್ಷದ ಹೀನಾಯ ಸೋಲಿಗೆ ಕಾರ್ಯಕರ್ತರನ್ನು ಕಡೆಗಣಿಸಿದ್ದೇ ಕಾರಣವಾಗಿದೆ. ಈಗಲೂ ಕಾರ್ಯಕರ್ತರನ್ನು ಕಡೆಗಣಿಸಿದರೆ ಮುಂಬರುವ ಚುನಾವಣೆಯನ್ನು ಎದುರಿಸುವುದು ಕಷ್ಟವಾಗುತ್ತದೆ. ಪಕ್ಷದಲ್ಲಿ ವಂಶ-ಪರಂಪರೆ ಸಂಸ್ಕೃತಿ ಈಗಲೂ ಹೆಚ್ಚಾಗುತ್ತಿದೆ. ಅಧಿಕಾರದಲ್ಲಿದ್ದವರ ಮಕ್ಕಳು, ಅಳಿಯ, ಮೊಮ್ಮಕ್ಕಳು ಹೀಗೆ ಅವರ ವಂಶದವರಿಗೆ ಟಿಕೆಟ್ ಕೊಡಿಸಲು ಬಹುತೇಕ ಪೈಪೋಟಿ ನಡೆಯುತ್ತಿದೆ ಎಂದು ಅವರು ದೂರಿದ್ದಾರೆ.

ಪಕ್ಷ ಅಧಿಕಾರದಲ್ಲಿ ಇಲ್ಲದ ಸಮಯದಲ್ಲಿ ದಾವಣಗೆರೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬದ ಅಮೃತ ಮಹೋತ್ಸವವನ್ನು ಸಿದ್ಧರಾಮೋತ್ಸವವನ್ನಾಗಿ ಮಾಡಿ, ದಾವಣಗೆರೆ ಕಾರ್ಯಕರ್ತರು ಹತ್ತಾರು ಲಕ್ಷ ಜನರನ್ನು ಸೇರಿಸಿದ್ದರು. ರಾಜ್ಯದ 7 ಕೋಟಿ ಜನ ಮತ ಹಾಕಿ ಗೆಲ್ಲಿಸಿ, ಪಕ್ಷವನ್ನು ಸಿದ್ದರಾಮಯ್ಯನವರನ್ನು ಅಧಿಕಾರಕ್ಕೆ ತರಲು ಈ ಸಿದ್ದರಾಮೋತ್ಸವವೇ ಕಾರಣವಾಯಿತು. ಕಾಂಗ್ರೆಸ್ ಪಕ್ಷ ಹೀನಾಯ ಸ್ಥಿತಿಯಲ್ಲಿದ್ದಾಗ   ಸಿದ್ದರಾಮೋತ್ಸವ ಕಾರ್ಯಕ್ರಮ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿತು. ಆದರೆ ಅವರು ಅಧಿಕಾರಕ್ಕೆ ಬಂದ ಮೇಲೆ ತಮ್ಮನ್ನು ಅಧಿಕಾರಕ್ಕೆ ತಂದ ದಾವಣಗೆರೆ ಕಾರ್ಯಕರ್ತರನ್ನೇ ಮರೆತಿದ್ದಾರೆ ಎಂದು ಅಸಹನೆ ವ್ಯಕ್ತಪಡಿಸಿದ್ದಾರೆ.

error: Content is protected !!