ಕ್ರೀಡೆಯಿಂದ ಸದೃಢ ಆರೋಗ್ಯ ಸಾಧ್ಯ: ಶಾಸಕ ಬಸವಂತಪ್ಪ

ಕ್ರೀಡೆಯಿಂದ ಸದೃಢ ಆರೋಗ್ಯ ಸಾಧ್ಯ: ಶಾಸಕ ಬಸವಂತಪ್ಪ

ದಾವಣಗೆರೆ, ಜೂ. 17- ಆಟೋಟಗಳಲ್ಲಿ ಭಾಗವಹಿಸುವುದರಿಂದ ದೇಹದ ಸರ್ವಾಂಗೀಣ ಬೆಳವಣಿಗೆ ಜೊತೆಗೆ ಸದೃಢ ಆರೋಗ್ಯ ಸಾಧ್ಯ ಎಂದು ಶಾಸಕ ಕೆ.ಎಸ್.ಬಸವಂತಪ್ಪ  ಹೇಳಿದರು.

ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ತ್ಯಾವಣಗಿ ಗ್ರಾಮದಲ್ಲಿ ಮದಕರಿ ಕ್ರಿಕೆಟರ್ಸ್ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಯುವಕರು ಸದೃಢರಾಗಲು ಕ್ರೀಡೆಗಳು ಅವಶ್ಯಕ. ಆದರೆ ಇಂದಿನ ಮೊಬೈಲ್ ಹಾವಳಿಯಿಂದಾಗಿ ಯುವಕರು ಕ್ರೀಡೆಗಳಿಂದ ದೂರ ಉಳಿದು, ಮಾನಸಿಕ ಮತ್ತು ದೈಹಿಕವಾಗಿ ದೌರ್ಬಲ್ಯಕ್ಕೊಳಗಾಗುತ್ತಿದ್ದಾರೆ. ಆದ್ದರಿಂದ ಯುವಕರು ಕ್ರೀಡೆಗಳಲ್ಲಿ ಹೆಚ್ಚು ಭಾಗವಹಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಗೋವಿಂದಸ್ವಾಮಿ, ಪ್ರದೀಪ್, ಹರೀಶ್, ಮಹಾಬ ಲೇಶ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ, ಪರಿಶೀಲನೆ : ತ್ಯಾವಣಗಿ ಗ್ರಾಮದಲ್ಲಿರುವ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ದಿಢೀರ್ ಭೇಟಿ, ಪರಿಶೀಲನೆ ನಡೆಸಿದರು.

ಪ್ರತಿ ನಿತ್ಯ ಸರ್ಕಾರದ ಮೆನು ಪ್ರಕಾರ ಊಟ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಬಗ್ಗೆ ಮಾಹಿತಿ ಪಡೆದರು. 

ರಾಜ್ಯದಲ್ಲಿರುವ ಕೆಲವು ವಸತಿ ಶಾಲೆಗಳಲ್ಲಿ ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ವಸತಿ ಶಾಲೆಯಲ್ಲಿರುವ ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನಿಗಾ ವಹಿಸಬೇಕು ಎಂದು ಸೂಚನೆ ನೀಡಿದರು.

 ಕಳಪೆ ಗುಣಮಟ್ಟದ ತರಕಾರಿ, ಆಹಾರ ಪದಾರ್ಥ ಬಳಸದೇ ಪ್ರತಿನಿತ್ಯ ತಾಜಾ ತರಕಾರಿ, ಗುಣಮಟ್ಟದ ಆಹಾರ ಪದಾರ್ಥಗಳನ್ನು ಬಳಸಿ ಆಹಾರ ತಯಾರಿಸಬೇಕು ಎಂದು ವಸತಿ ಶಾಲೆಯ ಮೇಲ್ವಿಚಾರಕರು ಮತ್ತು ಅಡುಗೆ  ಸಿಬ್ಬಂದಿಗಳಿಗೆ ಸೂಚನೆ ನೀಡಿದರು.

ರಾಜ್ಯ ಸರ್ಕಾರ ವಸತಿ ಶಾಲೆಗಳ ಮಕ್ಕಳ ಶಿಕ್ಷಣ ಮತ್ತು  ಆರೋಗ್ಯದ ದೃಷ್ಟಿಯಿಂದ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ದುರುಪಯೋಗ ಮಾಡಿಕೊಳ್ಳದಂತೆ ನಿಮ್ಮ ಮನೆಯ ಮಕ್ಕಳಿಗೆ ಯಾವ ರೀತಿಯಲ್ಲಿ ಪಾಲನೆ, ಪೋಷಣೆ ಮಾಡಿದಂತೆ ಈ ಮಕ್ಕಳಿಗೂ ಪಾಲನೆ, ಪೋಷಣೆ ಮಾಡಬೇಕು. ಕ್ಷೇತ್ರದ ವ್ಯಾಪ್ತಿಯ ವಸತಿ  ಶಾಲೆಗಳ ಮಕ್ಕಳಿಗೆ ತೊಂದರೆ ನೀಡುವುದು, ಕಳಪೆ ಗುಣಮಟ್ಟದ ಆಹಾರ ಕೊಡುವುದು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

error: Content is protected !!