ರಾಮೇಶ್ವರ ವಾಲ್ಮೀಕಿ ಅಮಾನುಷ ಹತ್ಯೆ ಖಂಡಿಸಿ ಪ್ರತಿಭಟನೆ

ರಾಮೇಶ್ವರ ವಾಲ್ಮೀಕಿ ಅಮಾನುಷ ಹತ್ಯೆ ಖಂಡಿಸಿ ಪ್ರತಿಭಟನೆ

ದಾವಣಗೆರೆ, ಮೇ 24- ರಾಜಸ್ಥಾನದಲ್ಲಿ ವಾಲ್ಮೀಕಿ ಸಮುದಾಯದ ರಾಮೇಶ್ವರ ವಾಲ್ಮೀಕಿ ಎಂಬ ಯುವಕನನ್ನು ಲಿಕ್ಕರ್ ಮಾಫಿಯಾದವರು ಅನೈತಿಕವಾಗಿ, ಅಕ್ರಮವಾಗಿ ಬಂಧಿಸಿಟ್ಟು, ಅಮಾ ನುಷವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿ ತಾಲ್ಲೂಕು ನಾಯಕ ಸಮಾಜ, ಎಲ್.ಜಿ. ಹಾವನೂರು ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಅಂಬೇಡ್ಕರ್ ವೃತ್ತ, ಹಳೇ ಪಿ.ಬಿ. ರಸ್ತೆ ಮಾರ್ಗವಾಗಿ ಉಪ ವಿಭಾಗಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಬಂದು ಉಪವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಹಂತಕರನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸ ಬೇಕು. ನೈತಿಕ ಹೊಣೆ ಹೊತ್ತು ಸಮಾಜ ಕಲ್ಯಾಣ ಸಚಿವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡ ಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಇದೇ ವೇಳೆ ಮಾತನಾಡಿದ ನಾಯಕ ಸಮಾ ಜದ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್ ಅವರು, ರಾಜಸ್ಥಾನದ ಜುಂಜುನು ಜಿಲ್ಲೆಯ ಗ್ರಾಮವೊಂದರ 27 ವರ್ಷದ ದಲಿತ ಯುವಕ ರಾಮೇಶ್ವರ ವಾಲ್ಮೀಕಿಯನ್ನು ಅದೇ ಗ್ರಾಮದ ಲಿಕ್ಕರ್ ಮಾಫಿಯಾದ ಗುಂಪು ಅಪಹರಿಸಿ, ಅಜ್ಞಾತ ಸ್ಥಳವೊಂದರಲ್ಲಿ ಕೈ ಕಾಲುಗಳನ್ನು ಕಟ್ಟಿ, ಅಮಾನವೀಯವಾಗಿ ಪೈಶಾಚಿಕವಾಗಿ ಹಲ್ಲೆ ಮಾಡಿ, ಕಡೆಗೆ ಆತನನ್ನು ಕೊಂದಿರುವ ಕೃತ್ಯದ ದೃಶ್ಯಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿ ಬಿಟ್ಟಿದ್ದಾರೆ ಎಂದರು.

ರಾಮೇಶ್ವರ ವಾಲ್ಮೀಕಿ ಮೇಲೆ ಹಲ್ಲೆ, ಹತ್ಯೆ ಮಾಡುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿರುವ ದುಷ್ಕರ್ಮಿಗಳ ಗುಂಪು ನಂತರ ಮೃತಪಟ್ಟ ರಾಮೇಶ್ವರನ ಶವವನ್ನು ಆತನ ಮನೆಯ ಮುಂದೆ ಬಿಸಾಕಿ ಹೋಗಿದೆ. ಮಾನವೀಯತೆಯನ್ನೇ ಮರೆತು, ಪೈಶಾಚಿಕ ಕೃತ್ಯ ಎಸಗಿರುವ ಅಲ್ಲಿನ ಲಿಕ್ಕರ್ ಮಾಫಿಯಾದ ರೌಡಿಗಳನ್ನು ಮಟ್ಟ ಹಾಕುವ ಕೆಲಸವನ್ನು ರಾಜಸ್ಥಾನ ಹಾಗೂ ಕೇಂದ್ರ ಸರ್ಕಾರಗಳು ಮೊದಲು ಮಾಡಬೇಕು. ಪರಿಶಿಷ್ಟ ಪಂಗಡದ ಯುವಕನ ಮೇಲೆ ನಿರ್ಭಯವಾಗಿ ಹಲ್ಲೆ ಮಾಡಿ, ಹತ್ಯೆಗೈದವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕೆಂದು ಒತ್ತಾಯಿಸಿದರು.

ರಾಜಸ್ಥಾನ ಸರ್ಕಾರ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಮೃತನ ಕುಟುಂಬಕ್ಕೆ ಕನಿಷ್ಟ ಮೂರು ಕೋಟಿ ರೂ. ಪರಿಹಾರ ನೀಡಬೇಕು. ಮೃತನ ಕುಟುಂಬಕ್ಕೆ ಸರ್ಕಾರಿ ನೌಕರಿಯನ್ನು, ಜೀವನ ಭದ್ರತೆಯನ್ನು, ಸುರಕ್ಷತೆಯನ್ನು ಕಲ್ಪಿಸಬೇಕು ಎಂದರು.

ನಾಯಕ ಸಮಾಜದ ಮುಖಂಡ ಹದಡಿ ಹಾಲಪ್ಪ ಮಾತನಾಡಿ, ರಾಜಸ್ಥಾನದಲ್ಲಿ ರಾಮೇಶ್ವರ ವಾಲ್ಮೀಕಿ ಅವರ ಕೈ-ಕಾಲುಗಳನ್ನು ಕೋಲಿಗೆ ಕಟ್ಟಿಅಮಾನುಷವಾಗಿ ಹತ್ಯೆ ಮಾಡಿರುವುದು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಾಜನಹಟ್ಟಿ ರಾಜು, ಆಲೂರು ಪರಶುರಾಮ, ಕಡಾರನಾಯಕನಹಳ್ಳಿ ತಿಪ್ಪಣ್ಣ, ಗಂಡುಗಲಿ ಆಸ್ತಾಫನಹಳ್ಳಿ, ಯಲೋದಹಳ್ಳಿ ರವಿಕುಮಾರ್, ಕರಿಯಪ್ಪ ನಾಯಕ, ಜಿಕ್ರಿಯಾ, ಶಿವಪುರ ಕೃಷ್ಣಮೂರ್ತಿ, ಜಮೀರ್ ಬಾಷಾ, ದಯಾನಂದ, ಆರನೇಕಲ್ಲು ಹನುಮಂತಪ್ಪ, ಶ್ಯಾಗಲೆ ಸತೀಶ್, ತ್ಯಾವಣಿಗೆ ಜ್ಞಾನೇಶ್, ರಾಜನಹಟ್ಟಿ ರಾಜು, ಗೌರವ್ವನಹಳ್ಳಿ ಸತೀಶ್ ಮತ್ತಿತರರು ಭಾಗವಹಿಸಿದ್ದರು. 

error: Content is protected !!