66 ಹಳ್ಳಿಯ ಒಡತಿ ಶ್ರೀ ಊರಮ್ಮ ದೇವಿಯ ಜಾತ್ರಾ ಮಹೋತ್ಸವ

66 ಹಳ್ಳಿಯ ಒಡತಿ ಶ್ರೀ ಊರಮ್ಮ ದೇವಿಯ ಜಾತ್ರಾ ಮಹೋತ್ಸವ

ಹರಪನಹಳ್ಳಿ ತಾಲ್ಲೂಕು ಹಲುವಾಗಲು ಮತ್ತು ಕಣವಿ ಗ್ರಾಮಗಳಲ್ಲಿ ಸಂಭ್ರಮ 

ಹರಪನಹಳ್ಳಿ, ಮೇ 14- ತಾಲ್ಲೂಕಿನ ಹಲುವಾಗಲು ಮತ್ತು ಕಣವಿ ಗ್ರಾಮಗಳ ಗ್ರಾಮ ದೇವತೆ, 66 ಹಳ್ಳಿಯ ಒಡತಿ ಶ್ರೀ ಊರಮ್ಮ ದೇವಿಯ ಜಾತ್ರಾ ಮಹೋತ್ಸವ  ಐದು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.

ಇಂದು ಬೆಳಿಗ್ಗೆ 8 ಗಂಟೆಗೆ ದೇವಿಯ ಅಲಂಕಾರ, ಪುಷ್ಪಾರ್ಚನೆ, 9 ಗಂಟೆಗೆ ದೃಷ್ಟಿ ಇಡುವುದು, ಮಾಂಗಲ್ಯಧಾರಣೆ, ಪೂಜೆ, 11 ಗಂಟೆಗೆ ಉಡಿ ತುಂಬುವ ಕಾರ್ಯಕ್ರಮ, ರಾತ್ರಿ 10 ಗಂಟೆಗೆ ಗ್ರಾಮದೊಳಗೆ ದೇವಿಯು ಸಕಲ ವಾದ್ಯಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಚೌತಿಮನೆ ಕಟ್ಟಿಗೆ ಪ್ರತಿಷ್ಟಾಪನೆಗೊಳ್ಳುವ ಕಾರ್ಯಕ್ರಮ ನೆರವೇರಿತು.

ನಾಳೆ ದಿನಾಂಕ 15ರ ಬುಧವಾರ ಬೆಳಿಗ್ಗೆ 6 ಗಂಟೆಗೆ ಗ್ರಾಮದ ಸುತ್ತ ಚರಗ ಹೊಡೆಯುವುದು, ದೇವಿಯ ಸನ್ನಿಧಿಯಲ್ಲಿ ರಾಣಿಗರಿಂದ ವಿವಿಧ ವಿನೋದಾವಳಿಗಳು, ಶ್ರೀದೇವಿಯ ಗುಣಗಾನ, ಹಾಸ್ಯಗಾರರಿಂದ ನರ್ತನ, ಸಂಜೆ 4 ಗಂಟೆಗೆ ರೈತರಿಗೆ ಹುಲುಸು ಕೊಡುವುದು, ರಾತ್ರಿ 9 ಗಂಟೆಗೆ ರಸಮಂಜರಿ ಕಾರ್ಯಕ್ರಮ ಜರುಗುವುದು.

ದಿನಾಂಕ 16 ರಂದು ಶ್ರೀದೇವಿಯ ಸ್ತೋತ್ರ, ಮಧ್ಯಾಹ್ನ 3 ಗಂಟೆಗೆ ಬನ್ನಿ ಮಂಟಪಕ್ಕೆ ದೊಡ್ಡ ಬಂಡಿ ರಥದ ಮೂಲಕ ಸಕಲ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಗಡಿ ಜಾತ್ರೆಗೆ ಹೋಗುವುದು, ನಂತರ ಬನ್ನಿ ಮಂಟಪದಲ್ಲಿ ಶ್ರೀದೇವಿಯು ಗ್ರಾಮಸ್ಥರಿಗೆ ಅಭಯ ಕೊಡುವುದು.

ದಿನಾಂಕ 17 ರಂದು ಬೆಳಿಗ್ಗೆ 9 ಗಂಟೆಗೆ ಶ್ರೀದೇವಿಗೆ ಪುಷ್ಪಾರ್ಚನೆ ಮತ್ತು ಮಹಾ ಮಂಗಳಾರತಿ ನೆರವೇರುವುದು.

ದೇವಿಗೆ ಮುಡಿಪು, ಕಾಣಿಕೆ ಸಲ್ಲಿಸುವವರು ಊರಮ್ಮದೇವಿ ಸಮಿತಿಯವರಿಗೆ ಒಪ್ಪಿಸಿ, ರಸೀದಿ ಪಡೆಯಬೇಕು ಎಂದು ಜಾತ್ರಾ ಸಮಿತಿಯವರು ತಿಳಿಸಿದ್ದಾರೆ. 

ಗ್ರಾಮದಲ್ಲಿ 9 ವರ್ಷಗಳ ನಂತರ ನಡೆಯು ತ್ತಿರುವ ಊರಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಎಲ್ಲಾ ರೀತಿಯ ಸಿದ್ದತೆ ಕೈಗೊಳ್ಳಲಾಗಿದೆ, ಗ್ರಾಮದ ನಿಜಲಿಂಗಪ್ಪ ರಂಗಮಂದಿರದಲ್ಲಿ ಬೃಹತ್ ಆಕಾರದ ಮಹಾದ್ವಾರ ನಿರ್ಮಿಸಲಾಗಿದ್ದು, ನೋಡುಗರ ಗಮನ ಸೆಳೆಯುತ್ತಿದೆ, ಗ್ರಾಮವು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಊರಲ್ಲಿ ಸಂಭ್ರಮ ಮನೆ ಮಾಡಿದೆ.

ಹೀಗೆ ಹಲುವಾಗಲು, ಕಣವಿ, ಗರ್ಭಗುಡಿ ಸೇರಿದಂತೆ, ಸುತ್ತಮುತ್ತಲ ಗ್ರಾಮಸ್ಥರು ಅತ್ಯಂತ ಸಂಭ್ರಮದಿಂದ ಜನಪದ ಸೊಗಡಿನ ಊರಮ್ಮದೇವಿ ಜಾತ್ರೆಯನ್ನು ಆಚರಿಸುತ್ತಿದ್ದಾರೆ.

66 ಹಳ್ಳಿಯ ಒಡತಿಯ ಇತಿಹಾಸ 

ಮಲೆನಾಡಿನ ತುಂಗಭದ್ರಾ ನದಿಯಲ್ಲಿ  ಕಟ್ಟಿಗೆಯಿಂದ ಸೃಷ್ಠಿಸಿದ ಎರಡು ದೇವತೆಗಳುಳ್ಳ ಪೆಟ್ಟಿಗೆಯೊಂದು ತೇಲುತ್ತಾ ಬಂದು ಗರ್ಭಗುಡಿ ಗ್ರಾಮದ ನದಿ ತಟದಲ್ಲಿ ನಿಂತಾಗ, ಬಡಿಗೇರ ವ್ಯಕ್ತಿಯೊಬ್ಬ ಮೀನುಗಾರರ ಸಹಾಯದಿಂದ ಅದನ್ನು ದಡಕ್ಕೆ ತರುತ್ತಾನೆ. ನಂತರ ದನ ಕಾಯುವ ಹುಡುಗನ ಮೈಯಲ್ಲಿ ದೇವಿ ಮೈದುಂಬಿ ತನ್ನ ಇತಿಹಾಸ ತಿಳಿಸುತ್ತಾಳೆ.

ಆಗ ಗರ್ಭಗುಡಿ ಗ್ರಾಮದಲ್ಲಿ ಮೊದಲನೇ ಪೂಜೆ ನಡೆಯುತ್ತದೆ, ಆದ್ದರಿಂದ ಗರ್ಭಗುಡಿ ಗ್ರಾಮವೇ ದೇವಿಯ ತವರು ಮನೆ ಎಂದು ಹಿರಿಯರ ಹೇಳಿಕೆಯಾಗಿದೆ.

ಗರ್ಭಗುಡಿ ಗ್ರಾಮದಿಂದ ದೇವಿಮೂರ್ತಿ ಯುಳ್ಳ ಪೆಟ್ಟಿಗೆ ಕಳ್ಳತನವಾಗಿ, ದಾವಣಗೆರೆ ತಾಲ್ಲೂಕಿನ ಮಾಗಾನಹಳ್ಳಿ ಮತ್ತು ಬೇತೂರು ಸಮೀಪದ ಗಡಿ ಬೇವಿನಮರದ ಸ್ಥಳದಲ್ಲಿ ಇರುತ್ತದೆ.  ಆಗ ಮಾಗಾನಹಳ್ಳಿ ಮತ್ತು ಬೇತೂರು ಗ್ರಾಮದವರು ಇದು ನಮ್ಮದೆಂದು ವ್ಯಾಜ್ಯ ಮಾಡಿದಾಗ ಬಾಲಕನೊಬ್ಬನ ಮೈಯಲ್ಲಿ ಅವತರಿಸಿದ ದೇವಿ ನಾನು ಗರ್ಭಗುಡಿ ಗ್ರಾಮದ ಮಗಳೆಂದು ಹೇಳುತ್ತಾಳೆ. ನಂತರ ಮಾಗಾನಹಳ್ಳಿ ಮತ್ತು ಗರ್ಭಗುಡಿ,  ಇತರರು ನಮಗೆ ಸೇರಿದ ದೇವಿ ಎಂದು ವಾದ ಮಾಡುತ್ತಿರುವಾಗ, ಅಂತಿಮವಾಗಿ ನಾನು ಎಲ್ಲಿಯೂ ಇರುವುದಿಲ್ಲ 66 ಹಳ್ಳಿಗಳ ಒಡತಿ. ನನ್ನ ಕರೆದು ಎಲ್ಲರೂ ಪೂಜೆ ಪುನಸ್ಕಾರ ಮಾಡಿರೆಂದು ಹೇಳುತ್ತಾಳೆ. ಅಲ್ಲಿಂದ ಇಲ್ಲಿಯವರೆಗೂ ಯಾವ ವಾಹನವಿಲ್ಲದೆ ದೇವಿಯನ್ನು ತಲೆಯ ಮೇಲೆ ಹೊತ್ತು  ನಡೆದು ಕೊಂಡೇ ಊರಿಂದೂರಿಗೆ ಹೋಗಲಾಗುತ್ತದೆ.   ಹೀಗೆ ಜನಪದ ಕಥೆಯನ್ನು ಹಲುವಾಗಲು ಸಣ್ಣಿಂಗಪ್ಪ ಎನ್ನುವವರು ಹೇಳುತ್ತಾ ಹೋಗುತ್ತಾರೆ.

ಮಾಗಾನಹಳ್ಳಿ ಗ್ರಾಮದಿಂದ ಹಲುವಾಗಲು ಬಳಿ ಇರುವ ಗರ್ಭಗುಡಿ ಗ್ರಾಮದವರೆಗೆ 66 ಹಳ್ಳಿಗಳಲ್ಲಿ ಈ ದೇವಿಯ ಭಕ್ತರಿದ್ದಾರೆ. ಗರ್ಭಗುಡಿ ದೇವಿಯ ತವರು ಮನೆಯಾದರೆ, ಹರಿಹರ ಗಂಡನ ಮನೆ ಎನಿಸಿಕೊಂಡಿದೆ.

ಇಂತಹ ಜನಪದ ಇತಿಹಾಸವುಳ್ಳ  ಊರಮ್ಮದೇವಿ ಜಾತ್ರೆಯನ್ನು ಹಲುವಾಗಲು ಗ್ರಾಮದಲ್ಲಿ ಮೇ 13 ರಿಂದ 17 ರವರೆಗೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

error: Content is protected !!