ದಾವಣಗೆರೆ, ಏ.22- ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾರ್ಯ ಪ್ರವೃತ್ತರಾಗಬೇಕು. ನಮ್ಮ ಮುಂದಿನ ಪೀಳಿಗೆಗೆ ಶುದ್ಧವಾದ ಗಾಳಿ, ನೀರು ಸಿಗಬೇಕು ಅಂದರೆ ಈಗಿನಿಂದಲೇ ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ, ಪರಿಸರ ಕೆಲಸದಲ್ಲಿ ಅವರನ್ನು ತೊಡಗಿಸಿಕೊಳ್ಳುವ ಕೆಲಸ ಆಗಬೇಕು ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ತಿಳಿಸಿದರು.
ವಿಶ್ವ ಭೂ ದಿನದ ಹಿನ್ನೆಲೆ ಸ್ಥಳೀಯ ವಿದ್ಯಾನಗರ ಪಾರ್ಕ್ ಹಾಗೂ ಜಿ.ಎಂ.ವಿಶ್ವ ವಿದ್ಯಾಲಯದ ಆವರಣದಲ್ಲಿ ಸಸಿ ನೆಟ್ಟು ಅವರು ಮಾತನಾಡಿದರು.
ಜಾಗತೀಕ ತಾಪಮಾನ ಹೆಚ್ಚಾಗಿ ಇಂದು ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿದೆ. ಅತಿಯಾದ ಪ್ಲಾಸ್ಟಿಕ್ ಬಳಕೆ, ಕಾಡಿನ ವಿನಾಶ, ಮರಗಳ ಮಾರಣ ಹೋಮದಿಂದ ಇಂದು ಹವಾಮಾನ ವೈಪರೀತ್ಯಗಳಾಗುತ್ತಿವೆ.
ಪರಿಸರದಲ್ಲಿ ಅಸಮತೋಲನ ಉಂಟಾಗಿ ವಿಕೋಪಗಳು ಹೆಚ್ಚಾಗುತ್ತಿವೆ. ಈಗಿನಿಂದಲೇ ನಾವೆಲ್ಲರೂ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ವಹಿಸದೇ ಹೋದರೆ ಉತ್ತಮ ಗಾಳಿ, ನೀರು, ವಾತಾವರಣಕ್ಕಾಗಿ ಹೊಡೆದಾಡಬೇಕಾಗುತ್ತದೆ ಎಂದರು.
ಮಾಜಿ ಸಚಿವ ಮುರುಗೇಶ್ ನಿರಾಣಿ ಪತ್ನಿ ಕಮಲಾ ನಿರಾಣಿ, ಸಂಸದ ಜಿ.ಎಂ.ಸಿದ್ದೇಶ್ವರ್ ಪುತ್ರಿ ಜಿ.ಎಸ್.ಅಶ್ವಿನಿ, ಮುಖಂಡರಾದ ಕೆ.ಬಿ.ಕೊಟ್ರೇಶ್, ಪಾಲಿಕೆ ಸದಸ್ಯೆ ಗೀತಾ ದಿಳ್ಳಪ್ಪ, ಜಿ.ಎಂ ವಿಶ್ವವಿದ್ಯಾಲಯದ ಕುಲಪತಿ ಎಸ್.ಆರ್.ಶಂಕ ಪಾಲ್, ಉಪ ಕುಲಪತಿ ಡಾ ಎಚ್.ಡಿ ಮಹೇಶಪ್ಪ, ರಿಜಿಸ್ಟ್ರಾರ್ ಡಾ. ಸುನೀಲ್ ಕುಮಾರ್, ಜಿಎಂಐಟಿ ಪ್ರಾಂಶುಪಾಲ ಡಾ. ಸಂಜಯ್ ಪಾಂಡ್ಯ, ಫರ್ಮಸಿ ಪ್ರಾಂಶುಪಾಲ ಗಿರೀಶ್ ಬೊಳಕಟ್ಟಿ, ಹಾಲಮ್ಮ ಪಿಯು ಕಾಲೇಜು ಪ್ರಾಂಶುಪಾಲ ಡಾ.ಓಂಕಾರಪ್ಪ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.