ಲೋಕಸಭಾ ಚುನಾವಣೆ : ಶೇ.85 ಕ್ಕಿಂತ ಹೆಚ್ಚು ಮತದಾನದ ಗುರಿ

ಲೋಕಸಭಾ ಚುನಾವಣೆ : ಶೇ.85 ಕ್ಕಿಂತ ಹೆಚ್ಚು ಮತದಾನದ ಗುರಿ

ಶತಾಯಗತಾಯ ಪ್ರಯತ್ನಕ್ಕೆ ಮುಂದಾಗಿರುವ ಜಿ.ಪಂ. ಸಿಇಓ ಸುರೇಶ್ ಬಿ. ಇಟ್ನಾಳ್

ದಾವಣಗೆರೆ, ಏ.15- ಪರೋಕ್ಷ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮದಾಗಿದ್ದು, ಮತದಾನದ ಮೂಲಕ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳುಹಿಸಲಾಗುತ್ತದೆ. ಆದರೆ, ಹೆಚ್ಚು ಮತದಾನವಾಗುವುದರಿಂದ ಉತ್ತಮರ ಆಯ್ಕೆ ಸಾಧ್ಯವಿದೆ ಎಂದು ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಶೇ.85 ಕ್ಕಿಂತ ಹೆಚ್ಚು ಮತದಾನದ ಗುರಿ ಹೊಂದಲಾಗಿದ್ದು, ಮತದಾನ ಜಾಗೃತಿಗೆ ಇಲಾಖಾವಾರು ಕಾರ್ಯಕ್ರಮ ರೂಪಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಸುರೇಶ್ ಬಿ.ಇಟ್ನಾಳ್ ತಿಳಿಸಿದರು. 

ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಏರ್ಪಡಿಸುವ ಕುರಿತು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಕರೆಯಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಪ್ರತಿಯೊಬ್ಬರ ಮತ ಅತ್ಯಮೂಲ್ಯವಾದುದು. ಈ ನಿಟ್ಟಿನಲ್ಲಿ ಎಲ್ಲರೂ ಬರುವ ಮೇ 7 ರಂದು ಮತಗಟ್ಟೆಗೆ ಬಂದು ಮತದಾನ ಮಾಡಬೇಕೆನ್ನುವುದು ನಮ್ಮ ಪ್ರಮುಖ ಗುರಿಯಾಗಿದೆ. ಕಳೆದ ಚುನಾವಣೆಯಲ್ಲಿ ಎಲ್ಲಿ ಮತದಾನ ಕಡಿಮೆಯಾಗಿದೆ ಮತ್ತು ಮತದಾನ ಹೆಚ್ಚಾದ ಕಡೆಯು ಮತದಾನ ಜಾಗೃತಿ ಕಾರ್ಯಕ್ರಮಗಳಾಗಬೇಕು. ಎಲ್ಲಿ ಕಡಿಮೆಯಾಗಿದೆ ಅಲ್ಲಿ ಹೆಚ್ಚು, ಎಲ್ಲಿ ಹೆಚ್ಚಾಗಿದೆ ಅಲ್ಲಿ ತುಸು ಹೆಚ್ಚಿನ ಮತದಾನವಾಗುವಂತೆ ನೋಡಿಕೊಳ್ಳಬೇಕಾಗಿದೆ ಎಂದರು. 

ನವ ಯುವ ಮತದಾರರು, ಮಧ್ಯ ವಯಸ್ಕರು, ಮಹಿಳೆಯರು, ಹಿರಿಯ ನಾಗರಿಕರು, ವಿಶೇಷಚೇತನರು ಸೇರಿದಂತೆ ಎಲ್ಲಾ ವರ್ಗದ ಮತದಾರರ ಆಕರ್ಷಣೆ ನಮ್ಮ ಗುರಿಯಾಗಿದೆ. ಇದಕ್ಕಾಗಿ ಜಿಲ್ಲೆಯಲ್ಲಿ 60 ಕ್ಕಿಂತ ಹೆಚ್ಚು ವಿಶೇಷ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಯುವ ಮತಗಟ್ಟೆ, ಸಖಿ, ವಿಶೇಷಚೇತನರು, ಸಂಪ್ರಾದಾಯಿಕ, ವಿಷಯಾಧಾರಿತ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. 

ಎಲ್ಲಾ ಮತಗಟ್ಟೆಯಲ್ಲಿ ಕನಿಷ್ಠ ಸೌಲಭ್ಯದ ಭರವಸೆ ಮೂಡಿಸುವುದು, ಸಾಂಪ್ರದಾಯಿಕ, ಸಾಂಸ್ಕೃತಿಕ, ಜಾನಪದ ಕಾರ್ಯಕ್ರಮ, ಚರ್ಚಾ ಸ್ಪರ್ಧೆ, ಗುಂಪು ಚರ್ಚೆ, ಆನ್‍ಲೈನ್ ಸೇರಿದಂತೆ, ಮನೆ ಮನೆ ಭೇಟಿ, ಚುನಾವಣಾ ಆಯೋಗದ ಕ್ರಮಗಳ ಜಾಗೃತಿ, ಫ್ಯಾಷನ್ ಶೋ, ವಿವಿಧ ಪಂದ್ಯಾವಳಿಗಳು, ಜಾಥಾ, ಕವಾಲಿ, ಕಾರ್ಮಿಕರ ಅರಿವು, ಸಂಗೀತ ಕಾರ್ಯಕ್ರಮ, ಮ್ಯಾರಾಥಾನ್, ಕ್ವಿಜ್, ರೋಡ್‍ಶೋ, ರೀಲ್ಸ್, ಸಾಹಸ ಕ್ರೀಡೆಗಳು, ಯೋಗ ಸೇರಿದಂತೆ ಅನೇಕ ಕಾರ್ಯಕ್ರ ಮಗಳನ್ನು ರೂಪಿಸಲು ತಿಳಿಸಿದರು. 

ಕಾರ್ಯಕ್ರಮಗಳನ್ನು ಗ್ರಾಮ ಮಟ್ಟದಿಂದ ವಾರ್ಡ್ ಮಟ್ಟದವರೆಗೂ ಹಮ್ಮಿಕೊಳ್ಳುವ ಮೂಲಕ ಪ್ರತಿನಿತ್ಯ ಮತದಾರರ ಜಾಗೃತಿ ಕಾರ್ಯಕ್ರಮಗಳು ನಡೆಯುವಂತೆ ಇಲಾಖಾವಾರು ಪಟ್ಟಿಯನ್ನು ನೀಡಲು ಸೂಚಿಸಿ, ಚುನಾವಣೆ ಹತ್ತಿರ ಬರುತ್ತಿದ್ದು, ಎಲ್ಲಾ ಇಲಾಖೆ ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸುವ ಮೂಲಕ ಹೆಚ್ಚು ಮತದಾನವಾಗುವಂತೆ ನೋಡಿಕೊಳ್ಳುವುದು ನಮ್ಮಗಳ ಜವಾಬ್ದಾರಿಯಾಗಿದೆ ಎಂದರು. 

ಸಭೆಯಲ್ಲಿ ಉಪಕಾರ್ಯದರ್ಶಿ ಕೃಷ್ಣನಾಯ್ಕ್, ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ್, ಪಾಲಿಕೆ ಆಯುಕ್ತರಾದ ರೇಣುಕಾ ಹಾಗೂ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!