`ಕಾಯಕವೇ ಕೈಲಾಸ’ ತತ್ವದಲ್ಲಿ ನಂಬಿಕೆ ಇಟ್ಟರೆ ನೆಮ್ಮದಿ ಬದುಕು

`ಕಾಯಕವೇ ಕೈಲಾಸ’ ತತ್ವದಲ್ಲಿ ನಂಬಿಕೆ ಇಟ್ಟರೆ ನೆಮ್ಮದಿ ಬದುಕು

ನಿವೃತ್ತ ಪ್ರಾಂಶುಪಾಲ ಐ. ಜಿ. ಚಂದ್ರಶೇಖರಯ್ಯನವರ ಶ್ರದ್ಧಾಂಜಲಿಯಲ್ಲಿ ಸಾಣೇಹಳ್ಳಿ ಶ್ರೀಗಳು

ಸಾಣೇಹಳ್ಳಿ, ಮಾ. 25-   ಈ ಭೂಮಿಯ ಮೇಲೆ ಯಾರೂ ಶಾಶ್ವತವಾಗಿ ಬದುಕಲಿಕ್ಕೆ ಸಾಧ್ಯವಿಲ್ಲ. ಕಾಲನ ಕರೆಗೆ ಎಲ್ಲರೂ ಓಗೊಡಲೇಬೇಕು. ಆದ್ದರಿಂದ ಇದ್ದಷ್ಟು ದಿನ ಒಳ್ಳೆಯ ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು. ಯಾವ ವ್ಯಕ್ತಿ `ಕಾಯಕವೇ ಕೈಲಾಸ’ ಎನ್ನುವ ತತ್ವದಲ್ಲಿ ನಂಬಿಕೆಯನ್ನಿಡುತ್ತಾನೋ ಅಂಥವನು ಬದುಕಿನಲ್ಲಿ ನೆಮ್ಮದಿಯನ್ನು ಕಾಣಲು ಸಾಧ್ಯ. ಆಗ ಮನುಷ್ಯನ ಜೀವನ ಸಾರ್ಥಕವಾಗುವುದು ಎಂದು ಸಾಣೇಹಳ್ಳಿಯ  ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. 

ಇಲ್ಲಿನ ಎಸ್. ಎಸ್. ರಂಗಮಂದಿರದಲ್ಲಿ ಆಯೋಜಿಸಿದ್ದ ನಿವೃತ್ತ ಪ್ರಾಂಶುಪಾಲ  ಐ. ಜಿ. ಚಂದ್ರಶೇಖರಯ್ಯನವರ ಶ್ರದ್ಧಾಂಜಲಿ ಹಾಗೂ ಸರ್ವಶರಣರ ಸಮ್ಮೇಳನದ ಸಾನ್ನಿಧ್ಯ ವಹಿಸಿ  ಶ್ರೀಗಳು ಆಶೀರ್ವಚನ ನೀಡಿದರು.

ಯಾರಾದರೂ ಬೈದರೆ, ನಿಂದಿಸಿದರೆ ಅವರನ್ನು ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು. ಅಂತಹ ಗುಣ ಐ. ಜಿ. ಚಂದ್ರಶೇಖರಯ್ಯನವರಲ್ಲಿತ್ತು.   ಉತ್ತಮ ಉಪನ್ಯಾಸಕರಾಗಿ, ವಾಗ್ಮಿಯಾಗಿದ್ದರು. ಬಾ ಬಂಧು ಎಂದು ಎಲ್ಲರನ್ನು ಅಪ್ಪಿ, ಒಪ್ಪಿಕೊಂಡು ಜನರ ಪ್ರೀತಿ ವಿಶ್ವಾಸ ಗಳಿಸಿಕೊಂಡರು. ಯಾರನ್ನೂ ದ್ವೇಷಿಸುತ್ತಿರಲಿಲ್ಲ. ದ್ವೇಷಿಸುವಂಥವರನ್ನೂ ಪ್ರೀತಿಸುವ ಗುಣ ಅವರಲಿತ್ತು. ಅವರ ತಲೆಯಲ್ಲಿ ಒಳ್ಳೆಯ ವಿಚಾರಗಳು ತುಂಬಿಕೊಂಡಿದ್ದವು.  ಒಬ್ಬ ನಿವೃತ್ತ ಪ್ರಾಂಶುಪಾಲರಾಗಿದ್ದರೂ ಒಬ್ಬ ಆದರ್ಶ ವಿದ್ಯಾರ್ಥಿ ಯಾಗಿ, ಸದಾ ಓದು, ಬರಹದಲ್ಲಿ ನಿರತರಾಗುತ್ತಿದ್ದರು. 

ಕನ್ನಡ ಸಾಹಿತ್ಯದ ಬಗ್ಗೆ, ವ್ಯಾಕರಣದ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ನನ್ನದೇ ಸರಿ ಎನ್ನುವ ವಾದ ಅವರಲ್ಲಿರಲಿಲ್ಲ.  ಬದುಕಿನಲ್ಲಿ ಸಮಸ್ಥಿತಿಯನ್ನು ಕಾಯ್ದುಕೊಂಡಿದ್ದರು. ಸಿರಿಗೆರೆಯಲ್ಲಿದ್ದಾಗ ನಮ್ಮ ಜೊತೆ ಸಾಕಷ್ಟು ಕೆಲಸ ಮಾಡಿದವರು. ಅಧ್ಯಾಪಕ ವೃತ್ತಿಯ ಜೊತೆಗೆ ಅಣ್ಣನ ಬಳಗ, ಅಕ್ಕನ ಬಳಗ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೆಲಸ, ಕಾರ್ಯಗಳನ್ನು  ಅವರು ಮಾಡಿದ್ದಾರೆ ಎಂದು ಸ್ವಾಮೀಜಿ  ಸ್ಮರಿಸಿದರು.

ಹಿರಿಯ ಸಾಹಿತಿ ಚಂದ್ರಶೇಖರ ತಾಳ್ಯ ಮಾತನಾಡಿ, ಐಜಿಸಿ ಅನ್ನುವಂಥದ್ದು ಆಧುನಿಕತೆಯ ಮತ್ತು ಪರಂಪರೆಯ ಎರಡು ಕೊಂಡಿಗಳು. ಹಿರಿಯ ಶ್ರೀಗಳಾದ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ಜಂಗಮ ಮನೆತನವರಿಗೆ ಹೆಚ್ಚು ಪ್ರೋತ್ಸಾಹಿಸಿದ್ದರು. ಅವರಲ್ಲಿ ಚಂದ್ರಶೇಖರಯ್ಯನವರು ಒಬ್ಬರು. ಪ್ರಾಚಾ ರ್ಯರಾಗಿ, ಅಧ್ಯಾಪಕರಾಗಿ ಉತ್ತಮ ಕೆಲಸ ಕಾರ್ಯ ಗಳನ್ನು ನಿರ್ವಹಿಸುತ್ತಿದ್ದರು. ಪಾಠಕ್ಕೆ ಸಂಬಂಧಪಟ್ಟಂತೆ ಅಧ್ಯಯನ ನಿರಂತವಾಗಿತ್ತು. ನಿಜವಾದ ಶಿಕ್ಷಕ ನಿಜವಾದ ವಿದ್ಯಾರ್ಥಿಯಾಗಿರುತ್ತಾನೆ. ಅದಕ್ಕೆ ಅವರು ಅನ್ವರ್ಥಕವಾಗಿದ್ದರು. ಒಬ್ಬ ಶ್ರೇಷ್ಠ ನಟನಾಗಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ ಎಂದರು.

ದಾವಣಗೆರೆ  ಲೋಕಸಭಾ ಅಭ್ಯರ್ಥಿ
ಗಾಯತ್ರಿ ಸಿದ್ದೇಶ್ವರ್ ಮಾತನಾಡಿ,
ಅವರೊಂದು ಶಕ್ತಿ, ಅಂತಹ ಶಕ್ತಿಯನ್ನು ಕಳೆದುಕೊಂಡಿದ್ದೇವೆ. ನನಗೆ ತಂದೆ ಸಮಾನರಾಗಿ, ನಮ್ಮ ಕುಟುಂಬಕ್ಕೆ ಸದಸ್ಯರಾಗಿದ್ದರು ಎಂದರು. 

ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ಕನ್ನಡ ಭಾಷೆಯ ಹಿಡಿತವನ್ನಿಟ್ಟುಕೊಂಡು ವಿಚಾರಗಳನ್ನು ಮಂಡಿಸುವ ಗುಣ ಚಂದ್ರಶೇಖರಯ್ಯನವರಿಗೆ ಚೆನ್ನಾಗಿ ಗೊತ್ತಿತ್ತು ಎಂದರು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ಉಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ,  ಚಂದ್ರಶೇಖರಯ್ಯ ನವರು   ಜೀವನದಲ್ಲಿ ಆದರ್ಶವನ್ನಿಟ್ಟುಕೊಂಡು ಬದುಕಿದವರು. ಅಜಾತ ಶತ್ರುಗಳಾಗಿ ಬದುಕಿ ಬಾಳಿದವರು, ಉಪನ್ಯಾಸಕರ ವೃತ್ತಿಗೆ ಅನ್ವರ್ಥ ವಾಗಿದ್ದವರು. ಕಾಲ ಇರುವುದು ಕಳೆಯುವುದಕ್ಕಲ್ಲ. ಕಾಲ ಇರುವುದು ಬಳಸಿಕೊಳ್ಳುವುದಕ್ಕೆ ಎಂದು ಸದಾ ನಮ್ಮನ್ನು ಎಚ್ಚರಿಸುತ್ತಿದ್ದರು ಎಂದು ಸ್ಮರಿಸಿಕೊಂಡರು.

ಅಧ್ಯಾಪಕ ಅಣ್ಣಿಗೆರೆಯ ವಿರೂಪಾಕ್ಷಪ್ಪ, ಚಿಕ್ಕಾನವಂಗಲದ ಕೆ. ಸಿ. ಶಿವಮೂರ್ತಿ, ದಾವಣಗೆರೆಯ ಎಲ್. ಎಸ್. ಪ್ರಭುದೇವ್, ಹೆಚ್. ಸಿ. ಮಲ್ಲಿಕಾರ್ಜುನ್, ಅಜ್ಜಂಪುರದ ಶ್ರೀನಿವಾಸ, ಬಿ. ಪಿ. ಓಂಕಾರಪ್ಪ, ಎ. ಸಿ. ಚಂದ್ರಪ್ಪ, ಸಿಂಗಟಗೆರೆ ಸಿದ್ಧಪ್ಪ ಮಾತನಾಡಿದರು.

 ದಾಸಿಕಟ್ಟೆಯ ಶಿವಯ್ಯ ಸ್ವಾಗತಿಸಿದರೆ, ರಾಜು ಲಕ್ಕಮುತ್ತೇನಹಳ್ಳಿ ನಿರೂಪಿಸಿದರು. ಆರಂಭದಲ್ಲಿ ಶಿವಸಂಚಾರದ ಹೆಚ್.ಎಸ್. ನಾಗರಾಜ್  ವಚನ ಗೀತೆಗಳನ್ನು ಹಾಡಿದರು. ವೇದಿಕೆಯ ಮೇಲೆ ತರೀಕೆರೆ ತಾಲ್ಲೂಕು ವೀರಶೈವ ಸಮಾಜ ಅಧ್ಯಕ್ಷ ಶಂಕರಲಿಂಗಪ್ಪ, ಡಣಾಯಕಪುರದ ಗಂಗಾಧರಪ್ಪ ಮತ್ತಿತರರಿದ್ದರು.

error: Content is protected !!