ಸಮಾಜದಲ್ಲಿ ಸಾಮರಸ್ಯ ಜೀವನದ ಕೊರತೆ

ಸಮಾಜದಲ್ಲಿ ಸಾಮರಸ್ಯ ಜೀವನದ ಕೊರತೆ

ಹರಿಹರ ಪಂಚಮಸಾಲಿ ಪೀಠದ ಆಡಳಿತಾಧಿಕಾರಿ ಡಾ.ಎಚ್.ಪಿ.ರಾಜಕುಮಾರ್

ಹೊನ್ನಾಳಿ, ಮಾ.22- ಹಿಂದಿನ ಲಿಂ.ಒಡೆಯರ್ ಚಂದ್ರಶೇಖರ ಶಿವಾಚಾರ್ಯರ ಜೀವನದ ಅನುಕ್ರಮಗಳನ್ನು, ಮೌಲ್ಯಗಳನ್ನು ಮತ್ತು ಧಾರ್ಮಿಕತೆಯನ್ನು ನಾವುಗಳು ಅವಲೋಕಿಸಿ, ಅವರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದು ಹರಿಹರ ಪಂಚಮಸಾಲಿ ಪೀಠದ ಆಡಳಿತಾಧಿಕಾರಿ ಡಾ.ಎಚ್.ಪಿ.ರಾಜಕುಮಾರ್ ಹೇಳಿದರು.

ಲಿಂ.ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಅವರ 54ನೇ ವಾರ್ಷಿಕ ಪುಣ್ಯಾ ರಾಧನೆ ಮತ್ತು ಲಿಂ.ಒಡೆಯರ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ 9ನೇ ವಾರ್ಷಿಕ ಸಂಸ್ಮರಣೆ ಕಾರ್ಯಕ್ರಮಗಳ ಪ್ರಯುಕ್ತ ಹಿರೇಕಲ್ಮಠದಲ್ಲಿ ಹಮ್ಮಿಕೊಂಡಿದ್ದ ಸಾಹಿತಿ ಲಿಂ.ಡಾ. ಹೆಚ್.ತಿಪ್ಪೇರುದ್ರಸ್ವಾಮಿ, ಲಿಂ.ಎಚ್.ಎನ್.ಷಡಕ್ಷರಿ ಶಾಸ್ತ್ರಿ ಅವರುಗಳ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಭಾವಹಿಸಿ ಅವರು ಮಾತನಾಡಿದರು.

ಇಂದು ನಾವುಗಳು ಯಾವುದೇ ಕ್ಷೇತ್ರಗಳಲ್ಲಿ ಗಮನಹರಿಸಿದರೆ ಸ್ವಾರ್ಥ, ಅಸೂಯೆ ನೋಡುತ್ತಿದ್ದೇವೆ. ಧಾವಂತದ ಬದುಕಿನಲ್ಲಿ ಮಠ-ಮಾನ್ಯಗಳಲ್ಲಿ ನಡೆಯುವ ಧಾರ್ಮಿಕ ಸಭೆಗಳಲ್ಲಿ ಭಾಗವಹಿಸಲು ಸಮಯವೇ ಇಲ್ಲದ ಸಂದಿಗ್ಧತೆಯನ್ನು ತಂದುಕೊಂಡಿದ್ದು, ಇದು ಎಲ್ಲರ ಸಾಮಾಜಿಕ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮೈಸೂರು ಜೆಎಸ್‍ಎಸ್ ಕಾಲೇಜು ಉಪನ್ಯಾಸಕರಾದ ಡಾ.ಎಚ್.ಟಿ. ಶೈಲಜಾ ಮಾತನಾಡಿದರು.  

ಆವರಗೊಳ್ಳ ಮಠದ ಓಂಕಾರೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಾನವನ ಅತ್ಯುತ್ತಮ ಬದುಕು ಹಸನವಾಗಲು ಧರ್ಮದಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಧರ್ಮದಲ್ಲಿ ರಾಜಕಾರಣ ಬೆರೆತು ಜಾತಿಗಳಲ್ಲಿ ವಿಷಬೀಜ ಬಿತ್ತುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಇದು ಸಲ್ಲದು ಎಂದು ಹೇಳಿದರು.

ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಟ್ಟೇಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಜಕ್ಕಲಿ, ಬಿದರಗಟ್ಟೆ. ರಾಮಲಿಂಗೇಶ್ವರ ಮಠದ ವಿಶ್ವರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರುಗಳು ನೇತೃತ್ವ ವಹಿಸಿದ್ದರು.

ಚನ್ನಪ್ಪಸ್ವಾಮಿ ವಿದ್ಯಾಪೀಠದ ನಿರ್ದೇಶಕ ಕೋರಿ ಮಲ್ಲಿಕಾರ್ಜುನಪ್ಪ, ತಾಲ್ಲೂಕು ವೀರಶೈವ ಪಂಚಮಸಾಲಿ ಸಮಾಜದ ಅಧ್ಯಕ್ಷ ಪಿ.ವೀರಪ್ಪ, ಪಟ್ಟಣದ ವರ್ತಕ ಬಿ.ಸಿದ್ದಪ್ಪ ಉಪಸ್ಥಿತರಿದ್ದರು. ಶ್ರೀಮಠದ ವ್ಯವಸ್ಥಾಪಕ ಚನ್ನಬಸಯ್ಯ ಸ್ವಾಗತಿಸಿದರು. ಶಿಕ್ಷಕಿ ಶಾಂತಸುರೇಶ್ ನಿರೂಪಿಸಿದರು.

error: Content is protected !!