ವಸ್ತುಗಳನ್ನು ಖರೀದಿಸುವಾಗ ಜಾಗರೂಕರಾಗಿರಿ

ವಸ್ತುಗಳನ್ನು ಖರೀದಿಸುವಾಗ ಜಾಗರೂಕರಾಗಿರಿ

ಹರಿಹರ: `ರಾಷ್ಟ್ರೀಯ ಗ್ರಾಹಕರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಡಾ. ವೆಂಕಟೇಶ್

ಹರಿಹರ, ಡಿ. 28-ನಾವೆಲ್ಲರೂ ಹುಟ್ಟಿನಿಂದ ಸಾಯುವವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ಗ್ರಾಹಕರಾಗಿರುತ್ತೇವೆ. ಆದ್ದರಿಂದ ನಾವು ಖರೀದಿಸುವ ವಸ್ತುಗಳ ಗುಣಮಟ್ಟ ಮತ್ತು ಸೇವೆಗಳ ಕುರಿತು ಜಾಗರೂಕರಾಗಿರಬೇಕು ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್.ಎಂ.ವಿ ತಿಳಿಸಿದರು.
ಗುರುವಾರ ಹರಿಹರದ ಎಸ್.ಜೆ.ವಿ.ಪಿ ಕಾಲೇಜು ಸಭಾಂಗಣದಲ್ಲಿ `ಇ-ಕಾಮರ್ಸ್ ಮತ್ತು ಡಿಜಿಟಲ್ ವ್ಯಾಪಾರದ ಯುಗದಲ್ಲಿ ಗ್ರಾಹಕರ ರಕ್ಷಣೆ’ ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಒಂದು ವಸ್ತುವನ್ನು ಕೊಟ್ಟು ಮತ್ತೊಂದು ವಸ್ತುವನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಜೀವನ ಸಾಗಿಸುವಂತಹ ವಿನಿಮಯ ಪದ್ದತಿಯಿತ್ತು. ಆದರೆ ನಾಗರಿಕತೆ ಬದಲಾದಂತೆ ಪ್ರಚಲಿತ ಯುಗದಲ್ಲಿ ಪ್ರತಿಯೊಬ್ಬರೂ ಸಹ ಆನ್‍ಲೈನ್ ಮೂಲಕ ಡಿಜಿಟಲ್ ಪಾವತಿ ಮಾಡಿ ಅಗತ್ಯವಿರುವ ವಸ್ತು, ಪದಾರ್ಥ ಅಥವಾ ಸೇವೆಗಳನ್ನು ಪಡೆಯುತ್ತಿದ್ದಾರೆ.
ಗ್ರಾಹಕರಾದ ಪ್ರತಿಯೊಬ್ಬರೂ ಖರೀದಿಸುವ ವಸ್ತುಗಳ ಗುಣಮಟ್ಟದಲ್ಲಿ ವ್ಯತ್ಯಾಸವಾದಾಗ, ಗ್ರಾಹಕ ಮೋಸಕ್ಕೊಳಗಾಗುತ್ತಾನೆ. ಆದ್ದರಿಂದ ಗ್ರಾಹಕರು ಮೋಸದ ಬಗ್ಗೆ ಅಸಡ್ಡೆ ತೋರದೆ ಜಾಗರೂಕರಾಗಿ ಕಾನೂನಿನ ಅಡಿಯಲ್ಲಿ ವಂಚಿಸಿದವರಿಗೆ ಶಿಕ್ಷೆಗೆ ಒಳಪಡಿಸಲು ಮುಂದಾದಾಗ ಇಂತಹ ಮೋಸಗಳು ಮರುಕಳಿಸುವುದಿಲ್ಲ
ಅಲ್ಲದೇ, ಡಿಜಿಟಲ್ ಪಾವತಿಯ ಈ ಕಾಲದಲ್ಲಿ ಮೊಬೈಲ್‍ಗಳಿಗೆ ಬರುವ ಓಟಿಪಿ, ಆಧಾರ್ ನಂಬರ್, ಬ್ಯಾಂಕ್‍ಗೆ ಅಥವಾ ಇನ್ನಿತರೆ ಯಾವುದೇ ದಾಖಲೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕಳುಹಿಸುವಂತೆ ಆನ್‍ಲೈನ್ ಮೂಲಕ ಸಂದೇಶಗಳು ಬಂದರೆ, ಸಾರ್ವಜನಿಕರು ಇವುಗಳಿಗೆ ಮಾರುಹೋದಲ್ಲಿ ವಂಚನೆಗಳಿಗೆ ಒಳಗಾಗಬೇಕಾಗುತ್ತದೆ. ಯಾವುದೇ ಬ್ಯಾಂಕ್‍ಗಳು ಗ್ರಾಹಕರಿಗೆ ಕರೆ ಮಾಡಿ ನಿಮ್ಮ ಓಟಿಪಿ, ಆಧಾರ್ ವಿವರ ಹೇಳಲು ತಿಳಿಸುವುದಿಲ್ಲ. ಆದ್ದರಿಂದ ವಂಚನೆ ಜಾಲದ ಬಗ್ಗೆ ಎಚ್ಚರ ವಹಿಸಬೇಕಾಗುತ್ತದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ ಮಾತನಾಡಿ, ರಾಷ್ಟ್ರೀಯ ಗ್ರಾಹಕರ ದಿನಾಚರಣೆಯ ಉದ್ದೇಶ ಬಹಳಷ್ಟು ಜನರಿಗೆ ಗ್ರಾಹಕರ ರಕ್ಷಣೆಗಾಗಿ ಇರುವ ಕಾನೂನುಗಳ ಮಾಹಿತಿ ಇರುವುದಿಲ್ಲ. ಈ ನಿಟ್ಟಿನಲ್ಲಿ ಗ್ರಾಹಕರ ರಕ್ಷಣೆಗಾಗಿ ಕಾನೂನಿನಲ್ಲಿ ಯಾವ ರೀತಿಯ ಅವಕಾಶಗಳಿವೆ ಎಂಬುದರ ಕುರಿತು ಜಾಗೃತಿ ಮೂಡಿಸುವುದಾಗಿದೆ.
ಡಿಜಿಟಲ್ ವ್ಯಾಪಾರದ ಯುಗದಲ್ಲಿ ಗ್ರಾಹಕರಿಗೆ ಮೋಸ, ವಂಚನೆ ಮತ್ತು ಅನುಕೂಲತೆಗಳನ್ನು ಮರೀಚಿಕೆ ಮಾಡುವಂತಹ ಪ್ರಯತ್ನಗಳು ಮಾರಾಟಗಾರರಿಂದ ಸಂಭವಿಸುತ್ತವೆ. ಆದ್ದರಿಂದ ಗ್ರಾಹಕರ ರಕ್ಷಣೆ ಅತ್ಯವಶ್ಯಕವಾಗಿದೆ. ಗ್ರಾಹಕರಿಗೆ ವಸ್ತುಗಳ ಖರೀದಿಸುವಿಕೆಗೆ ಯಾವುದೇ ರೀತಿಯ ಸಮಸ್ಯೆಯಾಗುತ್ತಿದ್ದರೆ ಸಂಬಂಧಪಟ್ಟ ಇಲಾಖೆಯವರು ಗ್ರಾಹಕರಿಗೆ ಬೆಂಬಲ ನೀಡಿ ಸೂಕ್ತ ನ್ಯಾಯ ಒದಗಿಸಲು ಮುಂದಾಗಬೇಕೆಂದರು.
ಕಾರ್ಯಕ್ರಮದ ಅಂಗವಾಗಿ ಕಾನೂನು ಮಾಪನ ಶಾಸ್ತ್ರ ಇಲಾಖೆ ವತಿಯಿಂದ ಗ್ರಾಹಕರ ಜಾಗೃತಿಗಾಗಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಾಂತೇಶ್ ಈರಪ್ಪ ಶಿಗ್ಲಿ, ಸದಸ್ಯರಾದ ಸಿ.ಎಸ್ ತ್ಯಾಗರಾಜನ್ ಮತ್ತು ಬಿ.ವಿ ಗೀತಾ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯಾಜ್ಯಗಳ ಇಲಾಖೆ ಉಪನಿರ್ದೇಶಕ ಶಿದ್ರಾಮ ಮಾರಿಹಾಳ್, ಎಸ್.ಜೆ.ವಿ.ಪಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಹೆಚ್. ಶಿವಗಂಗಮ್ಮ, ಉಪಾಧ್ಯಕ್ಷರಾದ ಡಿ.ಎಂ.ಹಾಲಸ್ವಾಮಿ, ಡಿ.ಸಿ.ಐ.ಸಿ ಅಧ್ಯಕ್ಷರಾದ ಅನಿತಾ.ಹೆಚ್, ಪ್ರಾಧ್ಯಾಪಕ ವಿಶಾಲ್ ಬೆಂಚಿಹಳ್ಳಿ ಉಪಸ್ಥಿತರಿದ್ದರು.

error: Content is protected !!