ವಾಣಿಜ್ಯ ಬೆಳೆ ವಿಸ್ತೀರ್ಣ ಹೆಚ್ಚಾಗಿರುವುದರಿಂದ ತೆಂಗು ಬೆಳೆ ವಿನಾಶದ ಅಂಚಿನಲ್ಲಿದೆ

ವಾಣಿಜ್ಯ ಬೆಳೆ ವಿಸ್ತೀರ್ಣ ಹೆಚ್ಚಾಗಿರುವುದರಿಂದ  ತೆಂಗು ಬೆಳೆ ವಿನಾಶದ ಅಂಚಿನಲ್ಲಿದೆ

ಎಂ.ಜಿ. ಬಸವನಗೌಡ 

ದಾವಣಗೆರೆ, ಡಿ. 12- ವಾಣಿಜ್ಯ ಬೆಳೆಗಳ ವಿಸ್ತೀರ್ಣ ಹೆಚ್ಚಾಗಿರುವುದರಿಂದ ಇಂದು ತೆಂಗು ಬೆಳೆಯ ವಿನಾಶದ ಅಂಚಿನಲ್ಲಿದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ಅಭಿಪ್ರಾಯಪಟ್ಟರು.

ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ತೆಂಗು ಅಭಿವೃದ್ಧಿ ಮಂಡಳಿ, ಬೆಂಗಳೂರು ಹಾಗೂ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್  ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ‘ತೆಂಗು ಬೆಳೆಯ ವೈಜ್ಞಾನಿಕ  ತಾಂತ್ರಿಕತೆಗಳು’ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಸ್ಯ ಸಂಕುಲದಲ್ಲಿ ತೆಂಗು ಕಲ್ಪವೃಕ್ಷವೆಂದು ಗುರುತಿಸಲ್ಪಟ್ಟಿದೆ.  ಇದನ್ನು ಬೆಳೆಸಿ, ಬಳಸಿ, ಉಳಿಸುವ ಕರ್ತವ್ಯ ಪ್ರತಿಯೊಬ್ಬ ರೈತರದ್ದಾಗಿದೆ. ಪೌಷ್ಟಿಕಾಂಶದಲ್ಲಿ ಅತೀ ಹೆಚ್ಚು ಲಾರಿಕ್ ಆಮ್ಲವುಳ್ಳ ತೆಂಗು ನಮಗೆಲ್ಲ ಸಂಜೀವಿನಿಯ ಇನ್ನೊಂದು ರೂಪ ಎಂದು ತಿಳಿಸಿದರು.  ಅತೀ ಬರಗಾಲವನ್ನು ತಡೆದುಕೊಳ್ಳುವ ಸಾಮರ್ಥ್ಯ ತೆಂಗಿನ  ಬೆಳೆಗಿರುವುದರಿಂದ ಹವಾಮಾನ ವೈಪರೀತ್ಯದಲ್ಲೂ ಉತ್ತಮ ಆದಾಯ ಕೊಡುವ ತೋಟಗಾರಿಕೆ ಬೆಳೆ ಇದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತೋಟಗಾರಿಕೆ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್, ಇಲಾಖೆಯ ವತಿಯಿಂದ ಬೆಳೆ ವಿಸ್ತರಣೆ, ತೆಂಗು ಪುನಶ್ಚೇತನ, ರೋಗ ಮತ್ತು ಕೀಟಗಳ ನಿರ್ವಹಣೆಗೆ ಅನುಧಾನ ಲಭ್ಯವಿದ್ದು, ರೈತರು ಇದರ ಸದುಪಯೋಗ ಪಡೆಯಬೇಕೆಂದರು.

ತೆಂಗು ಅಭಿವೃದ್ಧಿ ಮಂಡಳಿಯ ಹಿರಿಯ ತಾಂತ್ರಿಕ ಅಧಿಕಾರಿ ಜಿ. ಧನಶೇಖರ್ ಮಾತನಾಡಿ, ತೆಂಗು ಅಭಿವೃದ್ಧಿ ಮಂಡಳಿಯ ಪ್ರಮುಖ ಯೋಜನೆಗಳಾದ ತೆಂಗಿನ ಮರ ಹತ್ತುವ ಕಾರ್ಯಕ್ರಮ, ಮೌಲ್ಯವರ್ಧನೆ ಮತ್ತ್ತು ಸಂಸ್ಕರಣಾ ಕಾರ್ಯಕ್ರಮ, ಕ್ಷೀರ ಸುರಕ್ಷಾ ವಿಮಾ ಯೋಜನೆ, ಗುಣ ಮಟ್ಟದ ಸಸಿಗಳ ಉತ್ಪಾದನಾ ಉತ್ತೇಜನಾ ಯೋಜನೆಗಳ ಸದುಪಯೋಗ ಪಡೆಯಬೇಕೆಂದು ಮಾಹಿತಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥ ಡಾ. ಟಿ.ಎನ್. ದೇವರಾಜ್ ಮಾತನಾಡಿ, ಕೇಂದ್ರದ ವತಿಯಿಂದ ಜಿಲ್ಲೆಯಲ್ಲಿ ಸುಮಾರು 300 ಕ್ಕೂ ಹೆಚ್ಚು ಮರ ಹತ್ತುವ ಸ್ನೇಹಿತರಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಲಾಗಿದ್ದು, ಪ್ರತೀ ವರ್ಷ 10,000 ರೂ. ಹೆಚ್ಚು ಗುಣಮಟ್ಟದ ಅರಸೀಕೆರೆ ತಳಿಗಳನ್ನು ರೈತರಿಗೆ ಮಾರಾಟ ಮಾಡಲಾಗುತ್ತಿದೆ.  ಜೊತೆಗೆ ತೆಂಗಿನ ಬಿಳಿ ನೊಣದ ನಿಯಂತ್ರಣಕ್ಕೆ ಐಸಿರಿಯಾ ಪರೋಪಜೀವಿಯನ್ನು ಉತ್ಪಾದಿಸಿ, ರೈತರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ತೆಂಗಿನ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಮಣ್ಣು ವಿಜ್ಞಾನಿ ಹೆಚ್.ಎಂ. ಸಣ್ಣಗೌಡ್ರ, ರೋಗ ಮತ್ತು ಕೀಟಗಳ ನಿರ್ವಹಣೆಯ ಬಗ್ಗೆ ಡಾ. ಅವಿನಾಶ್ ಟಿ.ಜಿ., ಮೌಲ್ಯವರ್ಧನೆ ಮತ್ತು ಸಂಸ್ಕರಣೆಯ ಬಗ್ಗೆ ವೈಜಿಪಿ ರೈತ ಉತ್ಪಾದಕ ಕಂಪನಿಯ ಮುಖ್ಯಸ್ಥ ಪ್ರಶಾಂತ್ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶ್ರೀಮತಿ ರೇಷ್ಮಾ ಪರ್ವಿನ್,  ವೀರಭದ್ರಸ್ವಾಮಿ, ಇಲಾಖಾ ಅಧಿಕಾರಿ ಶ್ರಿಲಕ್ಷ್ಮೀ, ನಿಟ್ಟೂರು ತರಳಬಾಳು ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ  ನಿಟ್ಟೂರು ಶಿವಣ್ಣ, ಪ್ರಕಾಶ್,  ರಾಜೇಂದ್ರ, ವಿಜ್ಞಾನಿಗಳು ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!