ಸ್ಮಶಾನಕ್ಕೆ ಜಾಗ ನೀಡುವಂತೆ ಆಗ್ರಹಿಸಿ ಶವ ಇಟ್ಟು ಪ್ರತಿಭಟನೆ

ಸ್ಮಶಾನಕ್ಕೆ ಜಾಗ ನೀಡುವಂತೆ ಆಗ್ರಹಿಸಿ ಶವ ಇಟ್ಟು ಪ್ರತಿಭಟನೆ

ನ್ಯಾಮತಿ, ನ.27- ನ್ಯಾಮತಿ ತಾಲ್ಲೂಕಿನ ಬಸವನಹಳ್ಳಿ ಗ್ರಾಮಕ್ಕೆ ಸ್ಮಶಾನ ಜಾಗ ನೀಡುವಂತೆ ಆಗ್ರಹಿಸಿ, ಗ್ರಾಮ ಪಂಚಾಯಿತಿಯಲ್ಲಿ ದೊಡ್ಡಪ್ಪ (65) ಮೃತಪಟ್ಟ ವ್ಯಕ್ತಿಯ ಶವ ಇಟ್ಟು ಭಾನುವಾರ ಪ್ರತಿಭಟಿಸಿದರು.

ಸ್ಮಶಾನಕ್ಕೆ ನಿಗದಿಯಾದ ಜಾಗಕ್ಕೆ ಅಂತ್ಯ ಸಂಸ್ಕಾರ ಮಾಡಲು ತೆರಳಿದಾಗ ಅಡ್ಡಿಪಡಿಸಿದ ಹಿನ್ನೆಲೆ ಗ್ರಾಮ ಪಂಚಾಯಿತಿಯ ಕಚೇರಿಯ ಒಳಗೆ ಶವ ಇಟ್ಟು ಪ್ರತಿಭಟಿಸಿ, ಶವ ಊಳಲು ಜಾಗ ನೀಡುವಂತೆ ಆಗ್ರಹಿಸಿ ಪ್ರತಿಭಟಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಡಿ.ಜಿ.ಶಾಂತನಗೌಡ, ತಹಶೀಲ್ದಾರ್ ಹೆಚ್.ಬಿ.ಗೋವಿಂದಪ್ಪ ಮತ್ತು ಕಂದಾಯ ಇಲಾಖೆಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಮೃತರ ಕುಟುಂಬಸ್ಥರ ಮತ್ತು ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದರು. ಆದರೆ, ಗ್ರಾಮಸ್ಥರು ಶವ ಸಂಸ್ಕಾರಕ್ಕೆ ಸ್ಮಶಾನದ ಜಾಗ ಗುರುತಿಸುವ ತನಕ ಶವ ಸಂಸ್ಕಾರ ನಡೆಸುವುದಿಲ್ಲ ಎಂದು ಬಿಗಿಪಟ್ಟು ಹಿಡಿದು ಕಾರ್ಯಾಲಯದ ಮುಂದೆ ಇದ್ದ  ಮೃತಪಟ್ಟ ದೊಡ್ಡಪ್ಪರ ಶವವನ್ನು ಕಾರ್ಯಾಲಯದ ಒಳಗಡೆ ಇಟ್ಟಿದ್ದಾರೆ.

ಶಾಸಕ ಶಾಂತನಗೌಡ, ಗ್ರಾಮ ಪಂಚಾಯಿತಿಯ ಕಾರ್ಯಾಲಯದಲ್ಲಿ ಗ್ರಾಮಸ್ಥರಿಂದ ಸ್ಮಶಾನ ಜಾಗದ ಮಾಹಿತಿಯನ್ನು ಪಡೆದ ಬಳಿಕ ಸಂಬಂಧಿಸಿದ ಅಧಿಕಾರಿಗಳ ಬಳಿ ಮಾತನಾಡಿ, ಸ್ಮಶಾನ ಜಾಗವನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪ್ರತಿಭಟನೆ ನಡೆಸುತ್ತಿದ್ದ ಮೃತಪಟ್ಟ ಕುಟುಂಬ ವರ್ಗ ಮತ್ತು ಗ್ರಾಮಸ್ಥರು ಅಧಿಕಾರಿಗಳ ಮಾತಿಗೆ ಮಣಿದು, ಭಾನುವಾರ ರಾತ್ರಿ 10 ಗಂಟೆಗೆ ದೊಡ್ಡಪ್ಪರ ಸ್ವಂತ ಜಮೀನಲ್ಲಿ ಶವ ಸಂಸ್ಕಾರವನ್ನು ನಡೆಸಲಾಗಿದೆ ಎಂದು ಹೇಳಲಾಗಿದೆ.

ಗ್ರಾಮಕ್ಕೆ ಸ್ಮಶಾನ ಇಲ್ಲದ ಕಾರಣ 2000 ಸಾಲಿನಲ್ಲಿ ಸರ್ವೇ ನಂಬರ್ 28 ರಲ್ಲಿ ಸ್ಮಶಾನದ ಜಾಗಕ್ಕಾಗಿ ಭೂಮಿಯನ್ನು ಮಂಜೂರಾತಿ   ಮಾಡಲಾಗಿದ್ದು, ಸದರಿ ಭೂಮಿಯನ್ನು 2001ರಲ್ಲಿ ಸರ್ವೇಯನ್ನು ಮಾಡಿ ಗುರುತಿಸಿ, ಸುತ್ತ ಗುಂಡಿ ತೆಗೆಸಿ, ಸ್ಮಶಾನದ ಜಾಗವೆಂದು ನಿಗದಿಯಾಗಿದೆ. ಆದರೆ, ಜಮೀನು ಒತ್ತುವರಿ ಆಗುತ್ತಾ ಬಂದಿದೆ. ಇದರಿಂದ ಶವ ಸಂಸ್ಕಾರ ಮಾಡುವಲ್ಲಿ ಗೊಂದಲವಾಗಿದೆ ಎಂದು ಹೇಳುತ್ತಾರೆ.

ಈ ವೇಳೆಯಲ್ಲಿ ತಹಶೀಲ್ದಾರ್ ಹೆಚ್.ಬಿ.ಗೋವಿಂದಪ್ಪ, ಡಿವೈಎಸ್‍ಪಿ ಪ್ರಶಾಂತ್ ಮುನ್ನೋಳಿ, ಸಿಪಿಐ ಎನ್.ಡಿ.ರವಿ, ತಾಲ್ಲೂಕು ಪಂಚಾಯಿತಿ ಇಒ ರಾಘವೇಂದ್ರ, ಆರ್‍ಐ ಸಂತೋಷ್, ಪಿಡಿಒ ಚಿನ್ನಯ್ಯ, ಪೊಲೀಸ್ ಇಲಾಖೆಯ ಹೊನ್ನಾಳಿ ಮಂಜು ಸೇರಿದಂತೆ ಗ್ರಾಮದ ಮುಖಂಡರು ಇದ್ದರು.

error: Content is protected !!