ಬರ ಪರಿಹಾರದ ಹಣ ಬಿಡುಗಡೆಗೆ ಶಾಸಕ ನೇಮಿರಾಜ್ ನಾಯ್ಕ್ ಒತ್ತಾಯ

ಬರ ಪರಿಹಾರದ ಹಣ ಬಿಡುಗಡೆಗೆ  ಶಾಸಕ ನೇಮಿರಾಜ್ ನಾಯ್ಕ್ ಒತ್ತಾಯ

ಹರಪನಹಳ್ಳಿ, ನ. 22- ರಾಜ್ಯದಲ್ಲಿ ಬರಗಾಲ ತೀವ್ರವಾಗಿದ್ದು, ಶೀಘ್ರದಲ್ಲೇ ರೈತರಿಗೆ ಬರ ಪರಿಹಾರದ ಹಣ ಬಿಡುಗಡೆ ಮಾಡಬೇಕೆಂದು ಹಗರಿಬೊಮ್ಮನಹಳ್ಳಿ ಜೆಡಿಎಸ್ ಶಾಸಕ ಕೆ.ನೇಮಿರಾಜ್ ನಾಯ್ಕ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತಾಲ್ಲೂಕಿನ ಮತ್ತಿಹಳ್ಳಿ ಕ್ರಾಸ್ ಬಳಿ ಬರ ಸಮೀಕ್ಷೆ ಪ್ರವಾಸದ ನಿಮಿತ್ತ ಬೊಮ್ಮನಗೌಡರ ಹೊಲದಲ್ಲಿ ಬೆಳೆ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ರಾಜ್ಯ ಸರ್ಕಾರ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲೇ ಕಾಲಹರಣ ಮಾಡುತ್ತಿದೆ ಎಂದು ಲೇವಡಿ ಮಾಡಿದರು.

ಬ್ಯಾಂಕಿನವರು ರೈತರಿಗೆ ಸಾಲ ಮರುಪಾವತಿ ಮಾಡುವಂತೆ, ಕಿರುಕುಳ ಕೊಡುತ್ತಿದ್ದಾರೆ. ಹಾಗಾಗಿ ಸರ್ಕಾರ ಕೂಡಲೇ ಹಣ ಬಿಡುಗಡೆಗೊಳಿಸಿ, ರೈತರ ಕಷ್ಟಕ್ಕೆ ಧಾವಿಸಿ ರೈತರ ಬೆನ್ನಿಗೆ ನಿಲ್ಲಬೇಕು. ಇಲ್ಲವಾದಲ್ಲಿ ನಮ್ಮ ವಿಪಕ್ಷ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ರೈತರೊಂದಿಗೆ ಸದನದಲ್ಲಿ ಧರಣಿ ಮಾಡುತ್ತಾರೆ. ನಾವು ರೈತರ ಜೊತೆ ಬೀದಿಯಲ್ಲಿ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಧರ್ಮ ಪರಿಷತ್ ಕಾರ್ಯದರ್ಶಿ ಕೂಲಹಳ್ಳಿಯ ಪಟ್ಟದ ಚಿನ್ಮಯಸ್ವಾಮೀಜಿ ಮಾತನಾಡಿ, ಈ ವರ್ಷ ಭಾರೀ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ.  ಕುಡಿಯಲು ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಈ ಕೂಡಲೇ ಬೆಳೆ ಬರ ಪರಿಹಾರ ನೀಡಬೇಕು. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಧರ್ಮಪರಿಷತ್ ಅಧ್ಯಕ್ಷರಾದ ನಂದಿಪುರದ ಮಹೇಶ್ವರ ಸ್ವಾಮೀಜಿ, ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಚಾನುಕೋಟೆ ಸ್ವಾಮೀಜಿ, ಬೆಣ್ಣಿಹಳ್ಳಿ ಸ್ವಾಮೀಜಿ, ಪಂಚಾಕ್ಷರ ಸ್ವಾಮೀಜಿ, ಪ್ರಶಾಂತ ಶಿವಾಚಾರ್ಯ ಸ್ವಾಮೀಜಿ, ಕಲ್ಯಾಣ ಸ್ವಾಮೀಜಿ, ಮುಖಂಡ ಎಂ.ಎಂ.ಜೆ.ಹರ್ಷವರ್ಧನ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಕೊಟ್ರೇಶ್, ಹರಪನಹಳ್ಳಿ ತಾಲೂಕು ಜೆಡಿಎಸ್ ಅಧ್ಯಕ್ಷ ಶಿರಹಟ್ಟಿ ದಂಡ್ಯೆಪ್ಪ, ಮಲ್ಲಿಕಾರ್ಜುನ, ಸಿದ್ಧಣ್ಣ, ಅಂಬಣ್ಣ ನಾಯ್ಕ್, ಬೆಣ್ಣಿಹಳ್ಳಿ ಜಾಕೀರ್ ಸಾಬ್, ಶಿರಹಟ್ಟಿ ವಿಜಯ್ ಕುಮಾರ್, ಕರಿಬಸವನಗೌಡ ಸೇರಿದಂತೆ ಮತ್ತಿತರರಿದ್ದರು.

error: Content is protected !!