ಸಿರಿಗೆರೆ ಕಾರ್ಯಕ್ರಮದಲ್ಲಿ ಪ್ರೊ|| ಎಸ್.ಬಿ. ರಂಗನಾಥ್
ಸಿರಿಗೆರೆ, ನ. 7 – ಜಗತ್ತಿನಲ್ಲಿ ಅತ್ಯಂತ ದೊಡ್ಡ ಸೇವಾ ಜಾಲವನ್ನು ಹೊಂದಿ ರುವ ಭಾರತೀಯ ಅಂಚೆ ಇಲಾಖೆಯ ಸೇವೆ ಅತ್ಯಂತ ಶ್ಲ್ಯಾಘನೀಯ. ತನ್ನ ವಿಶ್ವಾಸಾರ್ಹತೆ ಹಾಗೂ ಪ್ರಾಮಾಣಿಕತೆಗಳಿಂದಾಗಿ ಸಾರ್ವಜನಿಕರಲ್ಲಿ ಅದು ದೃಢ ನಂಬಿಕೆಯನ್ನು ಉಳಿಸಿಕೊಂಡಿದೆ ಎಂದು ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ|| ಎಸ್.ಬಿ. ರಂಗನಾಥ್ ತಿಳಿಸಿದರು.
ಸಿರಿಗೆರೆ ಅಂಚೆ ಕಚೇರಿಯಲ್ಲಿ ಅಂಚೆ ಇಲಾಖೆಯ ಜನಸಂಪರ್ಕ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು `ಇಲಾಖೆಯ ಅಧಿಕಾರಿಗಳು ಅದರ ಜನಸ್ನೇಹಿ ಯೋಜನೆಗಳನ್ನು ಇಂತಹ ಅಭಿಯಾನದ ಮೂಲಕ ಜನರಿಗೆ ಪರಿಚಯಿಸಬೇಕು’ ಎಂದು ಹೇಳಿದರು.
ಅಂಚೆ ಇಲಾಖೆಯ ಚಿತ್ರದುರ್ಗ ಜಿಲ್ಲಾ ಅಧೀಕ್ಷಕ ಚಂದ್ರಶೇಖರ್, ಸಿರಿಗೆರೆ ಅಂಚೆ ಕಚೇರಿಯು ಗ್ರಾಮಾಂತರ ಪ್ರದೇಶದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದರು. ಅಂಚೆ ಇಲಾಖೆಯು ಒಂದು ಸೂರಿನಡಿ ನೂರು ಸೇವೆಗಳನ್ನು ಒದಗಿಸುತ್ತಿದೆ ಎಂದರು.
ಉಪ ಅಧೀಕ್ಷಕರಾದ ಅನಿಲ್ ಕುಮಾರ್, ಬ್ಯಾಂಕಿಂಗ್ ಸೇವೆಯಿಂದ ಮೊದಲ್ಗೊಂಡು ಪಾಸ್ಪೋರ್ಟ್, ಆಧಾರ್ ಗುರುತಿನ ಚೀಟಿವರೆಗೆ ಅನಂತ ಸೌಲಭ್ಯಗಳನ್ನು ಅಂಚೆ ಕಚೇರಿಯಿಂದ ಪಡೆಯಬಹುದು ಎಂದರು. ಸಿರಿಗೆರೆ ಅಂಚೆ ಕಚೇರಿ ಮುಖ್ಯಸ್ಥ ಏಕಾಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಅಂಚೆ ಮೇಲ್ವಿಚಾರಕ ಚೇತನ್ಕುಮಾರ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.