ನ್ಯಾಮತಿ, ಸೆ. 28 – ಸಾಮಾನ್ಯವಾಗಿ ನಾವು ನಮ್ಮ ಪ್ರೀತಿ ಪಾತ್ರರ ಹುಟ್ಟುಹಬ್ಬವನ್ನು ಆಚರಿಸುವುದನ್ನು ನೋಡಿದ್ದೇವೆ, ಆದರೆ ಇಲ್ಲೊಂದು ಯುವಕರ ಗುಂಪು ತಮ್ಮ ನೆಚ್ಚಿನ ಹೋರಿಯ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದೆ.
ಹೌದು, ತಾಲ್ಲೂಕಿನ ಹೊಸಕೊಪ್ಪ ಗ್ರಾಮದ ಪ್ರವೀಣ್ ಎಂಬುವವರು ಈ ಹೋರಿ ಎರಡೂವರೆ ವರ್ಷದಿದ್ದಾಗ ಶಿಕಾರಿಪುರ ತಾಲ್ಲೂಕು ಅರಳೇಹಳ್ಳಿ ಗ್ರಾಮದಿಂದ ಈ ಹೋರಿಯನ್ನು ತಂದಿದ್ದು, ಇದೀಗ ಹೋರಿಗೆ ಆರೂವರೆ ವರ್ಷವಾಗಿದೆ.
ಗ್ರಾಮದೇವತೆ ಆಂಜನೇಯ ಸ್ವಾಮಿ ಆಗಿದ್ದರಿಂದ ಈ ಹೋರಿಗೆ ಅಂಜನಿಪುತ್ರ ಎಂದು ನಾಮಕಾರಣ ಮಾಡಿದ್ದು, ಹೋರಿಯ ಮಾಲೀಕ ಅದನ್ನು ತನ್ನ ಸ್ವತಃ ತಮ್ಮನ ರೀತಿ ನೋಡಿಕೊಳ್ಳುತ್ತಿದ್ದು, ಮಂಗಳವಾರ ಅಂಜನಿ ಪುತ್ರನ ಹುಟ್ಟುಹಬ್ಬ ಆಚರಿಸಿ, ಪೋಟೋ ಶೂಟ್ ಕೂಡ ಮಾಡಿಸಿದ್ದಾನೆ.
ಅಂಜನಿಪುತ್ರನಿಗೆ ವಿಶೇಷವಾಗಿ ಅಲಂಕಾರ ಮಾಡಿದ್ದ ಹೋರಿಯ ಮಾಲಿಕ ಹೋರಿಯ ಹುಟ್ಟುಹಬ್ಬದ ಪ್ರಯುಕ್ತ ಗ್ರಾಮದಾದ್ಯಂತ ಹೋರಿಯ ಮೆರವಣಿಗೆ ಕೂಡ ಮಾಡಿದ್ದಾನೆ.
ಕೊಬ್ಬರಿ ಹೋರಿ ಎಂದು ಹೆಸರು ಪಡೆದಿರುವ ಅಂಜನಿಪುತ್ರ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಾಕಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿ ದ್ದಾನಲ್ಲದೇ ಸಾಕಷ್ಟು ಅಭಿಮಾನಿಗಳ ಬಳಗವನ್ನು ಅಂಜನಿಪುತ್ರ ಹೊಂದಿದ್ದಾನೆ.
ಹುಟ್ಟುಹಬ್ಬದಲ್ಲಿ ಪಾಲ್ಗೊಂಡ ರೇಣುಕಾಚಾರ್ಯ : ಅಂಜನಿಪುತ್ರ ಹೋರಿಯ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪಾಲ್ಗೊಂಡು ಗಮನ ಸೆಳೆದರು.
ರೇಣುಕಾಚಾರ್ಯ ಅವರೇ ಕೇಕ್ ಕತ್ತರಿಸಿ ಅಂಜನಿಪುತ್ರನಿಗೆ ತಿನ್ನಿಸಿದರಲ್ಲದೇ ಹೋರಿಯೊಂದಿಗೆ ಪೋಟೋಗೆ ಪೋಸ್ ನೀಡಿದರು.
ಇದೇ ವೇಳೆ ಮಾತನಾಡಿದ ರೇಣುಕಾ ಚಾರ್ಯ, ದೀಪಾವಳಿಯ ಸಂದರ್ಭದಲ್ಲಿ ಹೋರಿ ಬೆದರಿಸುವ ಹಬ್ಬವನ್ನು ಆಚರಿಸಲಾ ಗುತ್ತದೆ, ಅದಕ್ಕಾಗಿ ಹೋರಿಗಳಿಗೆ ವಿಶೇಷವಾದ ತರಬೇತಿ ನೀಡಲಾಗುತ್ತದೆ, ಯುವಕರು ಹೋರಿ ಬೆದರಿಸುವ ಹಬ್ಬದಲ್ಲಿ ಪಾಲ್ಗೊಂಡಾಗ ಎಚ್ಚರಿಕೆ ಇರುವಂತೆ ಕಿವಿ ಮಾತು ಹೇಳಿದರು.