ಡೆಂಗ್ಯೂ : ಮುಂಜಾಗ್ರತೆ ವಹಿಸಬೇಕು

ಡೆಂಗ್ಯೂ : ಮುಂಜಾಗ್ರತೆ ವಹಿಸಬೇಕು

ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಅಧಿಕಾರಿಗಳಿಗೆ ತಾಕೀತು

ಜಗಳೂರು, ಜು. 10 – ಮಳೆಗಾಲದಲ್ಲಿ ಡೆಂಗ್ಯೂ ಜ್ವರ ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಿ. ದೇವೇಂದ್ರಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಹೊರ ರೋಗಿಗಳ ವಾರ್ಡ್ ಗಳನ್ನು, ಲ್ಯಾಬೋ ರೇಟರಿ ಸೇರಿದಂತೆ ವಿವಿಧ ಪರೀಕ್ಷಾ ಕೋಠಡಿ ಗಳನ್ನು ವೀಕ್ಷಿಸಿ ಸ್ವಚ್ಚತೆ ಕಾಪಾಡಲು ಸೂಚಿಸಿದರು.

ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು, ಸಿಬ್ಬಂದಿ ಗಳು, ಪ್ರತಿ ಪಿಎಚ್‌ಸಿ ಹಾಗೂ ಉಪಕೇಂದ್ರಗಳಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ನಿರ್ಲಕ್ಷ್ಯಿಸಿದರೆ ಕ್ರಮ ಕೈಗೊಳ್ಳಬೇಕಾದೀತು ಎಂದರು.

ಸಿಬ್ಬಂದಿಗಳ ಗೈರು ಕಂಡ ಶಾಸಕರು ಗರಂ : ಆರೋಗ್ಯ ಇಲಾಖೆಯ ಸಿಬ್ಬಂದಿಗಳು ರಾಜಕೀಯದಲ್ಲಿ ತೊಡಗಿಕೊಂಡಿರುವ ದೂರುಗಳು ಜಿಲ್ಲಾ ಮಂತ್ರಿಗಳ ಗಮನಕ್ಕೆ ಬಂದಿದೆ  ಅಂತಹವರನ್ನು ಕೂಡಲೇ ಅವರ ಕಾರ್ಯ ವ್ಯಾಪ್ತಿ ಸ್ಥಳಗಳಿಗೆ ಹಾಜರಾಗಲು ನೋಟಿಸ್ ಜಾರಿ ಮಾಡಿ,  ಸೂಕ್ತ ಕ್ರಮಕೈಗೊಳ್ಳಿ ಇಲ್ಲವಾದರೆ ಜಾಗ ಖಾಲಿ ಮಾಡಿ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ವಿಶ್ವನಾಥ್‌ಗೆ ಖಡಕ್ ಸೂಚನೆ ನೀಡಿದರು.

ಪಟ್ಟಣದಲ್ಲಿನ ಲ್ಯಾಬ್‌ಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಹಾಗೂ ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು.ಇಲಾಖೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ನೋಟಿಸ್ ಜಾರಿ ಮಾಡಿ ಎಂದರು.

ಜನೌಷಧ ಕೇಂದ್ರ ಬಾಗಿಲು ಮುಚ್ಚಿರುವುದನ್ನು ಕಂಡು ಸರ್ಕಾರಿ ಆಸ್ಪತ್ರೆ ವ್ಯಾಪ್ತಿ ಸಮಯಕ್ಕೆ ಸರಿಯಾಗಿ ರೋಗಿಗಳಿಗೆ ಔಷಧಿ ವಿತರಣೆ ಮಾಡಲಿ ಇಲ್ಲವಾದರೆ ಸಂಪೂರ್ಣವಾಗಿ ಬಾಗಿಲು ಮುಚ್ಚಲು ತಿಳಿಸಿರಿ. ಅಲ್ಲದೆ ಮಳಿಗೆ ಮೇಲೆ ಸಂಪರ್ಕಿಸುವ ಸಮಯವನ್ನು ಏಕೆ  ಬರೆಸಿಲ್ಲಾ ಎಂದು ಪ್ರಶ್ನಿಸಿದರು.

ಸಾರ್ವಜನಿಕ ಆಸ್ಪತ್ರೆ ಒಳ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ  ಗುಣಮಟ್ಟದ ಊಟದ ವ್ಯವಸ್ಥೆ ಒದಗಿಸಲು ಏಜೆನ್ಸಿಯವರಿಗೆ ತಿಳಿಸಬೇಕು ಎಂದು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಷಣ್ಮುಖಪ್ಪ ಅವರಿಗೆ ತರಾಟೆಗೆ ತೆಗೆದುಕೊಂಡರು.

ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ವಿಶ್ವನಾಥ್ ಮಾತನಾಡಿ, ತಾಲ್ಲೂಕಿನಲ್ಲಿ 12 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಪ್ರತಿ ಮನೆಗೆ ತೆರಳಿ ಲಾರ್ವ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಮುಖಂಡ ವೆಂಕಟೇಶ್, ಬಿ. ಮಹೇಶ್ವರಪ್ಪ, ಸಿ. ಲಕ್ಷ್ಮಣ, ಹಟ್ಟಿ ತಿಪ್ಪೇಸ್ವಾಮಿ, ಪಲ್ಲಾಗಟ್ಟೆ ಶೇಖರಪ್ಪ, ಡಾ. ಮಂಜುನಾಥ್, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಷಣ್ಮು ಖಪ್ಪ, ನೌಕರರ ಸಂಘದ ಅಧ್ಯಕ್ಷ ಸಿ.ಬಿ. ನಾಗರಾಜ್  ಸೇರಿದಂತೆ ವೈದ್ಯರುಗಳು ಹಾಜರಿದ್ದರು.

error: Content is protected !!