ಸಚಿವ ಎಸ್ಸೆಸ್ಸೆಂ
ಬೆಂಗಳೂರು, ಮಾ. 7 – ರಾಜ್ಯ ಸರ್ಕಾರದ ನಿರಂತರ ಪ್ರಯತ್ನದಿಂದ ಉತ್ತರ ಕನ್ನಡ ಜಿಲ್ಲೆಯ ಅರ್ಹ ರೈತರಿಗೆ ಸುಮಾರು 71 ಕೋಟಿ ವಿಮಾ ಮೊತ್ತ ಸಂದಾಯವಾಗಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ 195 ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಒಟ್ಟು 18,896 ಹೆಕ್ಟೇರ್ ಪ್ರದೇಶಕ್ಕೆ, 41,694 ಪ್ರಸ್ತಾವನೆಗಳಿಗೆ ವಿಮಾ ಚಂದಾದಾರಿಕೆ ಆಗಿದ್ದು, ರೈತರು 12.03 ಕೋಟಿ ರೂಪಾಯಿಗಳ ಪ್ರೀಮಿಯಂ ಹಣವನ್ನು ಭರಿಸಿದ್ದರು. ಆದರೆ ಕ್ಷೇಮಾ ಜನರಲ್ ಇನ್ಸೂರೆನ್ಸ್ ಕಂಪನಿಯವರು 136 ಗ್ರಾಮ ಪಂಚಾಯತ್ಗಳಲ್ಲಿ ಹವಾಮಾನ ದತ್ತಾಂಶ ಕೊರತೆಯನ್ನು ತೋರಿಸಿ, ಕೇವಲ 59 ಗ್ರಾಮ ಪಂಚಾಯತಿಗಳಲ್ಲಿ 12,296 ಪ್ರಸ್ತಾವನೆಗಳಿಗೆ 2,846 ಹೆಕ್ಟೇರ್ ಪ್ರದೇಶಕ್ಕೆ ಮಾತ್ರ 11.62 ಕೋಟಿ ರೂಪಾಯಿಗಳ ವಿಮಾ ಮೊತ್ತವನ್ನು ಪಾವತಿಸಿ ಕೈ ಚೆಲ್ಲಿದ್ದರು.
ವಿಮಾ ಕಂಪನಿಯವರ ಅವೈಜ್ಞಾನಿಕ ಸಮೀಕ್ಷೆಯಿಂದ ರೈತರು ತೊಂದರೆಗೆ ಸಿಲುಕಿದ್ದಾರೆಂದು ತೋಟಗಾರಿಕಾ ಅಧಿಕಾರಿಗಳು ತಮ್ಮ ಗಮನಕ್ಕೆ ತಂದಿದ್ದರು. ರೈತರಿಗೆ ನ್ಯಾಯವನ್ನು ಒದಗಿಸಲು ರಾಜ್ಯ ಸರ್ಕಾರವು ನಿರಂತರ ಪ್ರಯತ್ನ ಮಾಡಿತ್ತು. ಅನಿವಾರ್ಯ ಕಾರಣಗಳಿಂದ ಕೇಂದ್ರದ ಮೊರೆ ಹೋಗಲಾಗಿತ್ತು.
ದಾಖಲೆಗಳ ಮೂಲಕ ಸ್ಪಷ್ಟೀಕರಣವನ್ನು ರಾಜ್ಯ ತೋಟಗಾರಿಕಾ ಇಲಾಖೆಯಿಂದ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಮಂತ್ರಾಲಯವು ವಿಮಾ ಕಂಪನಿಗೆ ಏಳು ದಿನಗಳ ಒಳಗಾಗಿ ಬಾಕಿ ಇರುವ 136 ಗ್ರಾಮ ಪಂಚಾಯತಿಗಳಿಗೆ ವಿಮಾ ಪರಿಹಾರ ಹಣವನ್ನು ರೈತರ ಖಾತೆಗೆ ಜಮಾ ಮಾಡಲು ಸೂಚಿಸಿದೆ.
ಈ ಆದೇಶದಿಂದ ಶೀಘ್ರದಲ್ಲಿಯೇ ಅಂದಾಜು 71 ಕೋಟಿ ರೂ. ವಿಮಾ ಪರಿಹಾರ ಮೊತ್ತವು ರೈತರ ಖಾತೆಗಳಿಗೆ ಜಮಾ ಆಗಲಿದೆ. ರೈತರೊಂದಿಗೆ ಕಾಂಗ್ರೆಸ್ ಸರ್ಕಾರವು ಸದಾ ಜೊತೆಯಲ್ಲಿರುವುದು ಎಂದು ಸಚಿವರು ತಿಳಿಸಿದ್ದಾರೆ.