ಯುಬಿಡಿಟಿ ಉಳಿಸಿ: ದಾವಣಗೆರೆ ಬಂದ್‌ಗೆ ಸಿಪಿಐ – ಎಐಟಿಯುಸಿ ಬೆಂಬಲ

ದಾವಣಗೆರೆ, ಅ.13- ನಗರದ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶೇ.50 ಪೇಮೆಂಟ್ ಸೀಟುಗಳನ್ನು ರದ್ದುಪಡಿಸಿ ಸೀಟು ಮಾರಾಟ ನಿಲ್ಲಿಸಿ ಎಂದು ಎಐಡಿಎಸ್ಓ ಸಂಘಟನೆ ಮತ್ತು ಯುಬಿಡಿಟಿ ವಿದ್ಯಾರ್ಥಿ ಹೋರಾಟ ಸಮಿತಿಯು ಇದೇ ದಿನಾಂಕ 16 ರಂದು ದಾವಣಗೆರೆ ಬಂದ್‌ಗೆ ನೀಡಿರುವ ಕರೆ ಹಿನ್ನೆಲೆಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಮಂಡಳಿ ಮತ್ತು ಎಐಟಿಯುಸಿ ಜಿಲ್ಲಾ ಸಮಿತಿ ಬೆಂಬಲ ನೀಡಿ ಭಾಗವಹಿಸಲಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್. ಜಿ. ಉಮೇಶ್ ತಿಳಿಸಿದ್ದಾರೆ.

ಕಳೆದ ಒಂದು ತಿಂಗಳಿಗಿಂತ ಹೆಚ್ಚು ದಿನಗಳಿಂದ ಯುಬಿಡಿಟಿ ಉಳಿಸಿ ವಿದ್ಯಾರ್ಥಿ ಚಳುವಳಿ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಈ ಬಂದ್‌ಗೆ ಕರೆ ನೀಡಲಾಗಿದೆ. ಬಂದ್‌ನಲ್ಲಿ ಸಿಪಿಐ ಮತ್ತು ಸಾಮೂಹಿಕ ಸಂಘಟನೆಗಳ ಕಾರ್ಯಕರ್ತರು ಇದೇ ದಿನಾಂಕ 16 ರ ಬೆಳಿಗ್ಗೆ 10 ಗಂಟೆಗೆ ದಾವಣಗೆರೆ ಜಯದೇವ ಸರ್ಕಲ್ ಬಳಿ ಆಗಮಿಸಬೇಕೆಂದು  ಅವರು ಕರೆ ನೀಡಿದ್ದಾರೆ.

error: Content is protected !!