ಖಾಸಗಿ ಕಂಪನಿಗಳಲ್ಲಿ ಹೂಡಿಕೆ ವಂಚನೆ : ಪರಿಹಾರಕ್ಕೆ ಆಗ್ರಹ

ದಾವಣಗೆರೆ, ಆ. 29 – ವಿವಿಧ ಖಾಸಗಿ ಕಂಪನಿಗಳಲ್ಲಿ ಹಣ ತೊಡಗಿಸಿ ವಂಚಿತರಾದ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಬರುವ ಸೆಪ್ಟೆಂಬರ್್ 1 ರಂದು ಬೆಳಿಗ್ಗೆ 11 ಗಂಟೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಸತ್ಯಾಗ್ರಹ ಧರಣಿ ನಡೆಸಲಾ ಗುವುದು ಎಂದು ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬ ಸಂಘಟನೆಯ ಉಪಾಧ್ಯಕ್ಷ ಮಧು ಎಚ್.ಎಂ ಹರೋನಹಳ್ಳಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಅಗ್ರಿ ಗೋಲ್ಡ್, ಪಿಎಸಿಎಲ್, ಸಮೃದ್ದ ಜೀವನ್, ಅಚೀವರ್ಸ್, ಇ- ಸ್ಟೋರ್ ಇಂಡಿಯಾ, ಗುರು ಟೀಕ್ ಸೇರಿದಂತೆ ವಿವಿಧ ಕಂಪನಿಗಳಲ್ಲಿ ಹಣ ತೊಡಗಿಸಿರುವವರಿಗೆ ಈ ಕಂಪನಿಗಳು ಲಕ್ಷಾಂತರ ರೂ. ವಂಚಿಸಿವೆ ಎಂದು ಆರೋಪಿಸಿದರು.

ಇದರಿಂದ ಅನೇಕರು ಹಣ ಕಳೆದುಕೊಂಡು ನೊಂದಿದ್ದಾರೆ. ಸೆಬಿ ಆದೇಶದಂತೆ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡಿರುವ ಸರ್ಕಾರಗಳು ವಂಚನೆ ಸಂತ್ರಸ್ತರಿಗೆ ಇನ್ನೂ ಹಣ ಕೊಡಿಸಿಲ್ಲ. ಕೂಡಲೇ ಹಣ ಪಾವತಿಸಲು ಆದೇಶ ನೀಡಬೇಕೆಂದು ಅವರು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ವಿವಿಧ ಕಂಪನಿಗಳಿಂದ ವಂಚನೆಗೊಳಗಾದ ಗ್ರಾಹಕರಿದ್ದೇವೆ. ರಾಜ್ಯದಲ್ಲಿ ಅಗ್ರಿ ಗೋಲ್ಡ್ ಒಂದು ಕಂಪನಿಯ ವಂಚನೆಯ ಮೊತ್ತವೇ ಸುಮಾರು 3000 ಕೋಟಿಯಷ್ಟಿದೆ. ಸಂತ್ರಸ್ತರು ದಾಖಲೆ ಸಮೇತ ಜಿಲ್ಲಾಧಿಕಾರಿ ಮತ್ತು ತಹಶಿಲ್ದಾರ್ ಕಚೇರಿಗಳಲ್ಲಿ ಮನವಿ ಸಲ್ಲಿಸಲು ವಿಶೇಷ ಆಡಳಿತ ಅವಕಾಶ ಕಲ್ಪಿಸಿದ್ದರೂ ಕಂಪನಿಗಳಿಂದ ಹಣ ಮರ ಳಿಸುವ ಕೆಲಸ ಆಗಿರುವುದಿಲ್ಲ. ಹಾಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೇರಿದಂತೆ ರಾಷ್ಟ್ರವ್ಯಾಪಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕರಿಬಸಪ್ಪ, ಸಿದ್ದಪ್ಪ, ಚಂದ್ರಶೇಖರ್, ದಾಗಿನಕಟ್ಟೆ ಜಿ.ಎಸ್.ನಾಗರಾಜು, ಮಂಜುನಾಥ್ ಉಪಸ್ಥಿತರಿದ್ದರು.

error: Content is protected !!