ರೈತರು ತೊಗರಿ ಬೆಳೆಗೆ ಕೃಷಿ ಡ್ರೋನ್ ಬಳಕೆ ಮಾಡಿ

ಬೇಸಾಯ ತಜ್ಞ ಬಿ.ಓ. ಮಲ್ಲಿಕಾರ್ಜುನ್

ಚನ್ನಗಿರಿ, ಆ. 25 – ದ್ವಿದಳ ಧಾನ್ಯಗಳ ಉತ್ಪಾದನೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಧಿಕ ಇಳುವರಿ ಕೊಡುವ ತಳಿಗಳ ಪರಿಚಯದ ಜೊತೆಗೆ ಆಧುನಿಕ ತಂತ್ರಜ್ಞಾನವಾದ ಕೃಷಿ ಡ್ರೋನ್ ಬಳಕೆಯನ್ನು ರೈತರಿಗೆ ಪರಿಚಯಿಸಬೇಕು ಎಂದು ಬೇಸಾಯ ತಜ್ಞ ಬಿ.ಓ. ಮಲ್ಲಿಕಾರ್ಜುನ್ ಹೇಳಿದರು.

ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿ ಐ.ಸಿ.ಎ.ಆರ್. ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ ಹಾಗೂ ಕೃಷಿ ಇಲಾಖೆ, ಚನ್ನಗಿರಿ ಇವರ ಸಹಯೋಗದಲ್ಲಿ  ನಡೆದ ಕೃಷಿ ಡ್ರೋನ್ ಮೂಲಕ ತೊಗರಿ ಬೆಳೆಗೆ ಸಿಂಪರಣೆ ಹಾಗೂ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ರೈತರಿಗೆ ಡ್ರೋನ್ ಬಳಕೆಯನ್ನು ಪರಿಚಯಿಸಿ ತೊಗರಿಯಲ್ಲಿ ಪಲ್ಸ್ ಮ್ಯಾಜಿಕ್ ಎಕರೆಗೆ 2 ಕೆ.ಜಿ. ಯಂತೆ ಪೋಷಕಾಂಶಗಳ ಸಿಂಪರಣೆ ಮಾಡಬೇಕು. ಡ್ರೋನ್ ಮುಖಾಂತರ ಬೆಳೆಗಳಿಗೆ ಪೋಷಕಾಂಶಗಳ ಸಿಂಪಡನೆಯನ್ನು ಹೇಗೆ ಮಾಡಬೇಕೆಂಬುದನ್ನು ತೋರಿಸುವುದರಿಂದ ರೈತರಿಗೆ ಅನುಕೂಲಕರವಾಗುತ್ತದೆ. ಕೃಷಿಯಲ್ಲಿ ಡ್ರೋನ್  ಬಳಸಿ ಸಿಂಪಡನೆ ಮಾಡುವುದರಿಂದ ನಿಖರತೆ ಹೆಚ್ಚಿಸಿ, ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದರು.

ಐ.ಸಿ.ಎ.ಆರ್. ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ. ಟಿ.ಜಿ. ಅವಿನಾಶ್‌ ಮಾತನಾಡಿ, ತೊಗರಿಯಲ್ಲಿ ಕುಡಿ ಚಿವುಟುವುದರಿಂದ ಹರೆ ಕೊಂಬುಗಳು ಜಾಸ್ತಿಯಾಗಿ ಇಳುವರಿಯನ್ನು ಹೆಚ್ಚಿಸಬಹುದು ಎಂದು ಕುಡಿ ಚಿವುಟುವುದನ್ನು ಪದ್ಧತಿ ಪಾತ್ಯಕ್ಷತೆ ಮೂಲಕ ತೋರಿಸಿದರು.

ಸಹಾಯಕ ಕೃಷಿ ನಿರ್ದೇಶಕ ಅರುಣ್ ಮಾತನಾಡಿ, ಕೃಷಿ ಇಲಾಖೆಯಲ್ಲಿನ ಸೌಲಭ್ಯಗಳ ಮಾಹಿತಿ ನೀಡಿ, ಮುಂದಿನ ದಿನಗಳಲ್ಲಿ ಕೂಲಿ ಆಳುಗಳ ಸಮಸ್ಯೆಗೆ ಡ್ರೋನ್ ಪರಿಹಾರವಾಗುತ್ತದೆ ಎಂದು ಹೇಳಿದರು.

ಸುಮಾರು 25 ಎಕರೆ ತೊಗರಿ ಬೆಳೆಗೆ ಕೃಷಿ ಡ್ರೋನ್ ಮೂಲಕ ಪೋಷಕಾಂಶಗಳ ಸಿಂಪಡನೆ ಮಾಡಿ, ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.

ಕೃಷಿ ವಿಜ್ಞಾನ ಕೇಂದ್ರದ ವಿಸ್ತರಣಾ ತಜ್ಞ ಜೆ. ರಘುರಾಜ, ಕೃಷಿ ಅಧಿಕಾರಿ ಮೆಹತಾಬ್ ಆಲಿ, ಆತ್ಮ ಯೋಜನೆ ಅಧಿಕಾರಿ ಎಂ. ಪವನ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!