ತುಂಗಭದ್ರಾ ನದಿಯಲ್ಲಿ ನೀರಿನ ಏರಿಕೆ ಸಂಭವ ಜನರಿಗೆ ಎಚ್ಚರಿಕೆಯಿಂದಿರಲು ಡಿಸಿ ಸೂಚನೆ

ತುಂಗಭದ್ರಾ ನದಿಯಲ್ಲಿ ನೀರಿನ ಏರಿಕೆ ಸಂಭವ  ಜನರಿಗೆ ಎಚ್ಚರಿಕೆಯಿಂದಿರಲು ಡಿಸಿ ಸೂಚನೆ

ದಾವಣಗೆರೆ, ಜು.28- ತುಂಗಭದ್ರಾ ನದಿಯಲ್ಲಿ 75 ಸಾವಿರ ಕ್ಯೂಸೆಕ್ಸ್‌ಗಿಂತಲೂ ಅಧಿಕ ನೀರು ಹರಿಯುತ್ತಿದ್ದು, ಭದ್ರಾ ಜಲಾಶಯ ಭರ್ತಿಗೆ ಕೆಲವೇ ಅಡಿ ಬಾಕಿ ಇರುವುದರಿಂದ, ಯಾವ ಕ್ಷಣದಲ್ಲಾದರೂ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಲಿದೆ. ಆದ್ದರಿಂದ ನದಿ ಪಾತ್ರದ ಜನ ಎಚ್ಚರಿಕೆಯಿಂದಿರಬೇಕೆಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದ್ದಾರೆ.

ಪ್ರಸ್ತುತ ತುಂಗಾ ಜಲಾಶಯದಿಂದ 74,105 ಕ್ಯೂಸೆಕ್ಸ್ ನೀರು ತುಂಗಭದ್ರಾ ನದಿಗೆ ಹರಿಯುತ್ತಿದೆ. ಮಲೆನಾಡಿನಲ್ಲಿ ಉತ್ತಮ ಮಳೆ ಆಗುತ್ತಿದ್ದರಿಂದ ಭದ್ರಾ ಜಲಾಶಯದ ಒಳಹರಿವು 35,557 ಕ್ಯೂಸೆಕ್ಸ್ ಇದ್ದು, ಜಲಾಶಯ ಭರ್ತಿಯಾಗಲು ಕೇವಲ 5 ಅಡಿ ಬಾಕಿ ಇದೆ. ಆದ್ದರಿಂದ ಯಾವ ಕ್ಷಣದಲ್ಲಾದರೂ ನದಿಗೆ ನೀರು ಬಿಡಬಹುದಾಗಿದ್ದರಿಂದ ನದಿ ತಟದ ಜನ ತಮ್ಮ ಆಸ್ತಿ, ಜಾನುವಾರುಗಳನ್ನು ರಕ್ಷಣೆ ಮಾಡಿಕೊಳ್ಳುವಲ್ಲಿ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.

ತುಂಗಾದಿಂದ ನೀರು ಬರುತ್ತಿದ್ದು, ಭದ್ರಾ ತುಂಬಿದ ನಂತರ ನದಿಯಲ್ಲಿನ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚಲಿದೆ. ಇದರಿಂದ ನದಿಯಲ್ಲಿನ ನೀರಿನ ಮಟ್ಟ ಅಪಾಯ ಮಟ್ಟದಲ್ಲಿರುತ್ತದೆ. ಆದ್ದರಿಂದ ಹೊನ್ನಾಳಿ, ನ್ಯಾಮತಿ, ಹರಿಹರ ತಾಲ್ಲೂಕುಗಳಲ್ಲಿನ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ.

ಹೊನ್ನಾಳಿ ಪಟ್ಟಣದ ನದಿ ತೀರದ ಬಾಲರಾಜ್‌ ಘಾಟ್ ಪ್ರದೇಶದ 11 ಕುಟುಂಬದ 64 ಜನರನ್ನು ಅಂಬೇಡ್ಕರ್ ಭವನದಲ್ಲಿನ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ ಮತ್ತು ನದಿ ಪಾತ್ರದಲ್ಲಿನ ಎಲ್ಲಾ ಗ್ರಾಮಗಳಲ್ಲಿ ಜನ, ಜಾನುವಾರುಗಳನ್ನು ನದಿಗೆ ಇಳಿಯದಂತೆ ಎಚ್ಚರ ವಹಿಸಲು ಜಾಗೃತಿ ಮೂಡಿಸಲಾಗಿದೆ. 

ಪ್ರವಾಹ ಪರಿಸ್ಥಿತಿ ಎದುರಿಸಲು ಗ್ರಾಮ ಮಟ್ಟದ ಟಾಸ್ಕ್‌ಫೋರ್ಸ್‌ ಸಮಿತಿ ರಚಿಸಲಾಗಿದೆ. ಎನ್‌ಡಿ ಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ ತುರ್ತು ನಿಗಾ ಘಟಕಗಳನ್ನು ಸನ್ನದ್ಧವಾಗಿಡಲಾಗಿದ್ದು, ಅಧಿಕಾರಿಗಳಿಗೆ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ.

ತುರ್ತು ಸಹಾಯವಾಣಿ : ಜಿಲ್ಲಾಧಿಕಾರಿ ಕಚೇರಿ 08192-234034, 1077, ಎಸ್‌ಡಿಆರ್‌ಎಫ್ ಘಟಕ, ದೇವರಬೆಳೆಕೆರೆ 7411308591, ದಾವಣಗೆರೆ ಅಗ್ನಿಶಾಮಕ ಇಲಾಖೆ 08192-258101, 112, ದಾವಣಗೆರೆ ಮಹಾನಗರ ಪಾಲಿಕೆ 08192-234444, 8277234444, ದಾವಣಗೆರೆ ತಾ: ಕಚೇರಿ 9036396101, ಹರಿಹರ 08192-272959, ಜಗಳೂರು 08196-227242, ಹೊನ್ನಾಳಿ 08188-252108, ನ್ಯಾಮತಿ 80739 51245, ಚನ್ನಗಿರಿ 7892481962 ದೂರವಾಣಿ, ಮೊಬೈಲ್ ಸಂಖ್ಯೆಗೆ ಕರೆ ಮಾಡಲು ಕೋರಲಾಗಿದೆ.

error: Content is protected !!