ದಾವಣಗೆರೆ, ಜು. 25- ಕೃಷಿಯಲ್ಲಿ ನೀರನ್ನು ವೈಜ್ಞಾನಿಕವಾಗಿ ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ಸರ್ಕಾರ ಚಿಂತನೆ ನಡೆಸಲಿ ಹಾಗೂ ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ಮುಂದಾಗಲಿ ಎಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಕೆ.ಎಸ್. ಶಿವಕುಮಾರಪ್ಪ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಟಿ ಮೂಲಕ ಭತ್ತ ಬೆಳೆಯುವುದನ್ನು ತಡೆದು, ಬಿತ್ತನೆ ವಿಧಾನ ಮೂಲಕ ಬೆಳೆಯಲು ರೈತರ ಮನ ಪರಿವರ್ತನೆಗೆ ಸರ್ಕಾರ ಮುಂದಾಗಬೇಕು. ನೀರಿನ ಸಮರ್ಪಕ ನಿರ್ವಹಣೆ ಹೆಸರಲ್ಲಿ ಕಾನೂನು ಜಾರಿಗೆ ತರಬೇಕು. ಆಗ ಶೇ.50ರಷ್ಟು ನೀರು ಉಳಿತಾಯ ಮಾಡಬಹುದು ಎಂದು ಅಭಿಪ್ರಾಯಿಸಿದರು.
ಕರ್ನಾಟಕ ನೀರಾವರಿ ಅಧಿನಿಯಮ-1965ರ ತಿದ್ದುಪಡಿ ಕಾಯ್ದೆಯಿಂದ ರೈತರಿಗೆ ಉಪಯೋಗವಿಲ್ಲ. ಬದಲಾಗಿ ಅಧಿಕಾರಿಗಳಿಗೆ ಭ್ರಷ್ಟಾಚಾರ ನಡೆಸಲು ಉಪಯೋಗವಾಗಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಆದಿಲ್ ಖಾನ್, ಸುರೇಶ್ ಶಿಡ್ಲಾಪುರ, ಧರ್ಮಾನಾಯ್ಕ, ಅಜಿತ್ ಕುಮಾರ್ ಇದ್ದರು.