ರಂಜಾನ್: ನಗರದಲ್ಲಿ ಇಂದು ಮುಸ್ಲಿಂ ಬಾಂಧವರಿಗೆ ಹಣ್ಣು ವಿತರಣೆ

ದಾವಣಗೆರೆ, ಏ. 5-  ರಂಜಾನ್ ಹಬ್ಬದ ಪ್ರಯುಕ್ತ ಉಪವಾಸ ಕೈಗೊಂಡಿರುವ ಮುಸ್ಲಿಂ ಬಾಂಧವರಿಗೆ ನಾಳೆ ದಿನಾಂಕ 6 ರ ಶನಿವಾರ ವಿನೋಬನಗರ 2 ನೇ ಮುಖ್ಯರಸ್ತೆಯಲ್ಲಿರುವ ಮಸೀದಿಯ ಬಳಿ ಪ್ರಾರ್ಥನೆಯ  ನಂತರ ಹೆಚ್.ಎಸ್. ದೊಡ್ಡೇಶ್ ಸ್ನೇಹ ಬಳಗದ  ವತಿಯಿಂದ ಹಣ್ಣು-ಹಂಪಲು ವಿತರಣೆ ಮಾಡುವ ಮೂಲಕ ರಂಜಾನ್ ಶುಭಾಶಯ ಕೋರಲಾಗುವುದು ಎಂದು ಅಧ್ಯಕ್ಷ ದೊಡ್ಡೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇದೇ ದಿನಾಂಕ 11 ರಂದು ಗುರುವಾರ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಶ್ರದ್ಧಾ- ಭಕ್ತಿಯಿಂದ ಆಚರಿಸಲಿದ್ದು, ಇನ್ನೊಬ್ಬರ ಹಸಿವನ್ನು ಅರಿಯುವ ಸಲುವಾಗಿ ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ಉಪವಾಸ ಆಚರಣೆ ಮಾಡಬೇಕೆಂದು ಸಾರಿದ್ದರು ಎಂದು ದೊಡ್ಡೇಶ್ ಮಾಹಿತಿ ನೀಡಿದರು.

ನಮ್ಮ  ಸುತ್ತ ಮುತ್ತ ವಾಸಿಸುತ್ತಿರುವ ಬಡವರು, ನಿರ್ಗತಿಕರು, ಹಸಿವಿನಿಂದ ತುಂಬಾ ತೊಂದರೆ ಅನುಭವಿಸುತ್ತಿರುವ ಬಗ್ಗೆ ರೋಜಾ (ಉಪವಾಸ) ಮೂಲಕ ನಾವು ತಿಳಿದುಕೊಂಡು ಅವರಿಗೆ ಆರ್ಥಿಕವಾಗಿ ನೆರವು ನೀಡಬಹುದಾಗಿದೆ. ಇಸ್ಲಾಂ ಧರ್ಮ ಇಡೀ ಮನು ಕುಲಕ್ಕೆ ರೋಜಾ ಆಚರಣೆಯ ನೈತಿಕ ಮೌಲ್ಯದ ಸಂದೇಶವನ್ನು ಸಾರುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಳಗದ ಪರಶುರಾಮ್, ಶೇರ್‌ಅಲಿ, ರೆಹಮಾನ್ ಖಾನ್, ವಿನಾಯಕ ಮತ್ತಿತರರಿದ್ದರು.

error: Content is protected !!