ನಗರದಲ್ಲಿ ಇಂದು ಸಿಪಿಐನಿಂದ ಪ್ರಜಾಪ್ರಭುತ್ವದ ಉಳಿವಿಗಾಗಿ ರಾಜಕೀಯ ಸಮಾವೇಶ

ದಾವಣಗೆರೆ, ಮಾ. 31-ಸಂವಿಧಾನ, ಪ್ರಜಾತಂತ್ರ, ,ಬಹುತ್ವ ಭಾರತ ಉಳಿಸಲು ಭಾರತ ಕಮ್ಯುನಿಸ್ಟ್ ಪಕ್ಷದ ದಾವಣಗೆರೆ ಜಿಲ್ಲಾ ಮಂಡಳಿ ನೇತೃತ್ವದಲ್ಲಿ ನಾಳೆ ದಿನಾಂಕ 1ರ ಸೋಮವಾರ ರಾಜಕೀಯ ಸಮಾವೇಶ ನಡೆಸಲಾಗುವುದು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ   ಆವರಗೆರೆ ಚಂದ್ರು ತಿಳಿಸಿದ್ದಾರೆ.

ನಗರದ ಜಯದೇವ ವೃತ್ತದ ಬಳಿ ಇರುವ ಶಿವಯೋಗ ಮಂದಿರದ ಆವರಣದಲ್ಲಿ ನಡೆಯುವ ಈ ಸಮಾವೇಶವನ್ನು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯರಾದ ಕಾಂ. ಪಿವಿ ಲೋಕೇಶ್ ಉದ್ಘಾಟಿಸಿ ಮಾತನಾಡುವರು.

ಸಿಪಿಐ ರಾಜ್ಯ ಮಂಡಳಿ ಕಾರ್ಯದರ್ಶಿ ಕಾಂ. ಸಾತಿ ಸುಂದರೇಶ್ ಪ್ರಧಾನಿ ಮೋದಿ ಅವರು ಕಳೆದ ಹತ್ತು ವರ್ಷಗಳಲ್ಲಿ ನೀಡಿದ ಹುಸಿ ಭರವಸೆಗಳ ಪುಸ್ತಕವನ್ನು ಬಿಡುಗಡೆಗೊಳಿಸಿ ಪ್ರಾಸ್ತಾವಿಕವಾಗಿ ಮಾತನಾಡುವರು. ಉಳಿದಂತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಹೆಚ್.ಬಿ. ಮಂಜಪ್ಪ, ದಿನೇಶ್ ಕೆ.ಶೆಟ್ಟಿ, ಸಿಪಿಐ ಜಿಲ್ಲಾ ಖಜಾಂಚಿ ಆನಂದರಾಜ್, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಶಿವಕುಮಾರಪ್ಪ ಮತ್ತು ಅರುಣ್ ಕುಮಾರ್, ಜಬೀನಾ ಖಾನಂ ಸೇರಿದಂತೆ ಮತ್ತಿತರರು ಸಮಾವೇಶದಲ್ಲಿ ಅತಿಥಿಗಳಾಗಿ ಭಾಗವಹಿಸುವರು.

ಸಮಾವೇಶದ ಆರಂಭಕ್ಕೂ ಮೊದಲು ಬೆಳಿಗ್ಗೆ
11 ಗಂಟೆಗೆ ಗಾಂಧಿ ಸರ್ಕಲ್‌ನಿಂದ ಕಾರ್ಯಕರ್ತರು ಮೆರವಣಿಗೆಯಲ್ಲಿ ಅಶೋಕ ರಸ್ತೆ ಮೂಲಕ ಶಿವಯೋಗ ಮಂದಿರಕ್ಕೆ ಆಗಮಿಸಿದ ನಂತರ, ರಾಜಕೀಯ ಸಮಾವೇಶ ಆರಂಭಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

ಸಿಪಿಐ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷದ ಎಲ್ಲಾ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸುವಂತೆ ಸಿಪಿಐ ಜಿಲ್ಲಾ ಸಹಕಾರ್ಯದರ್ಶಿಗಳಾದ ಹೆಚ್.ಜಿ. ಉಮೇಶ್ ಆವರಗೆರೆ, ಆವರಗೆರೆ ವಾಸು, ಮುಖಂಡರುಗಳಾದ ಎಂ.ಬಿ.ಶಾರದಮ್ಮ, ಕೆರನಹಳ್ಳಿ ರಾಜು ಕರೆ ನೀಡಿದ್ದಾರೆ.

error: Content is protected !!