ಲೋಕಸಭಾ ಚುನಾವಣೆ: ಎಐಡಿಎಸ್‌ಓ ಪ್ರಣಾಳಿಕೆ

ಎಲ್ಲಾ ಸರ್ಕಾರಗಳು ದೇಶದ ನೈಜ ಸಮಸ್ಯೆಗಳನ್ನು ಮರೆಮಾಚುತ್ತಿವೆ: ಪೂಜಾ ನಂದಿಹಳ್ಳಿ

ದಾವಣಗೆರೆ, ಮಾ.19- ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಪ್ರಜಾತಾಂತ್ರಿಕವಾಗಿ ಹೇರಿರುವ ಎನ್ಇಪಿಯನ್ನು ಹಿಂಪಡೆಯಬೇಕು, ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಬೇಕು, ನಾಲ್ಕು ವರ್ಷದ ಪದವಿಯನ್ನು ಹಿಂಪಡೆಯಬೇಕು ಇತ್ಯಾದಿ ಬೇಡಿಕೆಗಳ  ಪ್ರಣಾಳಿಕೆಯನ್ನು ಎಐಡಿಎಸ್‌ಓ ಜಿಲ್ಲಾ ಸಮಿತಿ ಬಿಡುಗಡೆ ಮಾಡಿದೆ.

ಜಯದೇವ ವೃತ್ತದಲ್ಲಿ ನಡೆದ ಸಭೆಯಲ್ಲಿ ಎಐಡಿಎಸ್‌ಓ ಜಿಲ್ಲಾ ಅಧ್ಯಕ್ಷರಾದ ಪೂಜಾ ನಂದಿಹಳ್ಳಿ ಮಾತನಾಡಿ, ಎಲ್ಲಾ ಸರ್ಕಾರಗಳು ದೇಶದ ನೈಜ ಸಮಸ್ಯೆಗಳನ್ನು ಮರೆಮಾಚುತ್ತಿವೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜಾತಿ-ಧರ್ಮದ ವಿಷಯಗಳನ್ನು ಮುನ್ನೆಲೆಗೆ ತರಲು ಯತ್ನಿಸುತ್ತಿವೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಂಸತ್‌ನಲ್ಲಿ  ಚರ್ಚೆ ಮಾಡುವ ರೀತಿ ವಿದ್ಯಾರ್ಥಿಗಳು ಪ್ರಜ್ಞಾವಂತಿಕೆಯಿಂದ ಧ್ವನಿಯೆತ್ತಬೇಕಿದೆ ಎಂದರು.

 ಈ ಕೆಳಗಿನ  ನಮ್ಮ   ಆಗ್ರಹಗಳು ಚುನಾವಣೆಯಲ್ಲಿ ಚರ್ಚೆ ಆಗಬೇಕೆಂದು ಪೂಜಾ ಒತ್ತಾಯಿಸಿದರು.

ರಾಜ್ಯದಲ್ಲಿ ಅಪ್ರಜಾತಾಂತ್ರಿಕವಾಗಿ ಹೇರಿರುವ  ಎನ್‌ಇಪಿ-2020 ಅನ್ನು ಹಿಂಪಡೆಯಿರಿ. ಜನಪರ ಶಿಕ್ಷಣ ನೀತಿಯನ್ನು ರೂಪಿಸಿ. ಶಿಕ್ಷಣಕ್ಕಾಗಿ ಕೇಂದ್ರ ಬಜೆಟ್‌ನಿಂದ 10% ಮತ್ತು ರಾಜ್ಯ ಬಜೆಟ್‌ನಿಂದ 30% ರಷ್ಟು ಮೀಸಲಿಡಿ, ಸರ್ವರಿಗೂ ವೈಜ್ಞಾನಿಕ, ಧರ್ಮನಿರಪೇಕ್ಷ, ಪ್ರಜಾಸತ್ತಾತ್ಮಕ ಮತ್ತು ಉಚಿತ ಶಿಕ್ಷಣವನ್ನು ಖಾತ್ರಿಪಡಿಸಿ.

ವಿಲೀನದ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವುದನ್ನು ನಿಲ್ಲಿಸಿ.  ಎಲ್ಲಾ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಸುಧಾರಿಸಲು ಹಣವನ್ನು ಬಿಡುಗಡೆ ಮಾಡಿ ಮತ್ತು ಹೆಚ್ಚಿನ ಸರ್ಕಾರಿ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಿ.

ಅಗತ್ಯವಿರುವ ಸಂಖ್ಯೆಯಲ್ಲಿ ಎಲ್ಲಾ ಸೌಲಭ್ಯ ಗಳನ್ನು ಹೊಂದಿರುವ ಹಾಸ್ಟೆಲ್ ಸೌಲಭ್ಯವನ್ನು ಒದಗಿಸಿ.  ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ, ಶೈಕ್ಷಣಿಕ ಅನುದಾನಗಳು ಮತ್ತು ವಿದ್ಯಾರ್ಥಿವೇತನಗಳ ಸರಿಯಾದ ವಿತರಣೆಯನ್ನು ಖಾತ್ರಿಪಡಿಸಿ.  ಅಪ್ರಜಾತಾಂತ್ರಿಕವಾಗಿ ಹೇರಿದ ನಾಲ್ಕು ವರ್ಷಗಳ ಪದವಿ ಕೋರ್ಸ್ ಹಿಂತೆಗೆದುಕೊಳ್ಳಿ.

ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಒದಗಿಸಿ.  ವಿದ್ಯಾರ್ಥಿಗಳಿಗೆ ನೈಜ ವೈಜ್ಞಾನಿಕ ಜ್ಞಾನವನ್ನು ಪಠ್ಯದ ಮೂಲಕ ಒದಗಿಸಿ. ಪಠ್ಯಪುಸ್ತಕದಲ್ಲಿ ನಮ್ಮ ದೇಶದ ನವೋದಯದ ಮಹಾನ್ ವ್ಯಕ್ತಿಗಳು ಹಾಗೂ ಕ್ರಾಂತಿಕಾರಿಗಳ ಜೀವನ ಹೋರಾಟಗಳನ್ನು ಸೇರಿಸಿ.  ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ವಿದೇಶಿ ವಿಶ್ವವಿದ್ಯಾಲಯಗಳು ನಮ್ಮ ದೇಶದಲ್ಲಿ ಬೇಡ. ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಸರಿಯಾದ ಅನುದಾನ ನಿಗದಿ ಮಾಡಿ.  ಎಲ್ಲಾ ಪದವಿ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಶುಲ್ಕ ಹೆಚ್ಚಳಕ್ಕೆ ಕಡಿವಾಣ ಹಾಕಿ.

ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಎಲ್ಲಾ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿ.  ಶಿಕ್ಷಣದ ಸ್ವ-ಹಣಕಾಸು ವ್ಯವಸ್ಥೆಯನ್ನು ಉತ್ತೇಜಿಸುವುದನ್ನು ನಿಲ್ಲಿಸಿ.  ಎಲ್ಲಾ ಸರ್ಕಾರಿ ಕಾಲೇಜುಗಳಲ್ಲಿ  ನೀಟ್ ಜೆಇಇ ಮೇನ್, ಜೆಇಇ ಅಡ್ವಾನ್ಸಡ್   ಆಕಾಂಕ್ಷಿಗಳಿಗೆ ಉಚಿತ ಕೋಚಿಂಗ್ ಅನ್ನು ಒದಗಿಸಿ.  ಸಾರ್ವಜನಿಕ ಬಜೆಟ್‌ನ ಶೇ. 3  ಅನ್ನು ಸಂಶೋಧನೆಗೆ ಮತ್ತು ಒಟ್ಟು ಜಿಡಿಪಿಯ ಶೇ. 3  ಅನ್ನು ಸಂಶೋಧನೆಗೆ ನಿಯೋಜಿಸಿ ಮತ್ತು ಎಲ್ಲಾ ಸಂಶೋಧನಾ ವಿದ್ಯಾರ್ಥಿಗಳಿಗೆ ಗೌರವಾನ್ವಿತ ಮತ್ತು ನಿಯಮಿತ ಫೆಲೋಶಿಪ್ ಖಚಿತಪಡಿಸಿ.  ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಿ ಎಂದು  ಪ್ರಣಾಳಿಕೆಯಲ್ಲಿ  ಒತ್ತಾಯಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ಸುಮನ್ ಟಿ. ಎಸ್., ಜಿಲ್ಲಾ ಉಪಾಧ್ಯಕ್ಷೆ ಧನುಶಾ, ಸುನಿಲ್, ಅಭಿಷೇಕ್, ವಿಕಾಸ್, ಅನುಷಾ ಸೇರಿದಂತೆ, ಇನ್ನಿತರರು ಭಾಗವಹಿಸಿದ್ದರು.

error: Content is protected !!