ಐದು ಜನ ಅಂತರ್‌ರಾಜ್ಯ ದರೋಡೆಕೋರರ ಬಂಧನ

ದಾವಣಗೆರೆ,ಮಾ.19- ಇಲ್ಲಿನ ಚೌಡೇಶ್ವರಿ ದೇವಸ್ಥಾನದ ಹತ್ತಿರದ ಮಾಗಾನಹಳ್ಳಿ ರಸ್ತೆಯಲ್ಲಿ ಬಿಳಿ ಬಣ್ಣದ ಸ್ಕಾರ್ಪಿಯೋ ಕಾರು ನಿಲ್ಲಿಸಿಕೊಂಡು, ಓಡಾಡುವ ವಾಹನ ದರೋಡೆ ಮಾಡುತ್ತಿದ್ದ 5 ಜನ ಅಂತರ್ ರಾಜ್ಯ ಡಕಾಯಿತರನ್ನು ಆಜಾದ್‌ ನಗರ ಪೊಲೀಸರು ಬಂಧಿಸಿದ್ದಾರೆ.

ದುರ್ಯೋಧನ (50), ರಮೇಶ್ ಸೋಪಾನ (36), ಲಕ್ಷ್ಮಣ್ (62), ಲಕ್ಷ್ಮಣ್ (32), ಗಣೇಶ್ (37) ಇವರೆಲ್ಲರೂ ಮಹಾರಾಷ್ಟ್ರ ಮೂಲದವರಾಗಿದ್ದಾರೆ.

ಬಂಧಿತರಿಂದ ಶಾಕ್ ಅಬ್ಜರ್ ಪೈಪ್, ಕಬ್ಬಿಣದ ರಾಡ್, ಕಬ್ಬಿಣದ ನಲ್ಲಿ ಪೈಪ್, ಜಾಲರಿ ಕಟ್ಟರ್, ವೈರ್ ಕಟ್ಟರ್, ಚಾಕು, 6 ಸಣ್ಣ ಬ್ಲೇಡ್ ಚಾಕುಗಳು, 3 ಜೊತೆ ಹ್ಯಾಂಡ್ ಗ್ಲೌಸ್, 15 ಅಡಿ ಉದ್ದದ 3 ಹಗ್ಗಗಳು, 5 ಕಪ್ಪು ಬಣ್ಣದ ಮಾಸ್ಕ್, 5 ಕಾರದ ಪುಡಿ ಪಾಕೆಟ್‌ಗಳು, ಗಮ್ ಟೇಪ್, ಬ್ಯಾಗ್, ಎರಡು MH-42-BJ-5141 ಸಂಖ್ಯೆಯ ನಂಬರ್ ಪ್ಲೇಟ್‌ಗಳು, ಸ್ಕಾರ್ಪಿಯೋ ಕಾರ್ ವಶಪಡಿಸಿಕೊಳ್ಳಲಾಗಿದೆ.

ಓಡಾಡುವ ವಾಹನ ನಿಲ್ಲಿಸಿ ದರೋಡೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ತಿಳಿದ ಪೊಲೀಸ್ ಅಧೀಕ್ಷಕರು, ಪೊಲೀಸ್ ಉಪಾಧೀಕ್ಷಕರಿಗೆ ಸೂಚನೆ ನೀಡಿದಾಗ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ನಗರ ಪೊಲೀಸ್ ಉಪಾಧೀಕ್ಷಕರು, ಆಜಾದ್ ನಗರ ಪೊಲೀಸ್ ಠಾಣೆ ನಿರೀಕ್ಷಕ ಅಶ್ವಿನ್ ಹಾಗೂ ಜಿಲ್ಲಾ ಡಿ.ಸಿ.ಆರ್.ಬಿ ಘಟಕದ ಪೊಲೀಸರ ತಂಡ ದಾಳಿ ನಡೆಸಿ ದರೋಡೆಕೋರರನ್ನು ಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ಅಧಿಕಾರಿಗಳಾದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ ಸಂತೋಷ, ಜಿ. ಮಂಜುನಾಥ್, ನಗರ ಪೊಲೀಸ್ ಉಪಾಧೀಕ್ಷಕ ಮಲ್ಲೇಶ್ ದೊಡ್ಮನಿ, ಆಜಾದ್ ನಗರ ಪೊಲೀಸ್ ನಿರೀಕ್ಷಕ ಅಶ್ವಿನ್, ಸಿಬ್ಬಂದಿಗಳಾದ ಕೆ.ಟಿ. ಆಂಜನೇಯ, ಕೆ.ಸಿ. ಮಜೀದ್, ರಾಘವೇಂದ್ರ, ಬಾಲರಾಜ್, ರಮೇಶ್ ನಾಯ್ಕ್, ಮಂಜುನಾಥ ನಾಯ್ಕ್, ಕೃಷ್ಣ ನಂದ್ಯಾಲ್, ತಿಪ್ಪೇಸ್ವಾಮಿ, ಡಿ.ಬಿ. ನಾಗರಾಜ, ವೆಂಕಟೇಶ್, ನಾಗರಾಜ್, ಜಿಲ್ಲಾ ಪೊಲೀಸ್ ಕಛೇರಿಯ ರಾಘವೇಂದ್ರ, ಶಾಂತರಾಜು ಮತ್ತು ಇತರರು ಯಶಸ್ವಿಯಾಗಿದ್ದು, ಎಸ್ಪಿ ಉಮಾ ಪ್ರಶಾಂತ್ ಶ್ಲ್ಯಾಘಿಸಿದ್ದಾರೆ.

error: Content is protected !!