ನಗರದಲ್ಲಿ ರಸ್ತೆ ಬದಿ ನಿಂತಿದ್ದ ಕಾರ್‌ಗೆ ಬೆಂಕಿ

ನಗರದಲ್ಲಿ ರಸ್ತೆ ಬದಿ ನಿಂತಿದ್ದ ಕಾರ್‌ಗೆ ಬೆಂಕಿ

ದಾವಣಗೆರೆ, ಮಾ. 18- ನಗರದ ಹದಡಿ ರಸ್ತೆಯ ವಿಶಾಲ್ ಮಾರ್ಟ್ ಎದುರು ನಿಲ್ಲಿಸಿದ್ದ ಕಾರೊಂದರಲ್ಲಿ ಬೆಂಕಿ ಕಾಣಿಸಿಕೊಂಡು, ಕಾರು ಬಹುತೇಕ ಸುಟ್ಟು ಕರಕಲಾದ ಘಟನೆ ಸೋಮವಾರ ಮಧ್ಯಾಹ್ನ 1.20ರ ವೇಳೆ ನಡೆದಿದೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ನಾಗಾನಾಯ್ಕ್‌ ಅವರು ವಿಶಾಲ್ ಮಾರ್ಟ್‌ನಲ್ಲಿ  ಬಟ್ಟೆ ಖರೀದಿಗೆಂದು  ಕಾರು ಪಾರ್ಕ್‌ ಮಾಡಿದ್ದರು.  ತುಸು ಹೊತ್ತಿನಲ್ಲಿಯೇ ಕಾರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿಶಾಲ್ ಮಾರ್ಟ್‌ ಬಳಿ ಇದ್ದ ಕೆಲವರು ಕಾರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ಮಾರ್ಟ್‌ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ. ಕೂಡಲೇ ಸಿಬ್ಬಂದಿಗಳು ಬೆಂಕಿ ನಂದಿಸಲು ಯತ್ನಿಸಿದ ರಾದರೂ, ಬೆಂಕಿ ಹೆಚ್ಚಾಗಿ ದ್ದರಿಂದ ನಂದಿಸುವಲ್ಲಿ ವಿಫಲರಾಗಿದ್ದಾರೆ. ನಂತರ ಅಗ್ನಿ ಶಾಮಕದಳಕ್ಕೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಶಾರ್ಟ್‌ ಸರ್ಕ್ಯೂಟ್‌ನಿಂದ ಕಾರ್‌ಗೆ  ಬೆಂಕಿ ಹತ್ತಿರಬಹುದು ಎಂದು ಅಂದಾಜಿಸಲಾಗಿದೆ.

`ಸರ್.ಎಂ.ವಿ. ಕಾಲೇಜಿನಲ್ಲಿ ನನ್ನ ಮಗ ದ್ವಿತೀಯ ಪಿಯು ಓದುತ್ತಿದ್ದು, ಪರೀಕ್ಷೆ ಮುಗಿದ ಮೇಲೆ ಮಗನನ್ನು ಕರೆದುಕೊಂಡು ಹೋಗಬೇಕಿತ್ತು. ಈ ವೇಳೆ ಒಂದಿಷ್ಟು ಬಟ್ಟೆ ಕೊಂಡುಕೊಳ್ಳಲು ವಿಶಾಲ್‌ ಮಾರ್ಟ್‌ಗೆ ಬಂದಿದ್ದೆ. ರಸ್ತೆಯಲ್ಲಿ ಕಾರ್‌ಗೆ ಬೆಂಕಿ ಹತ್ತಿದೆ ಎಂಬ ಸುದ್ದಿ ತಿಳಿದು ಹೊರ ಬರುವಷ್ಟರಲ್ಲಿ ಕಾರು ಪೂರ್ಣ ಬೆಂಕಿಗೆ ಆಹುತಿಯಾಗಿತ್ತು’ ಎಂದು ಮಾಲೀಕ ನಾಗಾನಾಯ್ಕ ನೋವು ತೋಡಿಕೊಂಡರು.

error: Content is protected !!