ತರಳಬಾಳು ಬೃಹನ್ಮಠದ ಚರಪಟ್ಟಾಧ್ಯಕ್ಷರಾಗಿದ್ದ ಲಿಂ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗೆ ಇಂದು 16ನೇ ಶ್ರದ್ಧಾಂಜಲಿ ಕಾರ್ಯಕ್ರಮ

ತರಳಬಾಳು ಬೃಹನ್ಮಠದ ಚರಪಟ್ಟಾಧ್ಯಕ್ಷರಾಗಿದ್ದ ಲಿಂ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗೆ ಇಂದು 16ನೇ ಶ್ರದ್ಧಾಂಜಲಿ ಕಾರ್ಯಕ್ರಮ

ಸಿರಿಗೆರೆ ಗ್ರಾಮದ ರೈತಾಪಿ ಕುಟುಂಬದ ಶರಣ ಶಿವಲಿಂಗಯ್ಯ, ಶರಣೆ ನೀಲಮ್ಮ ದಂಪತಿಯ ಪುಣ್ಯ ಗರ್ಭದಲ್ಲಿ 1922 ಜೂನ್ 2 ನೇ ತಾರೀಕಿನಂದು ಜನಿಸಿದ್ದ ರೇವಣಸಿದ್ಧಯ್ಯನವರಲ್ಲಿದ್ದ ಚುರುಕುತನ, ಧಾರ್ಮಿಕ ಶ್ರದ್ದೆ, ಕಾಯಕ ನಿಷ್ಠೆ, ಸಾಮಾಜಿಕ ಚಿಂತನೆಗಳನ್ನು ನೋಡಿದ  ತರಳಬಾಳು ಮಠದ 19 ನೇ ಜಗದ್ಗುರುಗಳಾಗಿದ್ದ ಶ್ರೀ ಗುರುಶಾಂತ ರಾಜದೇಶಿಕೇಂದ್ರ ಮಹಾಸ್ವಾಮಿಗಳು ಇ ವರನ್ನು ಉನ್ನತ ವ್ಯಾಸಂಗ ಮಾಡಿಸಲು ಕಾಶಿಗೆ ಕಳಿಸಿದ್ದರು. 

ಶ್ರೀ ಗುರುಶಾಂತ ರಾಜದೇಶಿಕೇಂದ್ರ ಮಹಾಸ್ವಾಮಿಗಳು ಲಿಂಗೈಕ್ಯರಾದ ನಂತರ ಯಲಹಂಕ ಶಾಖಾ ಮಠದಲ್ಲಿದ್ದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ 20 ನೇ ಜಗದ್ಗುರುಗಳಾದರು. ಮಠದಲ್ಲಿದ್ದ ಬೆಟ್ಟದಂತಹ ಸವಾಲು ಮತ್ತು ಸಮಸ್ಯೆಗಳನ್ನು ಎದುರಿಸಿ ಧೈರ್ಯವಾಗಿ ಮುನ್ನಡೆಯಲು ತಮ್ಮ ಜೊತೆಗೆ ಮತ್ತೊಬ್ಬ ಸಮಾಜ ಜೀವಿಗಾಗಿ ಹುಡುಕುತ್ತಿರುವಾಗ ಶ್ರೀ ಪೂಜ್ಯರ ಕೃಪಾದೃಷ್ಟಿಗೆ ಕಂಡ ಕಾಶಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಶ್ರೀ ರೇವಣಸಿದ್ದಯ್ಯನವರನ್ನು ಸಿರಿಗೆರೆ ಮಠಕ್ಕೆ ಕರೆಸಿಕೊಂಡು 1945 ನೆಯ ಜೂನ್ 23 ರಂದು ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಎಂಬ ಅಭಿದಾನದಿಂದ ತರಳಬಾಳು ಜಗದ್ಗುರು ಬೃಹನ್ಮಠದ ಚರಪಟ್ಟಾಧ್ಯಕ್ಷರನ್ನಾಗಿ ನೇಮಕ ಮಾಡಿದರು. ಮಲ್ಲಿಕಾರ್ಜುನ ಶ್ರೀಗಳು ಸುದೀರ್ಘ ಕಾಲ ಕಾಯಾ, ವಾಚಾ, ಮನಸಾ ತರಳಬಾಳು ಮಠದ ಶ್ರೇಯೋಭಿವೃದ್ಧಿಗೆ  ತಮ್ಮನ್ನು  ತಾವು ಅರ್ಪಿಸಿಕೊಂಡಿದ್ದರು.

ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾ ಸ್ವಾಮೀಜಿಯವರು  ಕಂಡ ಕನಸುಗಳನ್ನು ನನಸು ಮಾಡಲು ಎಲೆ ಮರೆಯ ಕಾಯಿಯಂತೆ, ಬೃಹನ್ಮಠದ ಜೀವನಾಡಿಯಂತೆ ಪ್ರಚಾರ ಬಯಸದೇ, ಸರ್ವಸಂಗ ಪರಿತ್ಯಾಗಿಗಳಾಗಿ, ಕಷ್ಟ ನಿಷ್ಠೂರಗಳಿಗೆ, ಸ್ತುತಿ ನಿಂದೆಗಳಿಗೆ ಎದೆಗುಂದದೆ, ಕೃಷಿ ಕಾಯಕವೇ ಪೂಜೆ ಎಂದು ನಂಬಿ ಶ್ರೀಮಠದ ಮತ್ತು ಶಾಖಾ ಮಠಗಳ ಹೆಸರಿನಲ್ಲಿದ್ದ  ಜಮೀನುಗಳನ್ನೆಲ್ಲಾ ಹದ್ದು ಬಸ್ತು ಮಾಡಿಸಿ, ತಮ್ಮನ್ನು ಸಂಪೂರ್ಣ ಕೃಷಿ ಕಾಯಕಕ್ಕೆ ಅಳವಡಿಸಿಕೊಂಡು ತಾವೇ ಸ್ವತಃ ಉಳುಮೆ, ಬಿತ್ತನೆ ಮಾಡಿ, ಮಾಡಿಸಿ ಅದರಲ್ಲಿ ತೆಂಗು, ಬಾಳೆ, ಅಡಿಕೆ, ಹಲಸು ಮತ್ತು ಮಾವು ಇತ್ಯಾದಿ ಗಿಡ – ಮರ – ಪೈರುಗಳನ್ನು ಬೆೆಳಸಿ, ಇಡೀ ಜಮೀನುಗಳಲ್ಲಿ ಹಚ್ಚ ಹಸಿರು ಕಂಗೊಳಿಸುವಂತೆ ಮಾಡಿದ್ದಲ್ಲದೇ, ಶ್ರೀ ಮಠಕ್ಕೆ ಲಕ್ಷಾಂತರ ರೂಪಾಯಿಗಳ ಶಾಶ್ವತ ಆದಾಯ ಬರುವಂತೆ ಮಾಡಿದ ಶ್ರೀಗಳು, ಪ್ರಗತಿ ಪರ ಕೃಷಿಕರಾಗಿ, ಕೃಷಿ ಋಷಿ, ಕೃಷಿ ತಪಸ್ವಿ, ಕಾಯಕ ಯೋಗಿ, ಕರ್ಮಯೋಗಿ ಮುಂತಾದ ಕೃಷಿ ಬಿರುದುಗಳಿಗೆ ಪಾತ್ರರಾಗಿ ದ್ದಲ್ಲದೇ, ಪೂಜ್ಯರು ಕೃಷಿ ಸಂತರಾಗಿ, ಕೃಷಿ ತಜ್ಞರಾಗಿ ಕೃಷಿ ಜ್ಞಾನವನ್ನು ಧಾರೆಯರೆದು ಅವರ ಸತ್ಯ ಶುದ್ಧ ಕಾಯಕದಿಂದ ಮಠದ ಅಭಿವೃದ್ಧಿಗೆ ಕೈ ಜೋಡಿಸಿದರು ಲಿಂಗೈಕ್ಯ ಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು.

ಶ್ರೀಗಳು ಶ್ರೀ ಮಠದಲ್ಲಿ ಪಟ್ಟಾಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಮಠದ ಆರ್ಥಿಕ, ಸಾಮಾಜಿಕ ಪರಿಸ್ಥಿತಿ ಅಷ್ಟಾಗಿ ಉತ್ತಮ ಸ್ಥಿತಿಯಲ್ಲಿರದೇ ದುಗ್ಗಾಣಿ ಮಠವಾಗಿತ್ತು. ಅಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚಾಗಿ ಇದ್ದ ಶ್ರೀ ಮಠದ ಭಕ್ತರನ್ನು ಕಾಣಲು ಹಳ್ಳಿ – ಹಳ್ಳಿಗಳಿಗೆ, ಮನೆ – ಮನೆಗಳಿಗೆ ವಾಹನ ಸೌಕರ್ಯಗಳಿಲ್ಲದಿದ್ದರೂ ಎತ್ತು ಬಂಡಿ ಕಟ್ಟಿಕೊಂಡು ಹೋಗಿ ಅಲ್ಲಿಯೇ ದೇವಸ್ಥಾನಗಳಲ್ಲಿ 4-5 ದಿನಗಳವರೆಗೆ ಬಿಡಾರ ಹೂಡಿ ಶ್ರೀ ಮಠಕ್ಕೆ ಬೇಕಾಗುವ `ದವಸ – ದಾನ್ಯಗಳನ್ನು, ಹಣವನ್ನು, ಕಾಣಿಕೆ’ಗಳನ್ನು ಭಕ್ತರಿಂದ ಸಂಗ್ರಹಿಸಿಕೊಂಡು ಬರುತ್ತಿದ್ದ ಶ್ರೀಗಳು `ಸಂಚಾರ ಮೂರ್ತಿ’ ಯೇ ಆಗಿದ್ದರು. ಇದರ ಜೊತೆಗೆ ಭಕ್ತರು ಏರ್ಪಡಿಸುತ್ತಿದ್ದ ವಿವಿಧ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಭಕ್ತರಿಗೆ ಇಷ್ಟಲಿಂಗ ಪೂಜೆ, ಸತ್ಯ – ಶುದ್ಧ – ಕಾಯಕದ ಮಹತ್ವದ ಬಗ್ಗೆ ತಿಳಿಹೇಳುವುದರೊಂದಿಗೆ ಸೋಮಾರಿತನದಿಂದ, ಮೂಢನಂಬಿಕೆಯಿಂದ, ದುಶ್ಚಟ ಗಳಿಂದ ದೂರವಿರಲು ಉಪದೇಶಿಸುತ್ತಿದ್ದರು. ಶ್ರೀಗಳ ವರ ಸತ್ಯ, ಶುದ್ಧ, ಕಾಯಕ ದಿಂದ `ಸಿರಿಗೆರೆ ಮಠ ಕೃಷಿ ಮಠ, ಸಿರಿವಂತ ಮಠವಾಗಲು’ ಜಗದ್ಗುರುಗಳವರೊಂದಿಗೆ ಹಗಲು – ಇರುಳುಗಳನ್ನು ಒಂದು ಮಾಡಿ, ಶ್ರೀ ಮಠದ ಶ್ರೇಯೋಭಿವೃದ್ಧಿಗೆ ನಿರಂತರವಾಗಿ ದುಡಿದು ಆತ್ಮ ಕಲ್ಯಾಣ ಮತ್ತು ಸಮಾಜ ಕಲ್ಯಾಣ ಸಾಧಿಸಿದ ಸಾಧಕರು. 

ಹೀಗೆ ಸಮಾಜದ ಸಮಷ್ಠಿಯ ಹಿತಕ್ಕಾಗಿ ದುಡಿದು ಜನ ಮಾನಸದಲ್ಲಿ ಶಾಶ್ವತವಾಗಿ ಉಳಿದು ಅಮರರೆನಿಸಿದ ಮೆದು ಮಾತಿನ, ಮೃದು ಹೃದಯದ ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳವರ 16ನೇ ವರ್ಷದ ಶ್ರದ್ಧಾಂಜಲಿ ಕಾರ್ಯಕ್ರಮವು ದಿನಾಂಕ : 15-02-2024 ರಂದು ನಡೆಯಲಿದೆ. ಪೂಜ್ಯ ಶ್ರೀಗಳಿಗೆ  ಭಕ್ತಿ ಪೂರ್ವಕ ನಮನಗಳು. 


– ಕೊಂಡಜ್ಜಿ  ಬಣಕಾರ್ ಶಿವಕುಮಾರ್, ವಕೀಲರು, ದಾವಣಗೆರೆ 

error: Content is protected !!