ಬಿಎಸ್ಸೆನ್ನೆಲ್‌ ಸ್ಥಿರ ದೂರವಾಣಿ ಸೇವೆ ಒದಗಿಸುವಲ್ಲಿ ನ್ಯೂನತೆ : ಬಿಎಸ್ಸೆನ್ನೆಲ್‌ನಿಂದ ಪರಿಹಾರ ನೀಡಲು ಆದೇಶ

ದಾವಣಗೆರೆ, ಜ.11- ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಬಿಎಸ್‍ಎನ್‍ಎಲ್ ಸ್ಥಿರ ದೂರವಾಣಿ ಸೇವೆಯನ್ನು ಸರಿಯಾಗಿ ನೀಡದಿರುವ ಕಾರಣಕ್ಕೆ ಮಾನಸಿಕ ವ್ಯಥೆಗೆ ರೂ. 10 ಸಾವಿರ, ಪರಿಹಾರವಾಗಿ ರೂ.5 ಸಾವಿರ ಹಾಗೂ ಠೇವಣಿಗೆ ಶೇ. 18 ರ ವಾರ್ಷಿಕ ಬಡ್ಡಿ ದರದಲ್ಲಿ 2020 ರಿಂದ ಮರು ಸಂದಾಯ ಮಾಡಲು ಆದೇಶಿಸಿದೆ. 

ನಗರದ ತರಳಬಾಳು ಬಡಾವಣೆ 8ನೇ ಕ್ರಾಸ್ ಕಲ್ಲೇಶ್ವರ ನಿಲಯದಲ್ಲಿ ವಾಸಿಸುವ ನಿವೃತ್ತ ಶಿಕ್ಷಕ ಎ.ಜಿ.ವೀರೇಶ್ ಅವರು ಬಿ.ಎಸ್.ಎನ್.ಎಲ್ ಸ್ಥಿರ ದೂರವಾಣಿ 222544 ಹೊಂದಿದ್ದು, ಇದು ಪದೇ ಪದೇ ದುರಸ್ತಿಗೆ ಒಳಗಾಗಿ ಸಕಾಲದಲ್ಲಿ ಸೇವೆ ಸಿಗದ ಕಾರಣ ಹಲವು ಬಾರಿ ಬಿಎಸ್‍ಎನ್‍ಎಲ್ ಕಚೇರಿಗೆ ದೂರು ನೀಡಿದ್ದರೂ ಸಹ ಗುಣಮಟ್ಟದ ಸೇವೆ ಸಿಗದ ಕಾರಣ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಈ ದೂರವಾಣಿ 2020-23ರ ಅವಧಿಯಲ್ಲಿ ಸರಿಯಾಗಿ ಸೇವೆಯನ್ನು ನೀಡಿರುವುದಿಲ್ಲವೆಂದು ಹಾಗೂ ಆಗಲೋ-ಈಗಲೋ ಒಮ್ಮೊಮ್ಮೆ ದೂರವಾಣಿ ಕರೆಗಳು ಬರುತ್ತಿದ್ದರೂ ಕೂಡ ಒಳಬರುವ ಕರೆಗಳು ವ್ಯವಸ್ಥಿತವಾಗಿ ಕೇಳಿಬರುತ್ತಿರಲ್ಲಿಲ್ಲ. ಈ ಬಗ್ಗೆ ಹಲವಾರು ಬಾರಿ ಮೌಖಿಕವಾಗಿ ಮತ್ತು ಲಿಖಿತವಾಗಿ ಬಿಎಸ್‍ಎನ್‍ಎಲ್‍ಗೆ ಮನವಿ ಮಾಡಿದರೂ ಪರಿಸ್ಥತಿ ಸುಧಾರಣೆ ಕಾಣಲಿಲ್ಲ. ಕಚೇರಿಗೆ ಭೇಟಿ ನೀಡಿ ದೂರು ನೀಡಲು ಹೋದಾಗ ಒಂದು ಟೇಬಲ್‍ನಿಂದ ಇನ್ನೊಂದು ಟೇಬಲ್‍ಗೆ ವರ್ಗಾಯಿಸಿ ಯಾವೊಬ್ಬ ಅಧಿ ಕಾರಿಯು ತಮ್ಮ ಅಹವಾಲಿಗೆ ಕಿವಿಗೊಡಲಿಲ್ಲ.

ಬಿಎಸ್‍ಎನ್‍ಎಲ್ ಕಾಪರ್ ಮಾರ್ಗವಿದ್ದುದರಿಂದ ಪದೇ ಪದೇ ಮಾರ್ಗ ಕಡಿತವಾಗುತ್ತದೆ. ಇದನ್ನು ಫೈಬರ್ ಮಾರ್ಗಕ್ಕೆ ಬದಲಾಯಿಸಿಕೊಳ್ಳಬೇಕೆಂದು ನಿವೃತ್ತ ಶಿಕ್ಷಕ ಎ.ಜಿ.ವೀರೇಶ್‌ ಅವರಿಗೆ ಹಲವು ಬಾರಿ ಮೌಖಿಕ ಹಾಗೂ ಪತ್ರ ಮುಖೇನ ತಿಳಿಸಲಾಗಿದೆ. ಈ ಬಡಾವಣೆಯಲ್ಲಿ ಎಲ್ಲರೂ ಫೈಬರ್ ಮಾರ್ಗಕ್ಕೆ ಬದದಲಾಯಿಸಿಕೊಂಡಿದ್ದು ಅರ್ಜಿದಾರರು ಮಾತ್ರ ಕಾಪರ್ ಲೈನ್ ಹೊಂದಿದ್ದು ದುರಸ್ಥಿ ದುಬಾರಿಯಾಗಿರುತ್ತದೆ ಎಂದು ಬಿಎಸ್‍ಎನ್‍ಎಲ್ ಸಮರ್ಥಿಸಿಕೊಂಡಿದೆ.

ಆಯೋಗವು ಗ್ರಾಹಕ ಸಂರಕ್ಷಣಾ ಅಧಿನಿಯಮ 2019ರ ಕಲಂ-35ರ ಅಡಿಯಲ್ಲಿ ಸಲ್ಲಿಸಿರುವ ದೂರನ್ನು ಭಾಗಶಃ ಪುರಸ್ಕರಿಸಿ ಸೇವಾ ನ್ಯೂನತೆಯನ್ನು ಪರಿಗಣಿಸಿ ಗ್ರಾಹಕರಿಗೆ 30 ದಿನಗಳೊಳಗಾಗಿ ಪರಿಹಾರದ ಮೊತ್ತವನ್ನು ಪಾವತಿಸುವ ಜೊತೆಗೆ ಒಳ ಹೋಗುವ ಮತ್ತು ಹೊರ ಹೋಗುವ ಕರೆಗಳಿಗೆ ಯಾವುದೇ ಅಡೆತಡೆ ಇಲ್ಲದೇ ಸೇವೆ ಒದಗಿಸಲು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರದ ಆಯೋಗದ ಅಧ್ಯಕ್ಷ ಮಹಾಂತೇಶ ಈರಪ್ಪ ಶಿಗ್ಲಿ ಮತ್ತು ಮಹಿಳಾ ಸದಸ್ಯೆ ಗೀತಾ ಬಿ.ಯು ಇವರು ಆದೇಶಿಸಿದ್ದಾರೆ.

error: Content is protected !!