ದಾವಣಗೆರೆ, ಜ. 4- ಕರ್ನಾಟಕ ಆರ್ಯವೈಶ್ಯ ಮಹಾಸಭಾ ಕರ್ನಾಟಕ, ಶ್ರೀ ವಾಸವಿ ದೇವಾಲಯಗಳ ಒಕ್ಕೂಟದ ವತಿ ಯಿಂದ ಇದೇ ದಿನಾಂಕ 7 ರ ಭಾನುವಾರ ಬೆಳಿಗ್ಗೆ 10 ರಿಂದ ನಗರದ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಶ್ರೀ ವಾಸವಿ ದೇವಾಲಯಗಳ ಪ್ರಥಮ ಮಹಾ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಆರ್.ಎಲ್.ಪ್ರಭಾಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಹಿತಿ, ಚಿಂತಕ ಚಕ್ರವರ್ತಿ ಸೂಲಿಬೆಲೆ ಮಹಾ ಅಧಿವೇಶನವನ್ನು ಉದ್ಘಾಟಿಸುವರು. ವಿಶೇಷ ಆಹ್ವಾನಿತರಾಗಿ ಶಾಸಕ ಡಿ.ಎಸ್. ಅರುಣ್ ಆಗಮಿಸಲಿದ್ದಾರೆ.
ಮಧ್ಯಾಹ್ನ 12 ಕ್ಕೆ ನಡೆಯುವ ಮಹಾ ಅಧಿವೇಶನದಲ್ಲಿ `ಧರ್ಮ ಜಾಗೃತಿಯಲ್ಲಿ ದೇವಾ ಲಯಗಳ ಪಾತ್ರ’ ಕುರಿತು ಹಿರಿಯ ಪತ್ರಕರ್ತ ಹೆಚ್.ಬಿ. ಮಂಜುನಾಥ ಮಾತನಾಡಲಿದ್ದಾರೆ.
ಮಧ್ಯಾಹ್ನ 1 ಕ್ಕೆ ವಾಸವಿ ಇ ಸೇವಾ ಲೋಕಾರ್ಪಣೆ ನಂತರ ಮುಕ್ತ ಅಧಿವೇಶನ ನಡೆಯಲಿದೆ. ಮಧ್ಯಾಹ್ನ 2.30 ರಿಂದ `ನಿತ್ಯ ಪೂಜಾ ವಿಧಿಗಳು, ಹೋಮ, ಯಾಗಗಳು ಅದರ ಪರಿಣಾಮ’ ಕುರಿತು ವಿದ್ವಾಂಸ ಹಿರೇಮಗಳೂರು ಕಣ್ಣನ್ ಮಾತನಾಡಲಿದ್ದಾರೆ.
`ದೇವಾಲಯಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ’ ಕುರಿತು ದೇವಾಲಯ ಸಂವರ್ಧನಾ ಸಮಿತಿಯ ಪ್ರಚಾರಕ ಮನೋಹರ ಮಠದ್ ಮಾತನಾಡಲಿದ್ದಾರೆ.
ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ. ರವಿಶಂಕರ್, ಗೌರವ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ಆರ್.ಎಲ್.ಪ್ರಭಾಕರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಈ ಮಹಾ ಅಧಿವೇಶನದಲ್ಲಿ ದೇವಾಲಯಗಳ ಏಕರೂಪದ ಪೂಜೆ, ವೇದ ಪಾಠಶಾಲೆಗೆ ಅವಕಾಶ, ಆಚಾರ, ವಿಚಾರ ಕುರಿತು ವಿವಿಧ ವಿಷಯಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಿ, ವಿಷಯ ಮಂಡಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಆರ್.ಜೆ.ನಾಗೇಂದ್ರ ಪ್ರಸಾದ್, ಕಾಸಲ್ ಸತೀಶ್, ಜೆ. ರವೀಂದ್ರ ಗುಪ್ತಾ, ಶ್ರೀನಿವಾಸ ಮೂರ್ತಿ, ಮಾಕಂ ನಾಗರಾಜ್ ಗುಪ್ತ, ಸುನೀಲ್, ನಾಗೇಂದ್ರ ಕುಮಾರ್ ಉಪಸ್ಥಿತರಿದ್ದರು.