ಮಣ್ಣು ಬರಡಾಗಲು ಅತೀ ರಾಸಾಯನಿಕ ಬಳಕೆ ಕಾರಣ

ಕೊಂಡಜ್ಜಿ: ವಿಶ್ವ ಮಣ್ಣು ದಿನಾಚರಣೆಯಲ್ಲಿ ಸ. ಕೃಷಿ ನಿರ್ದೇಶಕ ಎ.ನಾರನಗೌಡ   

ದಾವಣಗೆರೆ,ಡಿ.14- ಅತಿ ಹೆಚ್ಚು ರಾಸಾಯನಿಕ ಬಳಕೆಯಿಂದ ಮಣ್ಣಿನಲ್ಲಿ ಸಾವಯವ ಅಂಶ ಕಡಿಮೆಯಾಗಿ ಮಣ್ಣು ಬರಡಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ರೈತರು  ಇನ್ನಾದರೂ ಎಚ್ಚೆತ್ತು ಸಾವಯವ ಗೊಬ್ಬರ, ಹಸಿರೆಲೆ ಗೊಬ್ಬರಗಳನ್ನು ಉಪಯೋಗಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎ.ನಾರನಗೌಡ ಸಲಹೆ ನೀಡಿದರು.

ಕೊಂಡಜ್ಜಿ ಗ್ರಾಮದಲ್ಲಿ ಹರಿಹರ ಕೃಷಿ ಇಲಾಖೆ ಮತ್ತು ಕೊಂಡಜ್ಜಿ ಗ್ರಾಮ ಪಂಚಾಯ್ತಿ ಹಾಗೂ ಮಂಗಳೂರು ಕೆಮಿಕಲ್ಸ್  ಅಂಡ್‌ ಫರ್ಟಿಲೈಸರ್‌ ಸಹಯೋಗದಲ್ಲಿ  ಮೊನ್ನೆ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎಕೋ ಅಗ್ರಿ ಸಂಸ್ಥೆಯ ನಾಗನಗೌಡ ಮಲ್ಕಜ್ಜ ಮಾತನಾಡಿ, ರೈತರು ಕೀಟನಾಶಕಗಳ ಬಳಕೆ ಕಡಿಮೆ ಮಾಡಬೇಕು ಮತ್ತು ಸಾವಯವ ಗೊಬ್ಬರ ಬಳಕೆ ಹೆಚ್ಚು ಮಾಡಬೇಕು ಎಂದು ತಿಳಿಸಿದರು.

ಮಂಗಳೂರು ಕೆಮಿಕಲ್ಸ್  ಅಂಡ್‌ ಫರ್ಟಿಲೈಸರ್‌ ಕಂಪನಿ ಮಾರ್ಕೆಟಿಂಗ್ ಅಧಿಕಾರಿ ಶಿವಾನಂದ ಮಾತನಾಡಿ, ಕೊಂಡಜ್ಜಿ ಗ್ರಾಮದಲ್ಲಿ  ಉಚಿತವಾಗಿ ಮಣ್ಣು ಪರೀಕ್ಷೆ ಮಾಡಿಕೊಡಲಾಗುವುದು. ರೈತರು ಇದರ ಲಾಭ ಪಡೆಯಲು ತಿಳಿಸಿದರು.

ಕೃಷಿ ಅಧಿಕಾರಿ ವಿಕಾಸ್,  ಇಲಾಖೆಯ ವಿವಿಧ ಯೋಜನೆಗಳನ್ನು ರೈತರಿಗೆ ತಿಳಿಸಿದರು.

ಕೊಂಡಜ್ಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಿವಕುಮಾರ, ಕೃಷಿಕ ಸಮಾಜದ ನಾಗರಾಜ್, ವಸಂತಕುಮಾರ್, ಶ್ರೀಮತಿ ಅಶ್ವಿನಿ, ಜಾಗೃತಿ ಸಂಜೀವಿನಿ ಗ್ರಾಮ ಪಂಚಾಯ್ತಿ ಮಟ್ಟದ ಒಕ್ಕೂಟದ ಸ್ವಸಹಾಯ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಕೃಷಿ ಇಲಾಖೆ ತಾಂತ್ರಿಕ ವ್ಯವಸ್ಥಾಪಕ ಯೋಗೇಶ್‌ ಉಪಸ್ಥಿತರಿದ್ದರು. 

error: Content is protected !!