ದಾವಣಗೆರೆ, ಡಿ. 8- ಯರಗುಂಟೆ ಶ್ರಿ ಗುರು ಕರಿಬಸವೇಶ್ವರ ಸ್ವಾಮಿ ಗದ್ದಿಗೆ ಮಠದ ವತಿಯಿಂದ ನಾಳೆ ದಿನಾಂಕ 9 ಹಾಗೂ ನಾಡಿದ್ದು ದಿನಾಂಕ 10 ರಂದು ಶ್ರೀ ಗುರು ಕರಿಬಸವೇಶ್ವರ ಸ್ವಾಮಿಯ ನೂತನ ರಥೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಶ್ರೀ ಪರಮೇಶ್ವರ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಳೆ ದಿನಾಂಕ 9 ರ ಶನಿವಾರ ಬೆಳಿಗ್ಗೆ 5 ಗಂಟೆಗೆ ವಿನಾಯಕ ಪೂಜೆ, ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದೆ. ಬೆಳಿಗ್ಗೆ 6 ಕ್ಕೆ ಮಹಾಗಣಪತಿ ಪೂಜೆ, ನವಗ್ರಹ ಪೂಜೆ, ರುದ್ರಹೋಮ, ಗೋ ಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ, ರಾತ್ರಿ 8.30 ಕ್ಕೆ ಶ್ರೀ ಮಠದಿಂದ ಅರಿಶಿಣ ಎಣ್ಣೆ ಕಾರ್ಯಕ್ರಮ, ಕಳಸಾರೋಹಣದ ನಂತರ ಭಜನೆ ಕಾರ್ಯಕ್ರಮವಿರುತ್ತದೆ.
ನಾಡಿದ್ದು ದಿನಾಂಕ 10 ರಂದು ಬೆಳಿಗ್ಗೆ 6 ಕ್ಕೆ ಶ್ರೀ ವೀರಭದ್ರೇಶ್ವರ ಸ್ವಾಮಿ ಗುಗ್ಗಳ ಕಾರ್ಯಕ್ರಮ ನೆರವೇರಲಿದೆ. ಕಾಶಿ ವಿಶ್ವನಾಥ್ ವೀರಗಾಸೆ ಕಲಾತಂಡ ಕೆ.ಬೇವಿನಹಳ್ಳಿ ಇವರಿಂದ ವೀರಗಾಸೆ ಪ್ರದರ್ಶನವಿರುತ್ತದೆ.
ಬೆಳಿಗ್ಗೆ 10 ಕ್ಕೆ ಧರ್ಮಸಭೆ ನಡೆಯಲಿದ್ದು, ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ, ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯ ರಾಜದೇಶಿಕೇಂದ್ರ ಸ್ವಾಮೀಜಿ, ಕಾಶಿ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಶ್ರೀ ರುದ್ರಮುನಿ ಸ್ವಾಮೀಜಿ ಸಮ್ಮುಖ, ಡಾ. ಅಭಿನವ ಸಿದ್ಧಲಿಂಗ ಸ್ವಾಮೀಜಿ ನುಡಿ ನೈವೇದ್ಯ ಮಾಡಲಿದ್ದಾರೆ. ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಡಾ. ಬಸವ ಜಯಚಂದ್ರ ಸ್ವಾಮೀಜಿ, ಶ್ರೀ ಕೇದಾರ ಲಿಂಗ ಶಿವಶಾಂತವೀರ ಸ್ವಾಮೀಜಿ ಮತ್ತಿತರರು ಉಪಸ್ಥಿತರಿರುವರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದ ಡಾ.ಜಿ.ಎಂ. ಸಿದ್ದೇಶ್ವರ್, ಶಾಸಕರಾದ ಬಸವರಾಜ್ ಶಿವಗಂಗಾ, ಬಿ.ಪಿ. ಹರೀಶ್, ಕೆ.ಎಸ್. ಬಸವಂತಪ್ಪ, ದೇವೇಂದ್ರಪ್ಪ, ಇನ್ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ.ಬಿ. ವಿನಯ್ ಕುಮಾರ್, ಪಾಲಿಕೆ ಆಯುಕ್ತೆ ರೇಣುಕಾ, ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್, ಸದಸ್ಯ ಮಂಜುನಾಥ ಗಡಿಗುಡಾಳ್ ಸೇರಿದಂತೆ, ಇತರೆ ಗಣ್ಯರು ಆಗಮಿಸಲಿದ್ದಾರೆ.ಮಧ್ಯಾಹ್ನ 12.15 ಕ್ಕೆ ಮಹಿಳೆಯರಿಂದ ನೂತನ ಹೂವಿನ ರಥೋತ್ಸವ ಜರುಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎನ್.ಎಸ್. ರಾಜು, ಕೆ.ಆರ್. ವಿಜಯಕುಮಾರ್, ಎನ್.ಮಂಜುನಾಥ್, ರಾಕೇಶ್ ಪಾಟೀಲ್, ಎ.ಸಿ. ಕರಿಬಸಪ್ಪ, ಲೋಹಿತ್, ವಿಠೋಬರಾವ್ ಉಪಸ್ಥಿತರಿದ್ದರು.