ನಗರದಲ್ಲಿ 30ರಿಂದ ಕ್ರಿಕೆಟ್ ಹಬ್ಬ
ದಾವಣಗೆರೆ, ನ.15- ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘದಿಂದ ದಿ. ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಅವರ ಸವಿನೆನಪಿನ ಅಂಗವಾಗಿ ರಾಷ್ಟ್ರಮಟ್ಟದ ಹೊನಲು ಬೆಳಕಿನ `ಶಾಮನೂರು ಡೈಮಂಡ್ ಹಾಗೂ ಶಿವಗಂಗಾ ಕಪ್’ ರಾಷ್ಟ್ರಮಟ್ಟದ ಲೀಗ್ ಕಂ ನಾಕೌಟ್ ಕ್ರಿಕೆಟ್ ಟೂರ್ನಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ದಿನಾಂಕ 30ರಿಂದ ಡಿಸೆಂಬರ್ 3ರವರೆಗೆ ನಾಲ್ಕು ದಿನಗಳ ಕಾಲ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಟೂರ್ನಿಗಳು ನಡೆಯಲಿದ್ದು, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ , ತುಮಕೂರು, ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತೆ 32 ತಂಡಗಳು ಭಾಗವಹಿಸಲಿವೆ ಎಂದು ಹೇಳಿದರು.
ಭಾಗವಹಿಸುವ 460 ಆಟಗಾರರಿಗೆ ಟಿ.ಶರ್ಟ್, ಊಟ ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಟೂರ್ನಿಯಲ್ಲಿ ವಿಜೇತರಿಗೆ 5,05,555 ರೂ. ಪ್ರಥಮ ಬಹುಮಾನ ಹಾಗೂ ಶಾಮನೂರು ಡೈಮಂಡ್ ಕಪ್, ದ್ವಿತೀಯ ಸ್ಥಾನಕ್ಕೆ 3,05,555 ರೂ. ಹಾಗೂ ಶಿವಗಂಗಾ ಕಪ್, ತೃತೀಯ ಬಹುಮಾನ 1,55,555 ರೂ. ಹಾಗೂ ಆಕರ್ಷಕ ಟ್ರೋಪಿ ನೀಡಲಾಗುವುದು. ವೈಯಕ್ತಿಕ ಉತ್ತಮ ಆಲ್ರೌಂಡರ್ಗೆ ಹೀರೋ ಹೊಂಡಾ ಬೈಕ್ ನೀಡಲಾಗುವುದು ಎಂದರು.
ಪಂದ್ಯ ವೀಕ್ಷಣೆಗೆ ಕ್ರೀಡಾಭಿಮಾನಿಗಳಿಗೆ ಕುಳಿತು ನೋಡಲು ಗ್ಯಾಲರಿ ವ್ಯವಸ್ಥೆ ಮಾಡಲಾಗುತ್ತದೆ. ಟೂರ್ನಿಯಲ್ಲಿ ಮೂರನೇ ತೀರ್ಪುಗಾರರ ವ್ಯವಸ್ಥೆ ಮಾಡಲಾಗಿದ್ದು, ಪಂದ್ಯಗಳನ್ನು ಯೂ ಟ್ಯೂಬ್ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಎಂದರು.
ಟೂರ್ನಿಯಲ್ಲಿ ಪೊಲೀಸ್ ತಂಡ, ಪತ್ರಕರ್ತರ ತಂಡ, ವರ್ತಕರ ತಂಡ, ಜಿಲ್ಲಾಧಿಕಾರಿಗಳ ತಂಡ ಹಾಗೂ ಪಾಲಿಕೆ ಸದಸ್ಯರ ತಂಡ, ವಕೀಲರ ತಂಡ ಸೇರಿ 6 ತಂಡಗಳುಳ್ಳ ಅಫಿಷಿಯಲ್ ಕಪ್ ಪಂದ್ಯಾ ವಳಿ ಆಡಿಸಲಾಗುವುದು ಎಂದು ಹೇಳಿದರು.