ಹೊನ್ನಾಳಿ ಹೊನ್ನುಡಿ ಕನ್ನಡ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ.ಶಾಂತನಗೌಡ
ಹೊನ್ನಾಳಿ, ನ. 7 – ಒಂದು ದಿನದ ಆಚರಣೆಗೆ ಸೀಮಿತಗೊಳ್ಳುವ ಈ ಸಂದರ್ಭದಲ್ಲಿ ಹೊನ್ನುಡಿ ಕನ್ನಡ ವೇದಿಕೆ ಸುವರ್ಣ ಕರ್ನಾಟಕ ಸಂಭ್ರಮದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳುವ ಕನ್ನಡ ನಾಡು ನುಡಿಯ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವಂತಾಗಲಿ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಹೊನ್ನುಡಿ ಕನ್ನಡ ವೇದಿಕೆಯ ಉದ್ಘಾಟನೆ ಹಾಗೂ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಭ್ರಮಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೊನ್ನಾಳಿ ಶ್ರೀ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿಗಳು ಮಾತನಾಡಿ, ವೇದಿಕೆಯ ಅಭಿಪ್ರಾಯ ಉತ್ತಮವಾಗಿದ್ದು, ಯುವಕರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಯುವಕರಿಗಾ ಗಿಯೇ ಶಾಲೆಗಳ ರೀತಿಯಲ್ಲಿಯೇ ತರಬೇತಿ ನೀಡಿದರೆ ಒಳಿತು. ಇಂದಿನ ಕನ್ನಡ ಶಿಕ್ಷಕರಲ್ಲಿ ಹಳೆಗನ್ನಡದ ಅಧ್ಯಯನ ತಿಳಿದಿರಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿ ವೇದಿಕೆಯ ಆಶಯಗಳು ಆರಂಭದಲ್ಲಿನ ಉತ್ಸಾಹವು ಉದ್ಘಾಟನಾ ಸಮಾರಂಭಕ್ಕೆ ಸೀಮಿತಗೊಳ್ಳದೆ ನಿರಂತರವಾಗಿ ನಡೆಯುವಂತಾಗಲಿ ಎಂದರು.
ವೇದಿಕೆಯ ಅಧ್ಯಕ್ಷ ಎಂ.ಪಿ.ಎಂ. ಷಣ್ಮುಖಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊನ್ನುಡಿ ಕನ್ನಡ ವೇದಿಕೆ ಹುಟ್ಟುಹಾಕಿದ್ದು, ಈ ವೇದಿಕೆಯ ಮೂಲಕ 50 ಪುಸ್ತಕಗಳ ಪ್ರಕಟಣೆಯ ಗುರಿ ಹೊಂದಲಾಗಿದೆ ಎಂದು ತಿಳಿಸಿ, ವರ್ಷದ ಕೊನೆಯಲ್ಲಿ ಜಾನಪದ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನಿಸಿದೆ. 13 ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ದಿನಾಂಕ ನಿಗದಿಗೊಳಿಸಿ, ಕನ್ನಡ ಕಾರ್ಯಕ್ರಮಗಳನ್ನು ಸಿದ್ದಪಡಿಸಲಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೊನ್ನುಡಿ ಯೂ ಟ್ಯೂಬ್ ವಾಹಿನಿಯನ್ನು ಉದ್ಘಾಟಿಸಿದರು.
ನಿವೃತ್ತ ಶಿಕ್ಷಣಾಧಿಕಾರಿ ಮೈಸೂರು ಭರಮಪ್ಪ ಅವರು ಕನ್ನಡ ನಾಡು, ನುಡಿ, ಸಾಂಸ್ಕೃತಿಕ ಹಿರಿಮೆಗಳ ಕುರಿತು ಉಪನ್ಯಾಸ ನೀಡಿದರು.
ನಿವೃತ್ತ ಶಿಕ್ಷಕ ಕೆ. ರುದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಹೊನ್ನುಡಿ ಕನ್ನಡ ವೇದಿಕೆಯ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಹೊನ್ನುಡಿ ಮಾಸ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ಅತಿಥಿಗಳಾಗಿ ಬಿ.ಇ.ಓ., ನಂಜರಾಜ್, ಸಾಹಿತಿ ಡಿ.ಶಿವರುದ್ರಪ್ಪ, ಸಾಸ್ವೆಹಳ್ಳಿಯ ಕೆ.ಪಿ. ದೇವೇಂದ್ರಪ್ಪ, ಕಲಾವಿದರಾದ ಎಂ.ಎಸ್. ರೇವಣಪ್ಪ, ಎಂ.ಪಿ.ಎಂ. ಚನ್ನಬಸಯ್ಯ ವೇದಿಕೆಯ ಕಾರ್ಯದರ್ಶಿ ಡಿ.ಎಂ. ಮಂಜುನಾಥ, ಖಜಾಂಚಿ ಶಕೀಲ್ ಅಹಮ್ಮದ್ ಇತರರು ಇದ್ದರು.
ರಾಮಾಚಾರಿ ಪ್ರಾರ್ಥಿಸಿದರು. ಪ್ರತಿಮಾ ಸ್ವಾಗತಿಸಿದರು, ಕೆ.ಆರ್. ಶಾರದಾ ಮಹೇಶ್ವರ ನಿರೂಪಿಸಿದರೆ, ಎನ್.ಎಚ್.ರವಿಗೌಡ ವಂದಿಸಿದರು.