ಬಿಜೆಪಿಗೆ ಸಮರ್ಥ ನಾಯಕ ಇಲ್ಲ: ರೇಣುಕಾಚಾರ್ಯ

ಬಿಜೆಪಿಗೆ ಸಮರ್ಥ ನಾಯಕ ಇಲ್ಲ: ರೇಣುಕಾಚಾರ್ಯ

ದಾವಣಗೆರೆ, ಅ.14- ರಾಜ್ಯದಲ್ಲಿ ಬಿಜೆಪಿಗೆ ಸಮರ್ಥ ನಾಯಕ ಇಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ನಗರದಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಕ್ಷ ಸಂಘಟನೆ ಮಾಡಿದ ಬಿ.ಎಸ್. ಯಡಿಯೂರಪ್ಪ ಅವರ ಕೈ ಕಟ್ಟಿಹಾಕಲಾಗಿದೆ ಎಂದು ಆರೋಪಿಸಿದರು.
ಯಡಿಯೂರಪ್ಪ ಅವರಿಗೆ ಪ್ರವಾಸ ಮಾಡಲು ಅವಕಾಶ ನೀಡುತ್ತಿಲ್ಲ. ಬಿಜೆಪಿ ಕಟ್ಟಿ ಬೆಳೆಸಿದವರನ್ನು ಮೂಲೆಗುಂಪು ಮಾಡಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮುಳುಗುತ್ತಿರುವ ಹಡಗು ಅಂತ ನಾವು ಹೇಳುತ್ತಿದ್ದೆವು. ಆದರೆ ಇಂದು ಬಿಜೆಪಿ ಮುಳುಗುತ್ತಿರುವ ಹಡಗು ಅಂತ ನಮ್ಮವರೇ ಹೇಳುವ ಕಾಲ ಬಂದಿದೆ ಎಂದರು.
ಬಿಜೆಪಿಯಲ್ಲಿ ಕಾರ್ಪೊರೇಟ್ ರೀತಿ ತಂಡ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ. ಗೆದ್ದಲು ಕಟ್ಟಿದ ಹುತ್ತದಲ್ಲಿ ಹಾವುಗಳು ಬಂದು ವಾಸವಾದಂತೆ ಆಗಿದೆ. ಸಮರ್ಥ ನಾಯಕನನ್ನು ಆಯ್ಕೆ ಮಾಡಿದರೆ ಪಕ್ಷದಲ್ಲಿ ಮತ್ತೆ ಹೊಸತನ ಬರುತ್ತದೆ ಎಂದವರು ಹೇಳಿದರು.
ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡುವ ಬದಲಾಗಿ ಅವರ ಕೈಗೆ ಅಧಿಕಾರ ಕೊಟ್ಟು ನೋಡಿ ಎಂದು ಮುಖಂಡರಿಗೆ ಹೇಳಿದ ರೇಣುಕಾಚಾರ್ಯ, ರಾಜ್ಯದಲ್ಲಿ ಇದೇ ಪರಿಸ್ಥಿತಿ ಮುಂದುವರೆದರೆ ಲೋಕಸಭೆ ಚುನಾವಣೆ ಹೊತ್ತಿಗೆ ಪಕ್ಷ ಬಿಡುವವರ ಸಂಖ್ಯೆ ಇನ್ನೂ ಹೆಚ್ಚಾಗಲಿದೆ ಎಂದರು.

error: Content is protected !!