ಐಎಫ್‌ಎಸ್ ಅಧಿಕಾರಿ ಹರಗನಹಳ್ಳಿ ಗ್ರಾಮದ ಡಾ. ಸಿ. ಮಂಜುನಾಥ್ ಸಾವು

ಐಎಫ್‌ಎಸ್ ಅಧಿಕಾರಿ ಹರಗನಹಳ್ಳಿ ಗ್ರಾಮದ ಡಾ. ಸಿ. ಮಂಜುನಾಥ್ ಸಾವು

ಹೊನ್ನಾಳಿ, ಅ.11- ಮೇಘಾಲಯ ಸರ್ಕಾರದಲ್ಲಿ   ಪ್ರಾಣಿ ಮತ್ತು ಪಶುಸಂಗೋಪನೆ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಹೊನ್ನಾಳಿ ತಾಲ್ಲೂಕಿನ ಹರಗನಹಳ್ಳಿ ಗ್ರಾಮದ ಟಿ. ಚನ್ನಬಸಪ್ಪನವರ ಪುತ್ರ ಹಾಗೂ ಐಎಫ್‌ಎಸ್ ಅಧಿಕಾರಿ ಡಾ. ಸಿ. ಮಂಜುನಾಥ್  (46) ಅವರು ಹೃದಯಾಘಾತದಿಂದ ನಿನ್ನೆ  ನಿಧನರಾಗಿದ್ದಾರೆ. 

ಮೇಘಾಲಯ ಸಿಎಂ ಸೇರಿದಂತೆ ಸಚಿವರು, ಉನ್ನತ ಅಧಿಕಾರಿಗಳು ಡಾ. ಮಂಜುನಾಥ್ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಅಲ್ಲದೇ ಮಂಜುನಾಥ್ ಅವರ ಅಂತಿಮ ದರ್ಶನ ಪಡೆದಿದ್ದಾರೆ. 

ವಿಷಯ ತಿಳಿದ ತಕ್ಷಣ ಹರಗನಹಳ್ಳಿಯಿಂದ ಅವರ ಅಣ್ಣ ಮತ್ತು ಸಂಬಂಧಿಕರು ಮೇಘಾಲಯಕ್ಕೆ ತೆರಳಿ ಶವ ಪರೀಕ್ಷೆ ಮುಗಿಸಿಕೊಂಡು ಪಾರ್ಥಿವ ಶರೀರವನ್ನು ಬುಧವಾರ ತಡರಾತ್ರಿ ವಿಮಾನದ ಮೂಲಕ ಬೆಂಗಳೂರಿಗೆ ತಂದು, ಅಲ್ಲಿಂದ ವಿಶೇಷ ವಾಹನದಲ್ಲಿ ಹೊನ್ನಾಳಿ ತಾಲ್ಲೂಕು ಹರಗನಹಳ್ಳಿಗೆ ತರಲಿದ್ದಾರೆ. 

ಇನ್ನೆರಡು ದಿನಗಳಲ್ಲಿ ತಮ್ಮ 3 ತಿಂಗಳ ಹೆಣ್ಣು ಮಗುವನ್ನು ನೋಡಲು ಶಿವಮೊಗ್ಗಕ್ಕೆ ಬರುತ್ತೇನೆಂದು ಹೇಳಿದ್ದರೆಂದು ಪತ್ನಿ ನೆನೆಪಿಸಿಕೊಂಡು ದುಃಖಪಡುತ್ತಿದ್ದಾರೆ. ತಂದೆ, ತಾಯಿ, ಸಹೋದರರು, ಸಹೋದರಿ ಸೇರಿದಂತೆ ಅಪಾರ ಬಂಧು – ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ಗುರುವಾರ ಮಧ್ಯಾಹ್ನ ಹರಗನಹಳ್ಳಿಯಲ್ಲಿ ನೆರವೇರಲಿದೆ ಎಂದು ತಿಳಿದು ಬಂದಿದೆ.

error: Content is protected !!