ಗಣೇಶ ವಿಸರ್ಜನೆ : ನೃತ್ಯ ಮಾಡುವ ವೇಳೆ ಹೃದಯಾಘಾತದಿಂದ ಸಾವು

ಜಗಳೂರು, ಸೆ.28- ಗಣೇಶ ವಿಸರ್ಜನೆಯ ಮೆರವಣಿಗೆಯಲ್ಲಿ ನೃತ್ಯ ಮಾಡುತ್ತಿದ್ದ ಮೆಕ್ಯಾನಿಕಲ್ ಎಂಜಿನಿಯರ್ ಒಬ್ಬರು ಹೃದಯಾಘಾತದಿಂದ ಸಾವಿಗೀಡಾದ ಘಟನೆ ಪಟ್ಟಣದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಮೃತ ರನ್ನು ನಾಗರಾಜ್ ಪತ್ತಾರ್ (30) ಎನ್ನಲಾಗಿದ್ದು, ಇವರು ಇಲ್ಲಿನ ತಾಲ್ಲೂಕು ರೇಷ್ಮೆ ಇಲಾಖೆ ಅಧಿಕಾರಿಯಾಗಿದ್ದ ನಾರಾಯಣ್ ಪತ್ತಾರ್‌ ಅವರ ಪುತ್ರ ರಾಗಿದ್ದು, ವಿಂಡ್ ಮಿಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಪಟ್ಟಣದ ಗಂಗಾಂಭಿಕಾ ಬಡಾವಣೆಯಲ್ಲಿ ಪ್ರತಿಷ್ಟಾಪಿಸಲಾಗಿದ್ದ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಗೆಳೆಯರೊಂದಿಗೆ ಡಿಜೆ ಸಂಗೀತಕ್ಕೆ ಮಹಾತ್ಮ ಗಾಂಧಿ ವೃತ್ತದ ಬಳಿ ನೃತ್ಯ ಮಾಡುವಾಗ ಅಸ್ವಸ್ಥರಾದರು.  ಕೂಡಲೇ ಪಟ್ಟಣದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ. ಅಲ್ಲಿಂದ ಸರ್ಕಾರಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಲಾಗಿದೆ. ಕೂಡಲೇ ಅಲ್ಲಿಯೇ ಕುಸಿದು ಬಿದ್ದು ನಾಗರಾಜ್ ಮೃತಪಟ್ಟಿದ್ದಾರೆ.

ನಾರಾಯಣ ಪತ್ತಾರ್ ಮೂಲತಃ ಬಾಗಲಕೋಟೆ ಜಿಲ್ಲೆಯವರಾಗಿದ್ದು, ಕಳೆದ 25 ವರ್ಷಗಳಿಂದ ಜಗಳೂರಿನಲ್ಲಿ ನೆಲೆಸಿದ್ದರು. ಎರಡು ವರ್ಷಗಳ ಹಿಂದೆ ಕೊರೊನಾ ಅವಧಿಯಲ್ಲಿ ಮೃತಪಟ್ಟಿದ್ದರು.

error: Content is protected !!