ರಾಜ್ಯ ಸರ್ಕಾರಕ್ಕೆ ಗೋವಿಂದ ಕಾರಜೋಳ ತರಾಟೆ
ದಾವಣಗೆರೆ, ಸೆ. 7 – ಕಳೆದ ಮೂರೂವರೆ ತಿಂಗಳಲ್ಲಿ ಸಿದ್ದರಾಮಯ್ಯ ಸರ್ಕಾರದ ಆಡಳಿತ ಕುಸಿದಿದೆ. ಎಲ್ಲ ಕೆಲಸ ಬಂದ್ ಮಾಡಿ ಪರ್ಸೆಂಟೇಜ್ ಕೇಳುವ ನಿರ್ಲಜ್ಜತನ ಕಂಡು ಬರುತ್ತಿದೆ. ರಾಜ್ಯಕ್ಕೆ ಕತ್ತಲೆ ಎಂಬ 6ನೇ ಗ್ಯಾರಂಟಿ ನೀಡಲಾಗುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಗೋವಿಂದ ಕಾರಜೋಳ ತರಾಟೆಗೆ ತೆಗೆದುಕೊಂಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸಮರ್ಪಕವಾಗಿ ಕಲ್ಲಿ ದ್ದಲು ಸಂಗ್ರಹಣೆ ಮಾಡಿಕೊಳ್ಳದ ಕಾರ ಣ, ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ. ರಾಜ್ಯದಲ್ಲಿ 35 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಇದೆ. ಆದರೆ, 14-15 ಸಾವಿರ ಮೆಗಾವ್ಯಾಟ್ ವಿದ್ಯುತ್ ಪೂರೈಸಲೂ ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು.
ಇಂಡಿಯಾ ಹೆಸರು ಬದಲಾವಣೆ ಎಂದು ಯಾರು ಹೇಳಿದ್ದಾರೆ?
ದಾವಣಗೆರೆ, ಸೆ. 7- ದೇಶದ ಹೆಸರನ್ನು ಇಂಡಿಯಾದಿಂದ ಭಾರತ ಎಂದು ಬದಲಿಸಲಾ ಗುವುದು ಎಂಬ ಆಕ್ಷೇಪ ಗಳನ್ನು ತಳ್ಳಿ ಹಾಕಿರುವ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಹೆಸರು ಬದಲಾಯಿಸುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಎಂಬ ಹೆಸರು ಮಹಾಭಾರತದ ಕಾಲದಿಂದಲೂ ಇದೆ. ಭಾರತ ಎಂಬ ಹೆಸರಿನಿಂದ ಏನು ತೊಂದರೆಯಾಗಿದೆ? ಕಾಂಗ್ರೆಸ್ ಪಕ್ಷ ವೋಟ್ ಬ್ಯಾಂಕ್ ಕಾರಣಕ್ಕಾಗಿ ವಿನಾಕಾರಣ ಈ ವಿಷಯದಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಿದೆ ಎಂದು ಕಾರಜೋಳ ಇದೇ ವೇಳೆ ಹೇಳಿದರು.
ಮುಂದಿನ 2024ರ ಲೋಕಸಭಾ ಚುನಾವಣೆಯಲ್ಲಿ ಸೋತರೆ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ದೀಪಕ್ಕೂ ದಿಕ್ಕಿಲ್ಲದಂತಾಗುತ್ತದೆ. ಇದನ್ನು ಅರಿತೇ ಕಾಂಗ್ರೆಸ್ ಪಕ್ಷ ಜಾತಿ – ಧರ್ಮ ಮುಂದಿಟ್ಟುಕೊಂಡು ಭಾವನಾತ್ಮಕ ಸಮಸ್ಯೆ ಸೃಷ್ಟಿ ಮಾಡುತ್ತಿದೆ ಎಂದು ಕಾರಜೋಳ ಟೀಕಿಸಿದರು.
ಶಿವಶಂಕರಪ್ಪನವರಿಗೆ ಯಾವ ಸ್ಥಾನ ಕೊಡಲಾಗಿದೆ ?
ಕಾಂಗ್ರೆಸ್ ಹಿರಿಯ ನಾಯಕ ಶಾಸಕ ಶಾಮನೂರು ಶಿವಶಂಕರಪ್ಪ ಅವರು 20 ವರ್ಷ ಕಾಲ ಖಜಾಂಚಿಯಾಗಿ ಪಕ್ಷವನ್ನು ಸಂಕಷ್ಟದಲ್ಲಿ ಸಲಹಿದ್ದಾರೆ. ಅವರಿಗೆ ಕಾಂಗ್ರೆಸ್ ಯಾವ ಸ್ಥಾನ ನೀಡಿದೆ? ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಲಿಂಗಾಯತರನ್ನು ಹಿಂದಿನಿಂದಲೂ ಕಡೆಗಣಿಸುತ್ತಾ ಬಂದಿದೆ. ರಾಷ್ಟ್ರನಾಯಕ ನಿಜಲಿಂಗಪ್ಪ ಅವರು ಪ್ರಧಾನ ಮಂತ್ರಿಯಾಗುವ ಸಂದರ್ಭ ಇದ್ದಾಗ ಕಾಂಗ್ರೆಸ್ ಇಬ್ಭಾಗ ಮಾಡಿ ಇಂದಿರಾ ಗಾಂಧಿ ಪ್ರಧಾನ ಮಂತ್ರಿಯಾದರು. ವೀರೇಂದ್ರ ಪಾಟೀಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾ ಮಾಡಲಾಯಿತು ಎಂದವರು ಹೇಳಿದರು.
ಹಿಂದೂ ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಸಹಿಸುವುದಿಲ್ಲ
ಡಿಎಂಕೆ ಸಚಿವ ಉದಯನಿಧಿ ಮಾರನ್ ಅವರು ಸನಾತನ ಧರ್ಮ ನಿರ್ಮೂಲನೆ ಮಾಡಬೇಕು ಎಂದು ಹೇಳಿರುವುದನ್ನು ಖಂಡಿಸಿರುವ ಬಿಜೆಪಿ ನಾಯಕ ಗೋವಿಂದ ಕಾರಜೋಳ, ಹಿಂದೂ ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಸಹಿಸುವುದಿಲ್ಲ ಎಂದಿದ್ದಾರೆ. ಇಸ್ಲಾಂ ಹಾಗೂ ಕ್ರಿಶ್ಚಿಯನ್ ಧರ್ಮಗಳು ಹೊರಗಿನಿಂದ ಬಂದಿವೆ ಎಂದು ಸಚಿವ ಪರಮೇಶ್ವರ್ ಅವರೇ ಹೇಳಿದ್ದಾರೆ. ಹೊರಗಿನಿಂದ ಬಂದ ಧರ್ಮಗಳನ್ನು ಸಹಿಸಿಕೊಳ್ಳುತ್ತಾ ಬಂದಿರುವ ಹಿಂದೂ ಧರ್ಮ ಸೆಕ್ಯುಲರ್ ಆಗಿದೆ ಎಂದವರು ಹೇಳಿದರು.
ಅಘೋಷಿತ ಲೋಡ್ ಶೆಡ್ಡಿಂಗ್ ಮಾಡುವ ಮೂಲಕ ರಾಜ್ಯವನ್ನು ಕತ್ತಲೆಗೆ ದೂಡಲಾಗುತ್ತಿದೆ. ರಾಜ್ಯವನ್ನು ಕತ್ತಲಲ್ಲಿ ಇಡುವುದು ಕಾಂಗ್ರೆಸ್ನ 6ನೇ ಗ್ಯಾರಂಟಿ ಆಗಿದೆ ಎಂದವರು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಇನ್ನೂ ಬರ ಪರಿಸ್ಥಿತಿ ಘೋಷಣೆ ಮಾಡಿಲ್ಲ. ಮೇವು ಬ್ಯಾಂಕ್ ರೂಪಿಸಿಲ್ಲ, ಗೋಶಾಲೆ ಸ್ಥಾಪಿಸಿಲ್ಲ. ಹಳ್ಳಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ ಹಾಗೂ ಜನ ಗುಳೆ ಹೋಗದಂತೆ ತಡೆಯುವ ಕೆಲಸ ಆಗಿಲ್ಲ ಎಂದವರು ಆರೋಪಿಸಿದರು.
ಸರ್ಕಾರದ ವೈಫಲ್ಯದ ವಿರುದ್ಧ ನಾಳೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟಿಸಲಾಗುವುದು ಎಂದು ಕಾರಜೋಳ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಪರಿಷತ್ ಸದಸ್ಯ ಕೆ.ಎಸ್. ನವೀನ್, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ, ಮಾಜಿ ಶಾಸಕರಾದ ಪ್ರೊ. ಲಿಂಗಣ್ಣ, ಬಸವರಾಜ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಮುಖಂಡರಾದ ಸುಧಾ ಜಯರುದ್ರೇಶ್, ಶಾಂತರಾಜ ಪಾಟೀಲ್, ಬಿ.ಎಸ್. ಜಗದೀಶ್, ಡಿ.ಎಸ್. ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.