ಸಿಲಿಂಡರ್ ದರ ಇಳಿಕೆ ರಕ್ಷಾ ಬಂಧನ ಕೊಡುಗೆ: ಸಂಸದ ಸಿದ್ದೇಶ್ವರ

ದಾವಣಗೆರೆ, ಆ. 29- ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗೃಹೋಪಯೋಗಿ ಸಿಲಿಂಡರ್ ದರವನ್ನು 200 ರೂ.ಗಳಿಗೆ ಇಳಿಸುವ ಮೂಲಕ  ದೇಶದ ಮಹಿಳೆಯರಿಗೆ ರಕ್ಷಾ ಬಂಧನದ ಉಡುಗೊರೆ ನೀಡಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದ್ದಾರೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಸಂಪರ್ಕ ಪಡೆದವರಿಗೆ ಈಗಿರುವ ಸಬ್ಸಿಡಿ 200 ರೂ. ಜೊತೆಗೆ ಹೆಚ್ಚುವರಿ 200 ರೂಪಾಯಿ ಸಬ್ಸಿಡಿ ಸೇರಿ ಒಟ್ಟು ಪ್ರತಿ ಸಿಲಿಂಡರ್‍ಗೆ 400 ರೂಪಾಯಿ ಇಳಿಕೆಯಾಗಲಿದೆ.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 5 ಲಕ್ಷ ಗೃಹೋಪಯೋಗಿ ಎಲ್.ಪಿ.ಜಿ. ಸಂಪರ್ಕ ಪಡೆದ ಗ್ರಾಹಕರಿಗೆ ಈ ಲಾಭ ದೊರೆಯಲಿದೆ. ಇದರಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಉಜ್ವಲಾ ಯೋಜನೆ ಬಳಕೆದಾರರಿದ್ದಾರೆ ಎಂದರು. 2014 ರಲ್ಲಿ 14.5 ಕೋಟಿ ಗೃಹೋಪಯೋಗಿ ಗ್ಯಾಸ್ ಸಂಪರ್ಕ ಪಡೆದ ಫಲಾನುಭವಿಗಳಿದ್ದರು. ಈ ಸಂಖ್ಯೆ ಈಗ 33 ಕೋಟಿಗೆ ತಲುಪಿದೆ. ಇದರಲ್ಲಿ ಸುಮಾರು 9.60 ಕೋಟಿ ಉಜ್ವಲಾ ಫಲಾನುಭವಿಗಳಿದ್ದಾರೆ. ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ  ಇನ್ನೂ ಹೆಚ್ಚುವರಿ 75 ಲಕ್ಷ ಉಜ್ವಲಾ ಸಂಪರ್ಕಗಳನ್ನು ದೇಶದ್ಯಾಂತ ಕಲ್ಪಿಸಲು ಅನುಮೋದನೆ ನೀಡಲಾಗಿದೆ. ಒಟ್ಟಾರೆ ದರ ಇಳಿಕೆ ಮಾಡಿದ ಪ್ರಧಾನಮಂತ್ರಿಗಳನ್ನು ಹಾಗೂ ಇಂಧನ ಸಚಿವರನ್ನು  ಅಭಿನಂದಿಸುವುದಾಗಿ ಸಂಸದರು ಹೇಳಿದ್ದಾರೆ.

error: Content is protected !!