ಕೆ.ಬಿ. ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಇಂದಿನಿಂದ ಬರುವ ಸೆಪ್ಟೆಂಬರ್ 2ರ ಶನಿವಾರದವರೆಗೆ 4 ದಿನಗಳ ಕಾಲ ಶ್ರೀ ಗುರುರಾಯರ 352ನೇ ಆರಾಧನಾ ಮಹೋತ್ಸವ ಜರುಗಲಿದೆ.
ಇಂದು ಸಂಜೆಯಿಂದ ಧ್ವಜಾ ರೋಹಣ, ಗೋಪೂಜೆ, ಧಾನ್ಯಪೂಜೆ, ರಥೋತ್ಸವ ಕಾರ್ಯಕ್ರಮಗಳು ಜರುಗಲಿದ್ದು, ಧ್ವಜಾರೋಹಣ ಕಾರ್ಯವನ್ನು ಶ್ರೀಮಠದ ನಿರ್ದೇಶಕ ಹಾಗೂ ಹಿರಿಯ ವಕೀಲ ಜೆ.ಎನ್. ವಸಂತ ಕುಮಾರ್ ನೆರವೇರಿಸಲಿದ್ದಾರೆ.
ನಾಳೆ ಗುರುವಾರದಿಂದ ಮೂರು ದಿನಗಳ ಕಾಲ ಬೆಳಿಗ್ಗೆ 5 ಗಂಟೆಯಿಂದ ವಿವಿಧ ಧಾರ್ಮಿಕ ಕ್ರಿಯೆಗಳು ನಡೆಯಲಿದ್ದು, ಪಂಡಿತರುಗಳಿಂದ ಉಪನ್ಯಾಸ, ಹರಿವಾಯು ಸ್ತುತಿ ಪಾರಾಯಣ, ಶ್ರೀ ರಾಘವೇಂದ್ರ ಅಷ್ಟೋತ್ತರ, ಪಾರಾಯಣ ಇನ್ನಿತರೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂಘದ ಅಧ್ಯಕ್ಷ ಕೋ.ಸ. ಪ್ರಸನ್ನಕುಮಾರ್ ತಿಳಿಸಿದ್ದಾರೆ.
ನಾಳೆ ಗುರವಾರ ಸಂಜೆ 7 ರಿಂದ ಪೂರ್ವಾರಾಧನೆ, ದಾವಣಗೆರೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಮಾಧವಿ ಗೋಪಾಲಕೃಷ್ಣ ಮತ್ತು ಶಿಷ್ಯ ವೃಂದದವರಿಂದ ಭರತನಾಟ್ಯ ಕಾರ್ಯಕ್ರಮ, ಸೆ. 1ರ ಶುಕ್ರವಾರ ಮಧ್ಯಾರಾಧನೆ ಸಂಜೆ 7 ರಿಂದ ಹಿರಿಯ ಕಲಾವಿದರಾದ ವಿದ್ವಾನ್ ಶ್ರೀ ರಾಜಗೋಪಾಲ ಭಾಗವತ್ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಹಾಗೂ ದಿನಾಂಕ 2ರ ಶನಿವಾರ ಉತ್ತರಾರಾಧನೆ ಬೆಳಿಗ್ಗೆ 10.30ಕ್ಕೆ ರಾಜಬೀದಿಗಳಲ್ಲಿ ವೈಭವೋಪೇತವಾಗಿ ಶ್ರೀ ಗುರುರಾಯರ ಚಲ ಪ್ರತಿಮೆಯೊಂದಿಗೆ ಹಾಗು ರಾಘವೇಂದ್ರ ಸ್ವಾಮಿಗಳು ರಚಿಸಿರುವ ಪರಿಮಳ ಗ್ರಂಥದ ಮೆರವಣಿಗೆ, ವೇದ ಘೋಷ ಭಜನೆ, ನಾದಸ್ವರ, ಚಂಡೆಮೇಳಗಳೊಂದಿಗೆ ಜರುಗಲಿದೆ.
ಸಂಜೆ 7 ರಿಂದ ವಿದ್ವಾನ್ ವಿಶ್ವಂಭರ ಮತ್ತು ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕೋವಿಡ್ ಕಾರಣದಿಂದಾಗಿ ಶ್ರೀ ಗುರುರಾಯರ ಆರಾಧನೆಯನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಶ್ರೀ ಗುರುರಾಯರ ಆರಾಧನಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಶ್ರೀ ಗುರುರಾಜ ಸೇವಾ ಸಂಘದ ಅಧ್ಯಕ್ಷ ಕೋಸ ಪ್ರಸನ್ನಕುಮಾರ್ ತಿಳಿಸಿದರು.