ದಾವಣಗೆರೆ, ಆ. 25- ಹಳೇಪೇಟೆಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆದ 77ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕೋಡುಬಾಳು ಚನ್ನಬಸಪ್ಪ ಧ್ವಜಾರೋಹಣ ನೆರವೇರಿಸಿದರು.
ಈ ವೇಳೆ ಮಾತನಾಡಿದ ಮುಖ್ಯ ಶಿಕ್ಷಕ ಲೋಕಣ್ಣ ಮಾಗೋಡ್ರ, ಈ ದೇಶದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಜನರು ಬೀದಿಗಿಳಿದು, ಭೂಗತರಾಗಿ ಹೋರಾಟ ಮಾಡಿದ್ದಾರೆ. ಸಾವಿರಾರು ಜನರು ಸ್ವಾತಂತ್ರ್ಯ ಚಳವಳಿಯಲ್ಲಿ ತಮ್ಮ ಪ್ರಾಣಾರ್ಪಣೆ ಮಾಡಿ ಹುತಾತ್ಮರಾಗಿದ್ದಾರೆ. ಸಾವಿರಾರು ಜನ ಸ್ವಾತಂತ್ರ್ಯ ಯೋಧರು ಜೈಲು ಸೇರಿ ಕಠಿಣ ಶಿಕ್ಷೆಗೆ ಒಳಗಾಗಿದ್ದಾರೆ. ಇಂತಹ ತ್ಯಾಗ, ಬಲಿದಾನಗಳಿಂದ ಲಭಿಸಿದ ಸ್ವಾತಂತ್ರ್ಯ, ದೇಶವನ್ನು ಸಂರಕ್ಷಿಸಬೇಕೆಂದರು.
ಜಿಲ್ಲಾ ಶಾಲಾಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಗಳ ಒಕ್ಕೂಟದ ಪತ್ರಿಕಾ ಕಾರ್ಯದರ್ಶಿ ರಮೇಶ್ ಸಿ.ದಾಸರ್ ಮಾತನಾಡಿ, ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ತ್ಯಾಗ, ಬಲಿದಾನಗಳಿಂದ ಸ್ವಾತಂತ್ರ್ಯ ಪಡೆದರೂ ಇಂದು ನಮ್ಮನ್ನು ಆಳುವ ಸರ್ಕಾರಗಳು ಬಂಡವಾಳಶಾಹಿಗಳ ಕಪಿ ಮುಷ್ಟಿಯಲ್ಲಿ ಸಿಲುಕಿ ದೇಶಕ್ಕಾಗಿ ದುಡಿಯುವ ರೈತರು, ಕಾರ್ಮಿಕರು, ಬಡವರು, ದುಡಿಯುವ ವರ್ಗದ ಹಿತವನ್ನು ಬಯಸದೇ ಸಂಕಷ್ಟಗಳಿಗೆ ಗುರಿ ಮಾಡುತ್ತಿವೆ ಎಂದು ದೂರಿದರು.
ಶಿಕ್ಷಕರಾದ ಎಂ.ಎನ್. ನಮಿತಾ, ಆರ್.ಸಿ.ಅನಸೂಯಮ್ಮ, ವಿಜಯಕುಮಾರಿ, ಜಯಶ್ರೀ, ದೈಹಿಕ ಶಿಕ್ಷಕಿ ಸುಜಾತ, ಶಾಲೆಯ ಅಡುಗೆ ಸಿಬ್ಬಂದಿ, ಪೋಷಕರು ಇದ್ದರು.