ದಾವಣಗೆರೆ, ಮೇ 19 – ಬಂಜಾರ ಸಮು ದಾಯದಿಂದ ಕಾಂಗ್ರೆಸ್ನ ಏಕೈಕ ಶಾಸಕರಾಗಿ ಆಯ್ಕೆಯಾಗಿರುವ ಹಾವೇರಿಯ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ನೀಡುವಂತೆ ದಾವಣಗೆರೆ ಜಿಲ್ಲಾ ಬಂಜಾರ ಸೇವಾ ಸಂಘ ಒತ್ತಾಯಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ಕೆ.ಆರ್. ಮಲ್ಲೇಶನಾಯ್ಕ, ಬಿಜೆಪಿ ಸರ್ಕಾರ ಇದ್ದಾಗ ಅವೈಜ್ಞಾನಿಕ ಮೀಸಲಾತಿ ಮೂಲಕ ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಲಾಗಿತ್ತು. ಇದರ ವಿರುದ್ಧ ಬಂಜಾರ ಸಮುದಾಯ ತೀವ್ರ ಹೋರಾಟ ನಡೆಸಿತ್ತು. ಸಮುದಾಯ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿತ್ತು ಎಂದರು.
ಈ ಎಲ್ಲಾ ಹಿನ್ನೆಲೆಯಲ್ಲಿ ಲಮಾಣಿ ಅವರಿಗೆ ಸಂಪುಟ ದರ್ಜೆ ಸಚಿವರಾಗಿ ನೇಮಿಸಬೇಕು. ಅಲ್ಲದೇ, ಬಂಜಾರ ಸಮುದಾಯಕ್ಕೆ ಧಕ್ಕೆಯಾಗುವ ಯಾವುದೇ ನಿರ್ಧಾರಕ್ಕೆ ಕಾಂಗ್ರೆಸ್ ಮುಂದಾಗಬಾರದು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅರುಣ್ ನಾಯಕ್, ರವಿ ನಾಯಕ್, ಶೀತಲ್ ನಾಯಕ್, ಸಂತೋಷ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.