ಕೋವಿಡ್ ಅಲೆ ನಿಭಾಯಿಸುವಲ್ಲಿ ಬಿಜೆಪಿ ಸರ್ಕಾರ ವಿಫಲ

ಹರಪನಹಳ್ಳಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್

ಹರಪನಹಳ್ಳಿ, ಏ.4- ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭ್ರಷ್ಟಾಚಾರದಿಂದ ಕೂಡಿದ್ದು, ಗೊತ್ತು ಗುರಿ ಇಲ್ಲದ ಸರ್ಕಾರಗಳಾಗಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆರೋಪಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ  ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕೋವಿಡ್ ಎರಡನೇ ಆಲೆ ನಿಭಾಯಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೋವಿಡ್ ವಿಚಾರದಲ್ಲಿ ಸಚಿವರು ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದಾರೆ ಎಂದ ಅವರು, ಕೇಂದ್ರ ಸರ್ಕಾರ ಪ್ರತಿ ವರ್ಷ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಹೇಳಿ ಈಗ ಎಲ್ಲಿ ಕೊಟ್ಟಿದೆ, ಕಪ್ಪು ಹಣ ತರುತ್ತೇವೆ ಎಂದು ಸುಳ್ಳು ಹೇಳುತ್ತಾ ಸಾಗಿದೆ. ಜನರು ಸಹ ಈ ಸರ್ಕಾರಗಳ ವಿರುದ್ದ ಭ್ರಮ ನಿರಸನ ಗೊಂಡಿದ್ದಾರೆ ಎಂದು ಟೀಕಿಸಿದರು.

ರಾಜ್ಯ ಸರ್ಕಾರದ ಕಾರ್ಯವೈಖರಿ ಕುರಿತು ಸಚಿವ ಈಶ್ವರಪ್ಪ ನವರು ರಾಜ್ಯ ಪಾಲರಿಗೆ ಪತ್ರ ಬರೆದಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಅವರು ಈಶ್ವರಪ್ಪನವರನ್ನು ಸಂಪುಟದಿಂದ ವಜಾ ಮಾಡಬೇಕು. ಇಲ್ಲದಿದ್ದರೆ ಅವರೇ ರಾಜಿನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ. ಜನಧ್ವನಿ ಮೂಲಕ 100 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಬಲಪಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದ ಅವರು, ಏ.30 ರೊಳಗೆ ಪಂಚಾಯ್ತಿ ಸಮಿತಿ, ವಾರ್ಡ್‌ ಸಮಿತಿ, ನಂತರ ಬೂತ್ ಮಟ್ಟದ ಸಮಿತಿಗಳನ್ನು ರಚಿಸಲಾಗುವುದು ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಪಕ್ಷದ ಸಿದ್ದಾಂತ, ಕಾರ್ಯಕ್ರಮಗಳ ಅರಿವು ಮೂಡಿಸಲು ಶೀಘ್ರ ಕಾಂಗ್ರೆಸ್ ಕಾರ್ಯಕರ್ತರಿಗೆ ತರಬೇತಿ ಶಿಬಿರ ಸಹ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಒಂದು ಲೋಕಸಭಾ ಹಾಗೂ ಎರಡು ವಿಧಾನ ಸಭಾ ಒಟ್ಟು 3 ಕ್ಷೇತ್ರಗಳಿಗೆ ಈಗ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಕೆ.ಪಿ.ಸಿ.ಸಿ ವಕ್ತಾರ, ಡಿ.ಬಸವರಾಜ್‌, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಿ, ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಎಂ.ಪಿ.ಲತಾ, ಕೆಪಿಸಿಸಿ ಮಾಧ್ಯಮ ವಿಶ್ಷೇಷಕಿ ಎಂ.ಪಿ.ವೀಣಾ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಟಿ.ಭರತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಅಹಿಂದ ಪರಿಷತ್ ಅಧ್ಯಕ್ಷ ಉಮೇಶ್ ಬಾಬು, ರಾಜ್ಯ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಸಂಯೋಜಕ ಬಿ. ನಜೀರ್, ಅಲ್ಪಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ್‌, ಚಿಗಟೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್‌,  ಜಿ.ಪಂ ಸದಸ್ಯ ಹೆಚ್ .ಬಿ.ಪರಶುರಾಮಪ್ಪ, ಮುಖಂಡರಾದ ಶಶಿಧರ್ ಪೂಜಾರ್, ಪ್ರಕಾಶ್‌ ಪಾಟೀಲ್, ಎಂ.ಟಿ.ಬಸವನಗೌಡ ಡಾ.ಉಮೇಶ್‌ ಬಾಬು, ಪಿ.ಎಲ್.ಪೋಮ್ಯನಾಯ್ಕ, ಪುರಸಭಾ ಸದಸ್ಯರುಗಳಾದ ಟಿ.ವೆಂಕಟೇಶ್‌, ಎಂ.ವಿ.ಅಂಜಿನಪ್ಪ, ಜಾಕೀರ್‌, ಲಾಟಿ ದಾದಾಪೀರ್ ಭರತೇಶ್‌, ಕೊಟ್ರೇಶ್‌, ಎಂ.ಟಿ.ಬಸವನಗೌಡ, ಕಂಚಿಕೇರಿ ಪಿ.ಜಯಲಕ್ಷ್ಮಿ, ಎಲ್.ಮಂಜಾನಾಯ್ಕ, ಟಿ.ಹೆಚ್.ಎಂ.ಮಂಜುನಾಥ್‌, ಲಾಟಿ ನವರಂಗ, ಚಿಕ್ಕೇರಿ ಬಸಪ್ಪ, ಬಸಾಪುರದ ಮಂಜುನಾಥ, ಉದಯಶಂಕರ್‌, ತಿಮ್ಮನಾಯ್ಕ, ಪ್ರವೀಣ್‌, ಹುಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ಎನ್.ಮಜೀದ್, ಸಿದ್ದೀಕ್ ಇತರರು ಹಾಜರಿದ್ದರು.

error: Content is protected !!