ಬಹಿರ್ಮುಖಿ ಚಿಂತನೆಯಿಂದ ಅಂತರಂಗದ ಅನಾವರಣ ಸಾಧ್ಯ

ಡಾ. ಶಿವಮೂರ್ತಿ ಮುರುಘಾ ಶರಣರು

ಚಿತ್ರದುರ್ಗ, ಮಾ.29- ಯಾರು ಜೀವನದಲ್ಲಿ ಜಾಗೃತಿಯನ್ನು ನಿರಂತರವಾಗಿಟ್ಟುಕೊಳ್ಳುತ್ತಾರೋ ಅಂಥವರು ಜೀವನದಲ್ಲಿ ಅಂದುಕೊಂಡದ್ದನ್ನು ಸಾಧಿಸುತ್ತಾರೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಶ್ರೀಮಠದಲ್ಲಿ ನಡೆದ ಚಿಂತನಾ ಕಾರ್ಯಕ್ರಮ ದಲ್ಲಿ ಮಾತನಾಡಿದ ಶ್ರೀಗಳು, ಧಾರ್ಮಿಕ ಸಾಧಕರು ಅಂತರ್ಮುಖಿ ಸಾಧನೆಯಿಂದ ವಿಮುಖರಾಗಿ ಬಹಿರ್ಮುಖಿ ಸಾಧನೆಯ ಕಡೆಗೆ ಹೊರಟಿದ್ದಾರೆ. ಬಹಿರ್ಮುಖಿ ಚಿಂತನೆಯಿಂದ ಅಂತರಂಗದ ಅನಾವರಣ ಅಸಾಧ್ಯ. ಅಂಥವರದು ಬಡಿದಾಟದ ಬದುಕು ಅನಿಸಿಕೊಳ್ಳುತ್ತದೆ. 

ಅದು ಬಂಡಾಟದ ಬದುಕು. ಇದರ ಮುಖೇನ ಬದುಕು ರಣರಂಗವಾಗುತ್ತದೆ. ಸಮಕಾಲೀನ ಸಂದರ್ಭದ ವಿಚಾರಗಳಿಗೆ ವಚನಗಳನ್ನು ಜೋಡಿಸುವುದು. ಒಳಗಣ ರಣರಂಗ ಹೊರಗಿನ ಶೃಂಗಾರ (ಅಲ್ಲಮ). ಒಳಗಣ ಶರಣ ಸಂಗ (ಲಿಂಗಸಂಗ). ಮಾನವನ ಆಂತರ್ಯದಲ್ಲಿ ಲಿಂಗಸಂಗ ಇಲ್ಲ, ಪರಮಾರ್ಥ ಸಂಗ ಇಲ್ಲ, ಸದ್ವಿಚಾರ ಇಲ್ಲ, ಸತ್‍ಚಿಂತನೆ ಇಲ್ಲ. ಧಾರ್ಮಿಕ ಮುಖಂಡರು ತತ್ವ ಬೋಧನೆಗಳನ್ನು ಮಾತ್ರ ಮಾಡುತ್ತಾರೆ. ಅನುಸರಣೆ ಮರೆತಂತಹ ಬೋಧನೆ. ಹಾಗಾಗಿ ಬದುಕು ಬಂಡಾಟದ ಬದುಕು. ಅವಲೋಕನೆಗೆ ಅವಕಾಶವಾಗುತ್ತಿಲ್ಲ. ಅಂತರ್ಮುಖಿ ಸಾಧನೆಗೆ ಅವಕಾಶಗಳು ಸಿಗುತ್ತಿಲ್ಲ ಎಂದರು.

ಶರಣರ ಕಾಯಕ ತತ್ವ ನಮಗೆ ಮುಖ್ಯವಾಗಬೇಕು. ಇಂದು ಜನರು ಭೌತಿಕತೆಯನ್ನು ಆಸ್ವಾದಿಸುತ್ತಿದ್ದಾರೆ. ಆದರೆ ಶರಣರಂತೆ ಸತ್‍ಚಿಂತನೆ ಮಾಡಬೇಕಿದೆ. 

ಧ್ಯಾನಾಸಕ್ತ ಸ್ಥಿತಿಯಲ್ಲಿ ಕಾಯಕ ಮಾಡಬೇಕು. ಮೊದಲು ಆಂತರ್ಯದಲ್ಲಿ ಶ್ರದ್ಧೆ ಇರಬೇಕು. ಹಾಗಾಗಿ ಕೆಲವರ ಕಾರ್ಯಗಳು ಸಮರ್ಪಕವಾಗುವುದಿಲ್ಲ. ಧ್ಯಾನಾಸಕ್ತ ಸ್ಥಿತಿ ಎಂದರೆ ಜಾಗೃತ ಸ್ಥಿತಿ. ಜಾಗೃತಿ ನಿರಂತರವಾಗಿರಬೇಕು. ಸನ್ಯಾಸಿಯಾಗಿರಲಿ, ಸಂಸಾರಿಯಾಗಿರಲಿ ಲೌಕಿಕ, ಅಲೌಕಿಕದ ನಡುವೆ ಸೇತುವೆಯಾಗಬೇಕು. 

ಅಧ್ಯಾತ್ಮ ಬೌದ್ಧಿಕವಾದ ಸಾಧನೆ. ಜೀವನ ಜ್ಯೋತಿಗೆ ಇರಬಹುದಾದ ಮಂಕನ್ನು ತೆಗೆಯುವ ಕಾರ್ಯವನ್ನು ಪರಮಾರ್ಥ ಮಾಡುತ್ತದೆ. ಅದುವೇ ಪರಮಾರ್ಥ ಪ್ರಕಾಶ ಎಂದು ನುಡಿದರು.

error: Content is protected !!