ಭಾರತ ಬರೀ ಹೆಸರಲ್ಲ, ಜ್ಞಾನಪ್ರಕಾಶದ ದ್ಯೋತಕ

ಭಾರತ ಬರೀ ಹೆಸರಲ್ಲ, ಜ್ಞಾನಪ್ರಕಾಶದ ದ್ಯೋತಕ

ಬಿಐಇಟಿ ಉಪನ್ಯಾಸದಲ್ಲಿ  ಹೆಚ್‌ಬಿಎಂ

ದಾವಣಗೆರೆ, ಮಾ. 6-  ಭಾರತ ಎಂಬುದು ಕೇವಲ ಒಂದು  ದೇಶದ ಹೆಸರಲ್ಲ, ಇದು ಜ್ಞಾನವನ್ನು ಪ್ರೀತಿಸುವ, ಆರಾಧಿಸುವ ಧ್ಯೋತಕವಾಗಿದೆ ಎಂದು ಹಿರಿಯ ಪತ್ರಕರ್ತ ಎಚ್. ಬಿ. ಮಂಜುನಾಥ ಹೇಳಿದರು. 

ಅವರು ನಗರದ ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ಎಸ್.ಎಸ್. ಮಲ್ಲಿಕಾರ್ಜುನ್‌ ಸಾಂಸ್ಕೃತಿಕ ಕೇಂದ್ರದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ನಿರ್ದೇಶನದ ಮೇರೆಗೆ ನೆರವೇರಿದ ಭಾರತೀಯ ಜ್ಞಾನ ವಿಧಾನದಲ್ಲಿ ವೇದಗಳ ಸಮಗ್ರತೆ ಎಂಬ ವಿಷಯವಾಗಿ ಮಾತನಾಡುತ್ತಾ `ಭ’ ಎಂದರೆ `ಬೆಳಕು’, `ರತಿ’ ಅಥವಾ `ರತ’ ಎಂದರೆ ಪ್ರೀತಿಸುವುದು, `ಭಾರತ’ ಎಂದರೆ ಜ್ಞಾನ ಪ್ರಕಾಶವನ್ನು ಗೌರವಿಸುವುದು ಎಂದು ಆಗುತ್ತದೆ. 

ವಿಶ್ವದ ಅತ್ಯಂತ ಪ್ರಾಚೀನ ವೇದ ವೇದಾಂತಗಳು ಜೀವ ಜಗತ್ತಿನ ಸ್ವಾಸ್ಥ್ಯದ ಕುರಿತಾಗಿ ಕರ್ಮಕಾಂಡ ದಲ್ಲಿಯೂ ಜೀವನ್ಮುಕ್ತಿಯ ಬಗ್ಗೆ ಜ್ಞಾನ ಕಾಂಡದಲ್ಲಿಯೂ ಹೇಳಿದ್ದು ಮತ ಭೇದವಿಲ್ಲದೆ ಎಲ್ಲರಿಗೂ ಇದು ಅನ್ವಯ ಯೋಗ್ಯವಾಗಿದೆ ಎಂಬುದನ್ನು ಸ್ವಾರಸ್ಯಕರ ಉದಾಹರಣೆಗಳ ಮೂಲಕ ಪ್ರತಿಪಾದಿಸಿದರು. 

ಪರಿಪೂರ್ಣ ಅಸ್ತಿತ್ವವು `ಸತ್’ ಆದರೆ ಪರಿಪೂರ್ಣ ಅರಿವು `ಚಿತ್’ ಆಗುತ್ತದೆ, ಪರಿಪೂರ್ಣ ಅನುಭವವು `ಆನಂದ’ವಾಗುತ್ತದೆ, ಈ ಸತ್ ಚಿತ್ ಆನಂದವೇ `ಸಚ್ಚಿದಾನಂದ’, ಇದು ವೇದಾದಿ ಸನಾತನ ಸಾಹಿತ್ಯಗಳ ಅಧ್ಯಯನದಿಂದ ಸಾಧ್ಯ, ಸನಾತನ ಎಂದರೆ ಪ್ರಾಚೀನ ವಾದದ್ದು, ಶಾಶ್ವತವಾದದ್ದು ಎಂದರ್ಥವೆಂದರು. 

ಕಾಲೇಜಿನ ನಿರ್ದೇಶಕ ಪ್ರೊ. ವೈ.ವೃಷಭೇಂದ್ರಪ್ಪ ನವರ  ಉಪಸ್ಥಿತಿಯಲ್ಲಿ ನಡೆದ ಉಪನ್ಯಾಸ  ಕಾರ್ಯಕ್ರ ಮದಲ್ಲಿ ಶ್ರೀನಿಧಿ ಕುಲಕರ್ಣಿ ಸ್ವಾಗತಿಸಿದರು. ಸಂಜನಾ ಪರಿಚಯಿಸಿದರು. ಜವಳಿ ವಿಭಾಗದ ಪ್ರಾಧ್ಯಾಪಕ ಎಸ್.ಎಮ್.ಚಂದ್ರಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

error: Content is protected !!